Thursday, April 15, 2010

ಹೀಗೆ ಆಗಿದ್ದಿದ್ದರೆ

ಹೀಗೆ ಆಗಿದ್ದಿದ್ದರೆ

ಮನಸು ಗರಿಗೆದರಿತು ಆಕೆಯ
ನೋಡಿ

ಆಗಬೇಕನಿಸಿತು ನಾವಿಬ್ಬರು
ಜೋಡಿ

ಮಾತಾಡಿಸಿ, ನಗಿಸಿ ಮಾಡಿದೆ
ಮೋಡಿ

ನಂತರ ಪ್ರೇಮದ ಸಿಗ್ನಲ್ ಕೊಟ್ಟೆ
ನೋಡಿ

ಮೊದಲು ನಂಬಲಿಲ್ಲ ಪರೀಕ್ಷಿಸಿದಳು
ನಾಟಕವಾಡಿ

ನಿಧಾನವಾಗಿ ತೆಕ್ಕೆಗೆ ಬಿದ್ದಳು ಮನಸು
ಮಾಡಿ

ಕುಣಿದೆವು ಕೆಲ ದಿನ ಬಾನಂಗಳದಿ
ಹಾರಾಡಿ

ಸಿಕ್ಕಿ ಬಿದ್ದೆವು ಮನೆಯಲ್ಲಿ, ಎಲ್ಲೆಡೆ
ತಿರುಗಾಡಿ

ಮದುವೆಗೆ ಒಪ್ಪಿಸಿದೆವು ಮನೆಯಲ್ಲಿ
ಹೋರಾಡಿ

ಈಗ ಉಂಟು ಮಕ್ಕಳೆರಡು ಅಂಗಳದಿ
ಆಟವಾಡಿ

- ತೇಜಸ್ವಿ .ಎ.ಸಿ

Friday, April 9, 2010

ಯಾರಿವನು ಸಿಂಹ

ಯಾರಿವನು ಸಿಂಹ

ನೆನೆಪಿದೆ ನನಗೆ ಆ ನಸುಗೆಂಪು ಸಂಜೆ
ಅಂದು ಇತ್ತು ನನಗೆ ಭಾನುವಾರದ ರಜೆ

ಅದು ಅಂದು ಆಗಿತ್ತು ತುಂಟ ಪುಟ್ಟ ಕಂದ
ಕೆಂಪು ರಿಬ್ಬನ್ ಕಟ್ಟಿಕೊಂಡು ಕಂಡಿತ್ತು ಚೆಂದ

ತುಂಟ ಕುನ್ನಿಯ ಕಣ್ಣಿನಲ್ಲಿ ಕಾಣುತ್ತಿತ್ತು ಅರ್ಧ ಚಂದ್ರ
ಅವನನ್ನು ಹೊತ್ತು ತರಲು ಪೆಟ್ಟಿಗೆಯಲ್ಲಿ ಮಾಡಿದ್ದೆ ರಂದ್ರ

ಆ ಪುಟ್ಟ ಶ್ವಾನಕೆ ಅವರು ಹಾಕಿದ್ದರು ಆನೆಯ ಸರಪಳಿ
ಆ ಕುನ್ನಿಯು ಬಂದಿತು ಮನೆಗೆ ಆಗಿ ಪುಟ್ಟ ಬಳುವಳಿ

ಪುಟ್ಟ ಕುನ್ನಿಯ ತುಂಟಾಟ ಅಂದು ಗಳಿಸಿತ್ತು ಎಲ್ಲರ ಪ್ರೀತಿ
ಅವನು ಮಾಡುತ್ತಿದ್ದ ನಾಯಿಗಳ ಬೇಟೆ ಪಡೆದಿತ್ತು ಮನೆಯಲ್ಲಿ ಖ್ಯಾತಿ

ಶಾಲೆಗೆ ಹೋಗುವ ಮಕ್ಕಳನ್ನು ಹೆದರಿಸುತ್ತಿದ್ದ ಬೊಗಳಿ
ಕುಣಿದು ಬೊಗಳಿ ಕೆಸರು ಮಾಡುತ್ತಿದ್ದ ನಮ್ಮ ಮನೆಯ ಜಗುಲಿ

ವಾಕಿಂಗ್ ಎಂದು ಹೋಗುವಾಗ ಮುಖದಲ್ಲಿರಿತ್ತಿತ್ತು ಸಿಂಹದ ಠೀವಿ
ರಸ್ತೆಯ ಹಂದಿ, ನಾಯಿಗಳಿಗೆ ಸದಾ ಆಗಿರುತ್ತಿದ್ದ ಬೇಟೆಯ ಕೋವಿ

ನಮ್ಮ ಮನೆಯ 'ನಂದು'ವನ್ನು ಸಾಕಿದ್ದೇವೆ ಸಿಂಹದ ಧಾಟಿ
ಎಂದೂ ಕಳ್ಳರನ್ನು ಬಿಡಲಿಲ್ಲ ಅದು ಹೋಗಲು ತನ್ನನು ದಾಟಿ

- ತೇಜಸ್ವಿ .ಎ.ಸಿ

Thursday, April 1, 2010

ಬಿದ್ದ ಅವನು ಜಾರಿ

  ಬಿದ್ದ ಅವನು ಜಾರಿ

  ಪ್ರೇಮ ನಿವೇದಿಸಬೇಕೆಂದ
  ಸೂರಿ

  ಬೀಳ ಬೇಡ ಎಂದೇ
  ಜಾರಿ

  ಆದರೂ ಬಿಡದೆ ನಡೆಸಿದ
  ತಯಾರಿ

  ಹೇಳಲು ಮುಂದೆ ನಿಂತ
  ಈ ಬಾರಿ

  ಮುಂದೆ ನಿಂತು ಆದನಾತ
  ಗಾಬರಿ

  ಅವಳು ತೋರಿದಳು ಅಸಡ್ಡೆಯ
  ಮಾರಿ

  ಕಾಣದಾಯಿತು ಅವನಿಗೆ ಯಾವ
  ದಾರಿ

  ಬೆಪ್ಪ ಹೇಳಿದ ನೀನೆ ಎನ್ನ
  ಸೋದರಿ

  - ತೇಜಸ್ವಿ .ಎ .ಸಿ

Saturday, March 27, 2010

ನಮ್ಮ ಮನೆ

 ನಮ್ಮ ಮನೆ

ಶಾಲೆಯಲ್ಲಿದ್ದಾಗ ನೆನೆಯುತ್ತಿದ್ದೆ ನಿನ್ನ ಪ್ರತಿ ಅವಧಿ
ಮನೆಯೇ, ನಿನ್ನಲ್ಲಿ ಅಲ್ಲವೇ ಸಿಗುವುದು ನನ್ನ ನೆಮ್ಮದಿ

ಶಾಲೆ ಘಂಟೆಯ ಸದ್ದಿಗೆ ಕಾದಿದ್ದೆವು ಬಕ ಪಕ್ಷಿಯಂತೆ
ಸಂಜೆಯಾದರೆ ಹಾರುತ್ತಿದ್ದೆವಲ್ಲ ಗೂಡಿಗೆ ಹಕ್ಕಿಯಂತೆ

ಆರಾಮದ ವಿಷಯದಲ್ಲಿ ಮನೆಗೆ ಉಂಟೆ ಸಾಟಿ?
ಮನೆಯಲಿರುವ ಸುಖಕ್ಕಾಗಿ ಎಲ್ಲರಿಗೂ ಬೇಕು ಸೂಟಿ

ಜನರು ದುಡಿದು ಕಟ್ಟಲು ಬಯಸುವ ಗೂಡು ನೀನು
ನಿನ್ನನು ನೆನೆದಾಗ ಸಿಗುವ ನೆಮ್ಮದಿಗೆ ಹೋಲಿಕೆ ಏನು?

ಹುಟ್ಟಿದಾಗಲೇ ಸ್ವಂತ ಮನೆಯೊಂದಿದ್ದರೆ ಅದೇ ಅದೃಷ್ಟ
ಆದರೂ, ಹೊಸ ಮನೆ ಕಟ್ಟುವ ಗುರಿಯೂ ಬಲು ಇಷ್ಟ

ಈಗೇನು, ಮನೆ ಕಟ್ಟಲು ಹಲವು ಬ್ಯಾಂಕುಗಳು ಕೊಡುತ್ತವೆ ಸಾಲ
ತೀರಿಸಲು ಉಪಯೋಗಿಸಿ ಕಂತುಗಳಲ್ಲಿ ನಿಮ್ಮ ಸಂಬಳದ ಬಲ

ಏನೇ ಹೇಳೀ ರಾಜಿ ಮಾಡಲಾಗದು ವಿಶಾಲ ಮನೆಯ ಅಗತ್ಯಕ್ಕೆ
ಬುದ್ದಿಯಿಂದ ಹಣ ಮಾಡಿ ಕಟ್ಟುವೆವು ಕನಸಿನ ಮನೆಯನ್ನು ಆಗಸಕ್ಕೆ

ಹಾಕಲಿ ಎಲ್ಲರೂ ಕಟ್ಟಿಸಲು ಮನೆಯ ನೀಲ ನಕ್ಷೆಯ ಯೋಜನೆ
ಎಲ್ಲರಿಗೂ ಸಿಗಲಿ ಸುಂದರ-ನೆಮ್ಮದಿಯ ತರುವ ಸ್ವಂತದ ಮನೆ

- ತೇಜಸ್ವಿ. ಎ. ಸಿ

Tuesday, March 16, 2010

ಸವಲತ್ತಿನ ಜೀವನ

ಸವಲತ್ತಿನ ಜೀವನ

ನಮ್ಮ ಕನಸಿಗೂ ಎಟುಕದ ಜೀವನವಿದು
ನನಸಿನಲ್ಲೇ ಸಿಕ್ಕಿದೆಯಲ್ಲ ನಿಜವೇ ಇದು
ಕನಸಿನಲ್ಲೂ ಈ ತರಹ ಕನಸು ಕಂಡಿರಲಿಲ್ಲ
ಮಹಾರಾಜನು ಇಂತಹ ಜೀವನ ಸವಿದಿರಲಿಲ್ಲ

ಸುಖದಿ ಓಡಾಡಲು ಆಡಂಬರ ವಾಹನಗಳ ಕಾಲ
ದೂರದಿ ಮಾತಾಡಲು ದೂರವಾಣಿಯ ಜಾಲ
ಸಾವಿರಾರು ಚಾನಲ್ ನ ದೂರದರ್ಶನದ ಗಾಳ
ಹೊಸ ವಿಧ್ಯುನ್ಮಾನ ಯಂತ್ರಗಳ ನಿತ್ಯದ ಮೇಳ

ಗಣಕ ಯಂತ್ರಗಳಲ್ಲಿ ಕೆಲಸ ಮಾಡುವ ಸವಲತ್ತು
ಬೇಕಾದಾಗ ಹಣ ಕೊಡುವ ಎಟಿಎಂಗಳ ದೌಲತ್ತು
ಆಹಾರ ಸುರಕ್ಷಿಸುವ ಶೀತಕ ಪೆಟ್ಟಿಗೆಗಳ ತಂಪು
ಬಗೆ ಬಗೆ ಅಡುಗೆಗೆ ವಿಧ್ಯುತ್ ಸಾಧನಗಳ ಇಂಪು

ಬರೆಯಲು ಕೂತರೆ ಬಾಲಂಗೋಚಿಯ ಪಟ್ಟಿಯಿದೆ
ಇವೆಲ್ಲದರಿಂದ ನಮ್ಮಗಳ ಜೀವನ ಬಲು ಗಟ್ಟಿಯಿದೆ
ಹಲವು ಯುಗದ ಜನಗಳು ಅನುಭವಿಸದ ಬಾಳ್ವೆಯಿದು
ನಿಶ್ಚಿಂತರಾಗಿರಲು ನಮಗೆ ದೈವವಿತ್ತ ಸೌಕರ್ಯವಿವು

ನೆನೆಯಿರಿ ಇಲ್ಲದ ಕುರಿತು ಕೊರಗುವ ಜನಗಳೇ
ಹಾಗೆಂದು ಸೋಮಾರಿಗಳಾಗಬೇಡಿ ಮನುಜರೆ
ಬಾಳಲು ಸಿಕ್ಕಿದೆ ಕೇಳದ ಸುಂದರ ಸುಖದ ಜೀವನ
ನೆನೆಯಿರಿ ಈ ಸುಖ ಸವಲತ್ತು ಕೊಟ್ಟ ಭಗವಂತನ

- ತೇಜಸ್ವಿ .ಎ.ಸಿ





Thursday, March 11, 2010

ತನ್ನನ್ನು ಮೊದಲು ಪ್ರೀತಿಸು

ತನ್ನನ್ನು ಮೊದಲು ಪ್ರೀತಿಸು

ನಿಲ್ಲು ವೇಗದಿ ಓಡುತ್ತಿರುವ ಗೆಳೆಯನೆ
ಮರೆತೆಯೇನು ಪ್ರೀತಿಸಲು ತನ್ನನೇ
ಜೀವನದ ದೋಣಿಯನು ಸಾಗಿಸುವ ಭರದಲಿ
ಮರೆತೆಯೇನು ಪ್ರೀತಿಸಲು ತನ್ನನೇ
ಬಾಲ್ಯದ ಹೊತ್ತಿಗೆಯ ಭಾರವನು ಇಳಿಸುವೆತ್ನದಲಿ
ಮರೆತೆಯೇನು ಪ್ರೀತಿಸಲು ತನ್ನನೇ
ಹರೆಯದ ಹುಚ್ಚು ಸ್ಪರ್ಧೆಯನು ಗೆಲ್ಲುವೆಡೆಯಲಿ
ಮರೆತೆಯೇನು ಪ್ರೀತಿಸಲು ತನ್ನನೇ
ಯೌವನದಿ ಪರರ ಪ್ರೇಮವ ಪಡೆಯುವ ತವಕದಲಿ
ಮರೆತೆಯೇನು ಪ್ರೀತಿಸಲು ತನ್ನನೇ
ತನ್ನ ಸಂಸಾರದ ಹೊರೆ ಹೊತ್ತು ದಡ ಮುಟ್ಟುವಲಿ
ಮರೆತೆಯೇನು ಪ್ರೀತಿಸಲು ತನ್ನನೇ
ಜೀವನಕೆ ಸಂಪಾದಿಸುವ ನೀ ಪಡುವ ಶ್ರಮದಲಿ
ಮರೆತೆಯೇನು ಪ್ರೀತಿಸಲು ತನ್ನನೇ
ಜೀವನದ ಪುಟವೊಮ್ಮೆ ತಿರುಗಿಸು, ಅಲಕ್ಷಿಸಿದ್ದೆಯ ತನ್ನನೇ
ನಿನ್ನೇ ಮನ ಬಿಚ್ಚಿ ಪ್ರೀತಿಸು, ಜೀವನೋತ್ಸಾಹವನ್ನು ಹೆಚ್ಚಿಸು  
ಆದ್ಯತೆ ಕೊಡು ಬದುಕಿನ ಲಕ್ಷ್ಯಕ್ಕೆ, ಹೆಚ್ಚಿಸು ಜೀವನದ ದಕ್ಷತೆ

- ತೇಜಸ್ವಿ.ಎ.ಸಿ

Wednesday, March 3, 2010

ಮಾನವ ಸಮಾನತೆ

ಮಾನವ ಸಮಾನತೆ

ಜೀವಿಸಲೊಂದು ಭೂಮಿ, ಒಂದೇ ಜೀವನ.
ಮಾಡಬಹುದಲ್ಲವೇ ಇದನ್ನು ನಂದನ ವನ

ದೇವರು ಸೃಷ್ಟಿಸಿ ಕೊಟ್ಟದ್ದು ಕೇವಲ ಎರಡು ಜಾತಿ
ನಮ್ಮ ಸೃಷ್ಟಿಯಲ್ಲವೇ ಧರ್ಮ, ಜಾತಿಗಳೆಂಬ ಭ್ರಾಂತಿ

ಜಾತಿ ಧರ್ಮ ಎಂದು ಮಾಡುತ್ತಿದ್ದಾರೆ ಅಮಾಯಕರ ತಿಥಿ
ವೈಯಕ್ತಿಕವಲ್ಲವೇ ಈ ನಂಬಿಕೆಗಳು, ಓ ಭೂಮಿ ಮೇಲಿನ ಅತಿಥಿ?

ಈ ಮನದೊಳಗಿನ ನಂಬಿಕೆಗೆ ಏಕೆ ಬೇಕು ಬಾಹ್ಯ ಕಟ್ಟಡ?
ಸೃಷ್ಟಿಸಲೇ ಸದಾ ಗುಮಾನಿ, ಧ್ವೇಷವೆಂಬ ಅಂತರ?

ಅಳಿಸಿ ನೋಡಿ ಜಾತಿ, ಧರ್ಮ, ಭಾಷೆ ಹಾಗು ಬಣ್ಣ,
ಈ ಎಲ್ಲಾ ಒಂದೇ ಆದ್ರೆ ಜಗವು ಎಷ್ಟು ಸುಂದರವಣ್ಣ.

ಎಲ್ಲಾ ತೊಡೆದು ಒಂದಾಗಲು ಮನದಲಿ ತುಂಬಲಿ ಪ್ರೀತಿಯ
ಎಲ್ಲಾ ವ್ಯತ್ಯಾಸ ಮೀರಿ, ಮಾನವತೆ ಮೆರೆಯಲಿ ಎಂದೆನ್ನ ಆಶಯ

- ತೇಜಸ್ವಿ .ಎ. ಸಿ