Tuesday, June 30, 2026

ಉದ್ಯೋಗ ನಷ್ಟ ಮತ್ತು ನಿರ್ವಹಣೆ

ಉದ್ಯೋಗ ನಷ್ಟ, ಸಿದ್ಧತೆ  ಮತ್ತು ನಿರ್ವಹಣೆ 





           ಜೀವನದಲ್ಲಿ ನಮಗೆ, ನಮ್ಮ ಕುಟುಂಬಕ್ಕೆ ಬೇಕಾದ ಎಲ್ಲಾ ಅಗತ್ಯ ವಸ್ತುಗಳು, ಸೇವೆಗಳು, ನಾವು ಈಡೇರಿಸುವ ಆಸೆಗಳು ಪ್ರತಿಯೊಂದಕ್ಕೂ ಹಣ ಬೇಕೇ ಬೇಕು. ಸಾಮಾನ್ಯವಾಗಿ ಕುಟುಂಬಕ್ಕೆ ಒಂದು ಅಥವಾ ಎರಡು ಆದಾಯದ ಮೂಲಗಳು ಇರುತ್ತವೆ. ಒಂದು ವೇಳೆ ಒಂದೇ ಆದಾಯದ ಮೂಲವಿದ್ದು ಅದು ನಿಂತು ಹೋದರೆ, ಆ ಇಡೀ ಕುಟುಂಬ ಆರ್ಥಿಕ ಸಂಕಷ್ಟಕ್ಕೆ ಒಳಗಾಗಿ ಯಾವುದೇ ಅಗತ್ಯ ಸೇವೆಗಳು, ಉತ್ಪನ್ನಗಳನ್ನು ಬಳಸಲಾಗದೆ  ನರಳುತ್ತಾರೆ. ಇದು ತುಂಬಾ ಆತಂಕಕಾರಿ ಪರಿಸ್ಥಿತಿ ಹಾಗೂ ಇದು ನೋವಿನಿಂದ ಕೂಡಿರುತ್ತದೆ. ಅಲ್ಲದೆ ಇದರಿಂದ ಅನೇಕ ತರಹದ ಸಮಸ್ಯೆಗಳನ್ನು ಕುಟುಂಬವು ಎದುರಿಸಬೇಕಾಗುತ್ತದೆ. ಹೀಗಾಗಿ ಯಾವ ರೀತಿಯ ಸಮಸ್ಯೆಗಳು ತಲೆದೋರುತ್ತವೆ, ಈ ಸಮಸ್ಯೆಗಳನ್ನು ತಡೆಯಲು ಸಾಧ್ಯವೇ, ಈ ಸಮಸ್ಯೆಗಳನ್ನು ಬಂದಾಗ ಹೇಗೆ ನಿಭಾಯಿಸಬಹುದು ಎಂದು ತಿಳಿಯೋಣ. 

ಸಾಮಾನ್ಯವಾಗಿ ಉದ್ಯೋಗ ಕಳೆದುಕೊಂಡರೆ ಜನರು ಈ ಕೆಳಗಿನ ಸಮಸ್ಯೆಗಳನ್ನು ಅನುಭವಿಸುತ್ತಾರೆ.

1.  ದೊಡ್ಡ ಆಘಾತವಾಗುತ್ತದೆ ಹಾಗೂ ಭವಿಷ್ಯದ ಬಗ್ಗೆ ಆತಂಕ,  ಭಯ ಮನೆ ಮಾಡುತ್ತದೆ 
2.  ಮನೆಯವರಲ್ಲಿಯೂ ಚಿಂತೆ ಶುರುವಾಗುತ್ತದೆ  ಹಾಗೂ ಮನಸ್ಸು ದುರ್ಬಲಗೊಳ್ಳುತ್ತದೆ. 
3.  ನಿಮ್ಮ ಬಂಧುಮಿತ್ರರು ನೀವು ಎಲ್ಲಿ ದುಡ್ಡು ಕೇಳುತ್ತೀರೋ ಎಂದು ಅಂತರ ಕಾಪಾಡಿಕೊಳ್ಳುತ್ತಾರೆ.
4.  ಸಾಲಕೊಟ್ಟ ಬ್ಯಾಂಕ್ ಗಳು, ಸಾಲದಾತರು ಮನೆಗೆ ಬಂದು ಒತ್ತಡ ಹೇರುವ ಆತಂಕ.  
5.  ಉಳಿತಾಯದ ಹಣವೆಲ್ಲ ಕಳೆದುಕೊಂಡು ಹಣವಿಲ್ಲದೆ ಅಕೌಂಟು ಮತ್ತು ಜೇಬು ಖಾಲಿಯಾಗುತ್ತದೆ .
6.  ಹಣಕ್ಕಾಗಿ  ಮನುಷ್ಯ ಹತಾಶನಾಗುತ್ತಾನೆ ಹಾಗೆಯೇ ಬಗ್ಗಲು ಪ್ರಾರಂಭಿಸುತ್ತಾನೆ.
6.  ಉದ್ಯೋಗದ ಹುಡುಕಾಟದಲ್ಲಿ ಕಡಿಮೆ ಸಂಬಳಕ್ಕೆ ರಾಜಿ ಮಾಡಿಕೊಳ್ಳುವ ಮನಸ್ಥಿತಿ.
7.  ಉದ್ಯೋಗಕ್ಕಾಗಿ ಪರ ಊರಿಗೆ, ಪರ ರಾಜ್ಯ ಅಥವಾ ದೇಶಕ್ಕೆ ವಲಸೆ ಹೋಗುವ ಪರಿಸ್ಥಿತಿ. 

    ಖಾಸಗಿ ಸಂಸ್ಥೆಗಳಲ್ಲಿ ಉದ್ಯೋಗಿಯನ್ನು ಕೆಲಸದಿಂದ ಕೈ ಬಿಡುವಾಗ ಎಷ್ಟೋ ಬಾರಿ ಯಾವುದೇ ಎಚ್ಚರಿಕೆ ಅಥವಾ ಮುಂಚಿತ ವಾದ ಸೂಚನೆ ಕೊಡದೆ ಉದ್ಯೋಗದಿಂದ ವಜಾ ಮಾಡುತ್ತಾರೆ. 
ಕಂಪನಿಗಳು ಇದರಿಂದ ಉದ್ಯೋಗಿಯು ಅನುಭವಿಸಬೇಕಾದ ಕಷ್ಟ ನಷ್ಟಗಳನ್ನು ಪರಿಗಣಿಸುವುದಿಲ್ಲ. ಅವರು ಕೇವಲ ತಮ್ಮ ವ್ಯವಹಾರಕ್ಕೆ ಆಗುವ ಅನುಕೂಲ ಮತ್ತು ಲಾಭಗಳನ್ನು ನೋಡಿಕೊಳ್ಳುತ್ತಾರೆ. ಉದ್ಯೋಗ ಪಡೆಯುವುದು, ಅದರಲ್ಲಿ ಮುಂಬಡ್ತಿ ಪಡೆದು ಉನ್ನತ ಹುದ್ದೆಗೆ ಏರುವುದು, ಹಣ ಸಂಪಾದನೆ, ಅದರಿಂದ ಜೀವನ ನಿರ್ವಹಣೆ, ಉದ್ಯೋಗವನ್ನು ಉಳಿಸಿಕೊಳ್ಳುವುದು ಇವೆಲ್ಲವೂ ಉದ್ಯೋಗಿಯ ಜವಾಬ್ದಾರಿಯೇ ಹೊರತು ಕಂಪನಿಗಳದಲ್ಲ. ಆದುದರಿಂದ ಈ ಮೇಲೆ ಹೇಳಿದ ಎಲ್ಲಾ ಕೆಲಸಗಳು ನೀವು ಜವಾಬ್ದಾರಿ ಹೊತ್ತು ಪೂರ್ವ ಯೋಜನೆಯಿಂದ ಪಡೆಯಬೇಕೆ ಹೊರತು, ಸಂಸ್ಥೆಗಳು, ಅಥವಾ ಮತ್ತೋರ್ವ ವ್ಯಕ್ತಿ ನಿಮಗೆ ಮಾಡಲಾರ. ಆದುದರಿಂದ ನಾವು ಜವಾಬ್ದಾರಿ ಹೊತ್ತು ಯೋಚಿಸಿ ಯೋಜಿಸಿ ಪೂರ್ವ ಸಿದ್ಧತೆ ಮಾಡಿ ಇದನ್ನು ಸಮರ್ಥವಾಗಿ ನಿರ್ವಹಿಸಬೇಕು. 

    ರಕ್ಷಣಾ ಬಲೆಯ  ಪೂರ್ವಸಿದ್ಧತೆ:
     ಉದ್ಯೋಗ ನಷ್ಟ ಅಥವಾ ಆದಾಯ ನಷ್ಟ ದಂತಹ ಸಂದರ್ಭಗಳಿಗೆ ನಾವು ಪೂರ್ವ ಸಿದ್ಧತೆ ಮಾಡಿಕೊಳ್ಳಬೇಕು. ಇದು ವ್ಯಕ್ತಿಯಿಂದ ವ್ಯಕ್ತಿಗೆ, ಅವರು ಹೊತ್ತಿರುವ ಜವಾಬ್ದಾರಿಯಿಂದ ಜವಾಬ್ದಾರಿಗೆ ಬದಲಾಗುತ್ತದೆ. ಆದುದರಿಂದ ಅದನ್ನು ಈ ಕೆಳಕಂಡಂತಹ ಮಾರ್ಗದರ್ಶನದಲ್ಲಿ ಗುರುತಿಸಬೇಕು.

   1. ಒಂದು ವೇಳೆ ಗಂಡ ಹೆಂಡತಿ ಇಬ್ಬರು ದುಡಿಯುತ್ತಿದ್ದರೆ ನಿಮಗೆ ಈಗಾಗಲೇ ಮತ್ತೊಂದು ಆದಾಯವಿದ್ದು ತುಂಬಾ ಚಿಂತಿಸುವ ಅವಶ್ಯಕತೆ ಇರುವುದಿಲ್ಲ. ಒಂದು ವೇಳೆ ನಿಮ್ಮ ಸಂಗಾತಿಯ ಆದಾಯ ತುಂಬಾ ಚೆನ್ನಾಗಿದ್ದು ನಿಮ್ಮ ತಿಂಗಳ ಎಲ್ಲಾ ಖರ್ಚು ವೆಚ್ಚಗಳನ್ನು ಬರಿಸುವ ಶಕ್ತಿ ಹೊಂದಿದ್ದಾರೆ,  ನೀವು 6 ತಿಂಗಳವರೆಗಿನ ಎಲ್ಲಾ ಖರ್ಚುವೆಚ್ಚಗಳನ್ನು ಲೆಕ್ಕ ಹಾಕಿ ಅದನ್ನು ಒಂದು ತುರ್ತು ನಿಧಿಯಾಗಿ ಅಥವಾ ಉದ್ಯೋಗ ನಷ್ಟ ನಿಧಿಯಾಗಿ ಕೂಡಿಡಬೇಕು. ಒಂದು ವೇಳೆ ನಿಮ್ಮ ಸಂಗಾತಿಯ ಆದಾಯ ನಿಮ್ಮ ಎಲ್ಲಾ ಖರ್ಚುವೆಚ್ಚಗಳನ್ನು ಭರಿಸುವ ಶಕ್ತಿಯನ್ನು ಹೊಂದಿಲ್ಲ ವಾದರೆ ನೀವು 9 ತಿಂಗಳ ಸಂಪೂರ್ಣ ಖರ್ಚುವೆಚ್ಚಗಳನ್ನು ತುರ್ತು ನಿಧಿಯಾಗಿ ಕೂಡಿಡಬೇಕು.

2. ಒಂದು ವೇಳೆ ನೀವೊಬ್ಬರೇ ದುಡಿಯುವ ವ್ಯಕ್ತಿಯಾಗಿದ್ದು ನಿಮ್ಮ ಇಡೀ ಕುಟುಂಬ ನಿಮ್ಮ ಆದಾಯದ ಮೇಲೆ ಅವಲಂಬಿತವಾಗಿದ್ದರೆ, ನೀವು ಕನಿಷ್ಠಪಕ್ಷ ಒಂದು ವರ್ಷದ ಸಂಪೂರ್ಣ ಖರ್ಚು ವೆಚ್ಚಗಳನ್ನು ಭರಿಸುವಷ್ಟು ಹಣವನ್ನು ತುರ್ತು ನಿಧಿಯಾಗಿ ಅಥವಾ ಉದ್ಯೋಗ ನಷ್ಟ ನಿಧಿಯಾಗಿ ಕೂಡಿಡಬೇಕು. ಈ ನಿಧಿಯಲ್ಲಿ ನಿಮ್ಮ ಎಲ್ಲಾ ಸಾಲದ ಕಂತುಗಳನ್ನು ತುಂಬುವಷ್ಟು ಹಣವಿರಬೇಕು. 

3. ನೀವು ನಿಮ್ಮ ಹಣದ ಖರ್ಚು ವೆಚ್ಚದ ಅನುಸರಣೆ (ಟ್ರಾಕಿಂಗ್) ಮಾಡಿ ಅದರಲ್ಲಿ ನಿಮ್ಮ ಅಗತ್ಯಗಳು ಯಾವುದು ಹಾಗೂ ಆಸೆಗಳು ಯಾವುದು ಎಂದು ಪೂರ್ವ ಸಿದ್ಧತೆಯ ಭಾಗವಾಗಿ ಗುರುತಿಸಿ ಇಟ್ಟಿರಬೇಕು. ಇದರಿಂದ ಉದ್ಯೋಗ ನಷ್ಟದ ನಂತರ ಕೇವಲ ಅಗತ್ಯಗಳ ಪೂರೈಕೆಗೆ ಮಾತ್ರ ಖರ್ಚುಗಳನ್ನು ಮಾಡಿಕೊಂಡು, ಆಸೆಗಳನ್ನು ತಾತ್ಕಾಲಿಕವಾಗಿ ತಡೆಹಿಡಿಯಬಹುದು ಇದರಿಂದ ಮನೆ ನಡೆಸುವ ಖರ್ಚು ವೆಚ್ಚಗಳಲ್ಲಿ ಸುಧಾರಣೆಯಾಗುತ್ತದೆ. 

4. ಕಾರ್ಪೊರೇಟ್ ಕಂಪನಿ ಉದ್ಯೋಗಿಗೆ ಕೊಡುವ ಆರೋಗ್ಯ ವಿಮೆಯನ್ನು ಹೊರತುಪಡಿಸಿ, ನೀವು ನಿಮ್ಮದೇ ಸ್ವಂತದ್ದಾದ ಕೌಟುಂಬಿಕ ಆರೋಗ್ಯ ವಿಮೆಯನ್ನು ಹೊಂದಿರಬೇಕು. ಇದು ಇಂತಹ ಸಂದರ್ಭಗಳಲ್ಲಿ ರಕ್ಷಣಾ ಬಲೆಯಾಗಿ ನಿಮ್ಮನ್ನು ಕಾಪಾಡುತ್ತದೆ.

5. ಚಿಕ್ಕಪುಟ್ಟ ಸಾಲಗಳನ್ನು ಆದಷ್ಟು ಬೇಗ ತೀರಿಸಬೇಕು. ದೀರ್ಘ ಕಾಲಿನ ಸಾಲಗಳಾದ  ಗೃಹ ಸಾಲದಂತಹ ಸಾಲಗಳನ್ನು ಆಗಾಗ ಭಾಗಶಃ ಮರುಪಾವತಿಸಿ ಸಾಲದ ಕಂತನ್ನು ಕಡಿಮೆ ಮಾಡುತ್ತಾ ಬರಬೇಕು, ಇದರಿಂದ ಕಂತಿನ ಹೊರೆ ಕಡಿಮೆಯಾಗುತ್ತದೆ. ಸಾಲದ ನಿರ್ವಹಣೆಯ ಹೊರೆ ಕಡಿಮೆಯಾಗುತ್ತದೆ. 

ಉದ್ಯೋಗ ನಷ್ಟವಾದರೆ ನಿರ್ವಹಣಾ ಮಾರ್ಗ:
     ಉದ್ಯೋಗ ನಷ್ಟವಾದರೆ ಅದು ಮುಂಚಿತವಾಗಿ ಸೂಚನೆ ಕೊಡದೆ ತೆಗೆದುಹಾಕುತ್ತಾರೆ. ಇದರಿಂದ ಉದ್ಯೋಗಿಗೆ ಹಾಗೂ ಅವರ ಕುಟುಂಬಕ್ಕೆ ದೊಡ್ಡ ಆಘಾತವಾಗುತ್ತದೆ.  ಇತ್ತೀಚಿಗೆ ಇದನ್ನು ಪತ್ರಿಕೆಯಲ್ಲಿ ಅಥವಾ ಅಂತರ್ಜಾಲದಲ್ಲಿ ಸಾಕಷ್ಟು ಬಾರಿ ಕೇಳಿದ್ದೇವೆ. ಇಂತಹ ಸಂದರ್ಭದಲ್ಲಿ ಏನು ಮಾಡಬಹುದು ಎಂದು ತಿಳಿಯೋಣ. 

  1. ಉದ್ಯೋಗ ನಷ್ಟವಾದಾಗ ಉದ್ಯೋಗಿ ಮತ್ತು ಕುಟುಂಬದವರು ಧೃತಿ ಕೆಡಬಾರದು, ಧೈರ್ಯವನ್ನು ತಂದುಕೊಳ್ಳಬೇಕು ಹಾಗೂ ಬಾವುಕರಾಗದೆ, ಸಮಚಿತ್ತರಾಗಿ ವಾಸ್ತವದ ನೆಲೆಗಟ್ಟಿನಲ್ಲಿ ನಡೆದ ಘಟನೆಯನ್ನು ಒಪ್ಪಿಕೊಳ್ಳಬೇಕು. ನಂತರ ಮುಂದಿನ ಯಾವ ಕ್ರಮಗಳನ್ನು ಕೈಗೊಳ್ಳಬೇಕು ಎಂದು ದಂಪತಿಗಳಿಬ್ಬರು ಚರ್ಚಿಸಿ ನಿರ್ಧರಿಸಿ ಕೆಲಸಗಳನ್ನು ಮಾಡುತ್ತಾ ಹೋಗಬೇಕು. 

2. ಒಂದನ್ನು ನೆನಪಿಟ್ಟುಕೊಳ್ಳಿ ಇದೊಂದು ತಾತ್ಕಾಲಿಕ ಕಷ್ಟ, ಇದನ್ನು ಸಮರ್ಥವಾಗಿ ಎದುರಿಸಿದರೆ ಕಾಲಕ್ರಮೇಣ ಹೊಸ ಹಾಗೂ ಉತ್ತಮ ಉದ್ಯೋಗ ಲಭಿಸಿ ಸಮಸ್ಯೆಗಳೆಲ್ಲ ಪರಿಹಾರವಾಗುತ್ತದೆ.

3. ಮನೆಯ ಎಲ್ಲಾ ಕುಟುಂಬ ವರ್ಗದವರಿಗೆ ಈ ಪರಿಸ್ಥಿತಿಯನ್ನು ತಿಳಿಸಿ, ಸವಾಲಿನ ಅರಿವು ಮೂಡಿಸಿ, ಎಲ್ಲರೂ ಸಹಕರಿಸಿ ಸಂದರ್ಭವನ್ನು ಎದುರಿಸಬೇಕೆಂದು ಮನದಟ್ಟು ಮಾಡಿಸಿ. 

4. ಈ ಮುಂಚೆ ಅಗತ್ಯ ಮತ್ತು ಆಸೆಗಳ ಪಟ್ಟಿಯನ್ನು ಮಾಡಿದಂತೆ, ನೀವು ನಿಮ್ಮ ಅಗತ್ಯಗಳನ್ನು ಮಾತ್ರ ಪೂರೈಕೆ ಮಾಡಿ, ನಿಮ್ಮ ಆಸೆಗಳನ್ನು ತಾತ್ಕಾಲಿಕವಾಗಿ ಮುಂದೂಡಿ ನಿಮ್ಮ ಖರ್ಚುಗಳನ್ನು ಕಡಿಮೆ ಮಾಡಿ  ನಿಯಂತ್ರಿಸಬೇಕು.

5. ಇದು ವಿಭಿನ್ನ ಸಂದರ್ಭ ವಾಗಿರುವುದರಿಂದ ದಂಪತಿಗಳಿಬ್ಬರೂ ಸೇರಿ ಹೊಸ ಬಜೆಟ್ ಅನ್ನು ರೂಪಿಸ ಬೇಕು ಹಾಗೂ ಪಾಲಿಸಬೇಕು. ಇದರಿಂದ ಯಾವ ಅವಶ್ಯಕತೆಗಳಿಗೆ ಆದ್ಯತೆಗಳನ್ನು ಕೊಟ್ಟು ಪೂರೈಸಬೇಕು ಎಂದು ತಿಳಿದು ಬರುತ್ತದೆ ಹಾಗೂ ಅದನ್ನು ಪಾಲಿಸಲು ಕುಟುಂಬದವರ ಸಹಕಾರ ದೊರೆಯುತ್ತದೆ. ಬಜೆಟ್ ನಲ್ಲಿ, ರಕ್ಷಣಾ ಬಲೆಯಾದ ಆರೋಗ್ಯ ವಿಮೆಯನ್ನು ಮುಂದುವರಿಸಬೇಕು. 

6. ಮನೋರಂಜನೆಯಂತಹ ಸಣ್ಣ ಪುಟ್ಟ ಆಸೆಗಳನ್ನು ಈಡೇರಿಸಿಕೊಳ್ಳಲು ಕಡಿಮೆ ವೆಚ್ಚದ ಆಯ್ಕೆಗಳನ್ನು ಮಾಡಿ  ಮನೋರಂಜನೆಯಿಂದ  ಮಾನಸಿಕ ಸಮತೋಲನವನ್ನು ಕಾಯ್ದಿರಿಸಿಕೊಳ್ಳಲು ಸಹಾಯವಾಗುತ್ತದೆ. 

7. ಖರ್ಚು ಮಾಡುವಾಗ ಬುದ್ಧಿವಂತಿಕೆಯನ್ನು ಉಪಯೋಗಿಸಿ.  ನಿಜವಾಗಲೂ ಅವಶ್ಯಕತೆ ಇದೆಯೇ, ಇದನ್ನು ಬಳಸುತ್ತೇನೆಯೇ? ಮಾರಾಟಗಾರನ ಒತ್ತಡಕ್ಕೂ, ಆತ ಮನವೊಲಿಸುತ್ತಿದ್ದಾನೆ ಎಂದೋ ಅನಾವಶ್ಯಕವಾಗಿ ಖರ್ಚು ಮಾಡಬೇಡಿ. ಕೊಳ್ಳುವಾಗ ಸ್ವಲ್ಪ ಚೌಕಾಸಿ ಮಾಡಿ. 



ಉದ್ಯೋಗದ ಹುಡುಕಾಟ:

1. ಒಂದು ಉತ್ತಮ ವೃತ್ತಿ ವಿವರವುಳ್ಳ ರೆಸ್ಯುಮೆಯನ್ನು ಹಾಗೂ ಅರ್ಜಿ ಪತ್ರವನ್ನು ( ಕವರ್ ಲೆಟರ್ ) ಸಿದ್ಧಪಡಿಸಿ. ಇದು ಅರ್ಜಿ ಸಲ್ಲಿಸುವ ಕೇಳಿದ ಉದ್ಯೋಗದ ಕೌಶಲ್ಯಕ್ಕೆ ತಕ್ಕಂತೆ ಅಭಿವೃದ್ಧಿಪಡಿಸಬೇಕು. 
 
2. ಹೊಸ ಉದ್ಯೋಗಕ್ಕಾಗಿ ನಿಮ್ಮ ಉದ್ಯೋಗ ರಂಗದ ಆಧುನಿಕ ಹಾಗೂ ಮುಂದುವರೆದ    ಕೌಶಲ್ಯಗಳನ್ನು, ಪರಿಣಿತಿಯನ್ನು ಅಭಿವೃದ್ಧಿ ಪಡಿಸಿಕೊಳ್ಳಿ. 

3. ನಿಮ್ಮ ಉದ್ಯೋಗಕ್ಕೆ ಸಂಬಂಧಪಟ್ಟ ಪುಸ್ತಕಗಳನ್ನು, ಬರಹಗಳನ್ನು ಓದಿ ಸಂಗ್ರಹಿಸಿ ಇಟ್ಟುಕೊಳ್ಳಿ.     ಟಿಪ್ಪಣಿ ಬರಹಗಳನ್ನು ಬರೆದಿಟ್ಟುಕೊಳ್ಳಿ.  

4. ಉದ್ಯೋಗ ಹುಡುಕಲು  ನೆಟ್ ವರ್ಕಿಂಗ್ ಬಹಳ ಸಹಾಯಕಾರಿ ಆದುದರಿಂದ ನೀವು ಹಳೆಯ ಸ್ನೇಹಿತರು, ಸಹೋದ್ಯೋಗಿಗಳು, ವೃತ್ತಿಪರ ಗುಂಪುಗಳೊಂದಿಗೆ ಸಂಪರ್ಕದಲ್ಲಿರಿ ಹಾಗೂ ಉದ್ಯೋಗ, ಮುಂದುವರೆದ ಕೌಶಲ್ಯದ ಮಾಹಿತಿಯನ್ನು ಪಡೆಯುತ್ತೀರಿ. 

5. ವಿಶೇಷವಾಗಿ ಉದ್ಯೋಗದ ಸಂದರ್ಶನಕ್ಕಾಗಿ ಪ್ರಶ್ನೋತ್ತರಗಳ ಸಿದ್ಧತೆಯನ್ನು ಮಾಡಿಕೊಳ್ಳಿ. 

6. ನಿಮ್ಮ ವ್ಯಕ್ತಿತ್ವದಲ್ಲಿ ಕೊರತೆ ಇದ್ದಲ್ಲಿ ನೀವು ವ್ಯಕ್ತಿತ್ವ ವಿಕಸನಕ್ಕೆ ಆದ್ಯತೆ ಕೊಟ್ಟು ನಿಮ್ಮ ಸಂವಹನ ಚಾತುರ್ಯ, ನಾಯಕತ್ವದ ಗುಣಗಳು, ಆತ್ಮವಿಶ್ವಾಸವನ್ನು ಬೆಳೆಸಿಕೊಳ್ಳಲು ಸಾಫ್ಟ್ ಸ್ಕಿಲ್ ಗಳನ್ನು ಕಲಿಯಬೇಕು. 

7. ಹೊಸ ಉದ್ಯೋಗ ಸಿಗುವ ತನಕ ಫ್ರೀ ಲ್ಯಾನ್ಸಿನ್ಗ್, ಅರೆಕಾಲಿಕ ಉದ್ಯೋಗವನ್ನು ಪರಿಗಣಿಸಿ. 


No comments:

Post a Comment