Saturday, September 27, 2014

ಹಬ್ಬಗಳು

                       ಹಬ್ಬಗಳು

    ಹಬ್ಬಗಳ ನೆನೆದರೆ ಮನೆಮಾಡುವುದು ಸಡಗರ
   ಏಕೆಂದರೆ ಅವು ಆಗಿಹುದು ವೈವಿದ್ಯತೆಯ ಆಗರ

   ಹತ್ತು ಹಲವು ಹಬ್ಬಗಳ ನಾಡಿದು ನಮ್ಮ ದೇಶ
   ನಾನಾ ಕಾರಣಗಳಿಗೆ ಹಬ್ಬಗಳಿರುವುದೇ ವಿಶೇಷ

   ಹಬ್ಬದ ದಿನ ಹತ್ತಿರ ಬರುತ್ತಲೇ ನಡೆವುದು ತಯಾರಿ
   ಮನೆಯವರಿಗೆಲ್ಲ ಹೊಸ ಬಟ್ಟೆಗಳು ಬೇಕು ತರಾವರಿ

   ಮನೆಯ ಮುಂದೆ ಸುಂದರ ರಂಗೋಲಿಯ ಚಿತ್ತಾರ
   ಮನೆಯ ಬಾಗಿಲಿಗೆ ಮಾವಿನ ತೋರಣದ ಸಿಂಗಾರ

   ಮುಂಜಾನೆಯೇ ಮಾಡುವರು ಅಭ್ಯಂಜನ ಸ್ನಾನ
   ಮಡಿಯುಟ್ಟು ಆರಂಭಿಸುವರು ದೇವರ ಪೂಜೆಯನ

   ಹೊಸ ಬಟ್ಟೆಯುಟ್ಟು ನಲಿವರು ಮಕ್ಕಳು-ಮುದುಕರು
   ಹಬ್ಬಕೆ ನೆಂಟರು ಬಂದು ಸಂತೋಷ ತಂದಿಹರು

   ಮಧ್ಯಾಹ್ನ ಭೋಜನಕೆ ಉಂಟು ಒಬ್ಬಟ್ಟಿನ ಊಟ
   ಊರ ಬೀದಿ ಬೀದಿಗಳಲ್ಲೆಲ್ಲಾ ಸಂಭ್ರಮದ ನೋಟ

   ಹಬ್ಬಗಳ ಆಚರಿಸುವರು ಜನ ವಿಭಿನ್ನ ಕಾರಣಗಳಿಗೆ
   ಎಲ್ಲಾ ಹಬ್ಬಗಳು ಕೊಡುವುದು ಸಂತಸದ ಘಳಿಗೆ

   ಹಬ್ಬಗಳು ನಾಡಿನ ಅಖಂಡತೆ, ಏಕತೆಗೆ ದ್ಯೋತಕ
   ಇವುಗಳು ನಮ್ಮ ಸಂಸ್ಕೃತಿ, ಸಂಸ್ಕಾರದ ಪ್ರತೀಕ

   - ತೇಜಸ್ವಿ. ಎ. ಸಿ

Tuesday, August 19, 2014

ಧಾರಾವಾಹಿ

                      ಧಾರಾವಾಹಿ
 
  ವಾಹಿನಿಯಲಿ ಹೊಸ ಧಾರಾವಾಹಿ ಆರಂಭಿಸಿದಾಗ
  ವಾಹಿನಿ ನೋಡುಗರಿಗೆ ಕುತೂಹಲ, ಹೊಸ ಆಶಯ
  ನೂತನ ಕಲ್ಪನೆಯ ಹೊಸತನ, ಭಿನ್ನತೆಯ ಸೊಗಸು
  ಹೊಸ ಮುಖಗಳ ತಾಜಾತನ ತರುವುದು ಆಹ್ಲಾದತೆ
 
  ದಿನಗಳೆದಂತೆ ತಾಜಾತನವು ಅಲ್ಲಿಯೇ ನಿಂತ 
  ನೀರಿನಂತಾಗಿ ನಿಧಾನಕೆ ಹುಳು ಉಪ್ಪಟೆಗಳ ತಾಣ 
  ನಿಂತಲ್ಲೇ ನಿಲ್ಲುವ ಧಾರಾವಾಹಿಯು ನಾರಲು ಶುರು 
  ಕ್ರಮೇಣವೆ ತಾಳ್ಮೆಯ ಕದ ತಟ್ಟುತಿದೆ ಹಳೆಯ ಚಾಳಿ
 
  ಸರಳ ಸಮಸ್ಯೆಯನು ಪರಿಹರಿಸದ ಕಥೆಗಾರನಿಗೆ 
  ಧಾರಾವಾಹಿ ಅಂತ್ಯದ ಭಯ ಮೂಡಿ, ತನ್ನ ಸೃಜನತೆಗೆ 
  ತಾನೇ ಬೇಲಿ ಕಟ್ಟುತ, ಪ್ರಭುದ್ದವಾಗಬೇಕಾದ ಕಥೆಗೆ    
  ಮೊದ್ದುತನ ಪೇರಿಸಿ ಅದನ್ನೇ ನೀರಸಗೊಳಿಸುತಿಹನು
 
 ಇಷ್ಟೆಲ್ಲಾ ನಡೆಯುತಿಹಲು ಮನೆಯಲ್ಲಿನ ಮಾನಿನಿಯರ
 ತಾಳ್ಮೆ, ಸಹನೆಯ ಕಟ್ಟೆಯ ಒಡೆಯದೆ, ಅದೇ ನಿಂತ 
 ಕಥೆಯ ಒಳ್ಳೆಯ ಭವಿಷ್ಯದ ಸದಾಶಯದಿಂದ ವೀಕ್ಷಿಸಿ
 ತಮ್ಮ ಸಹನಾಮಯತೆಯ ಪ್ರದರ್ಶನ ನೀಡುತಿಹರು    
 
 ಏಕಮುಖ ಮಾಧ್ಯಮದಿ ಪ್ರೇಕ್ಷಕ ಏನು ಮಾಡಿಯಾನು
 ಎಂದರಿತು ನಿರ್ದೇಶಕ ಭೀಗಿದಂತೆ, ಜನರ ತಾಳ್ಮೆಯ 
 ಸಮಯವ ಹಾಳುಗೆಡಹುತ, ಸರಣಿ ನಿರಾಸೆಗಳ ಜನಕೆ 
 ನೀಡುತ ತಾನು ಮಾತ್ರ ಕಾಂಚಣವ ಪೇರಿಸುತಿಹನು 
 
 - ತೇಜಸ್ವಿ .ಎ.ಸಿ

Wednesday, August 6, 2014

ಮುಖ ಪುಸ್ತಕ


      ಮುಖ ಪುಸ್ತಕ
 
ಪುಸ್ತಕದ ಹುಳುವಾಗಿ ಜ್ಞಾನವೆಚ್ಚಿಸಲೂ 
ಪುಸ್ತಕದ ಹಿಂದೆ ಮುಖವಡಗಿಸಲೂ
ಇರುವ ವ್ಯತ್ಯಾಸವನರಿಯೆ ಗೆಳೆಯ 

ಪುಸ್ತಕದ ಹಿಂದೆ ಅವಿತು ಕುಳಿತು ಸ್ನೇಹ
ಬಯಸಿ, ನನ್ನೆಲ್ಲ ವೈಯಕ್ತಿಕ ಜೀವನವ
ಮರೆಯಲ್ಲಿಯೇ ಸಾಲಾಗಿ ನೋಡ ಬಯಸಿ  

ನಾನು ನೇರವಾಗಿ ಆಡುವ ಮಾತುಗಳಿಗೆ
ಉತ್ತರ ಕೊಡದೆ ಮರೆಯಲ್ಲೇ ಮೌನತಾಳಿ
ಕುಳಿತರೆ ನಿನ್ನ ನಿಜ ಮುಖಬಣ್ಣ ತಿಳಿಯದೇ  

ನಾವಿರುವ ಪುಟ್ಟ ಬಾಳಿನಲಿ ಮರೆಯಿಂದ
ಹೊರಬಂದು, ಗೆಳೆಯನೊಟ್ಟಿಗೆ ಮುಕ್ತವಾಗಿ
ಮಾತನಾಡಿದರೆ ಬದುಕು ಸುಂದರವಲ್ಲವೇ 

- ತೇಜಸ್ವಿ ಎ ಸಿ

Friday, June 27, 2014

ನನ್ನತನ

              ನನ್ನತನ

 
ನನ್ನೊಳಗಿನ ನನ್ನನೇ ಬದಲಿಸಲೇ ನಾನು
ನನ್ನೋಳಗಿನವ ಬೇಕಿಹುದುಕ್ಕಿಂತ ಭಿನ್ನನಾಗಿ
ಜಗ ಕೇಳಿದ ವ್ಯಕ್ತಿಯನು ನನ್ನೊಳಗೆ ಹಾಕಿ
ನನ್ನನೇ ಕಡೆಗಣಿಸಿದರೆ ನಾನಿದ್ದು ಸತ್ತಂತೆ

ನಾನು ನೋಡಿ ಕೇಳಿ ಸ್ಪರ್ಶಿಸಿದ ಜಗ ಮಿಥ್ಯವೇ
ನನ್ನನುಭವ ತೋರಿ, ಹೇಳಿದ ವಾಸ್ತವ ಮಿಥ್ಯವೇ
ಪಂಚೇಂದ್ರಿಯಗಳ ನಂಬಿ ಬೆಳೆದ ನಾ ಮಿಥ್ಯನೇ
ವಾಸ್ತವವ ಅರ್ಥೈಸದೇ ಬೆಳೆಯಿತೇ ನನ್ನತನ

ನನ್ನೋಳಗಿನವ ನೋಡಿ ಕಲಿತದ್ದು ಹಸಿಸತ್ಯ
ಅವನಿಗೆ ಹೊಸ ಅಭ್ಯಾಸಗಳ ಪರಿಚಯಿಸಿ, ಸ್ವಲ್ಪ
ಶಕ್ತಿ ತುಂಬಿ, ಹೊಸ ನಡಾವಳಿಗಳ ಕಳಿಸಿ
ಅವನ ಹಾಗೆ ಉಳಿಸಿ, ಸ್ವಲ್ಪ ಮಾತ್ರ ಬದಲಿಸಬಲ್ಲೆ

ಆತ ಹಾಗೆ ಉಳಿಯಲಿ, ತಿಳಿದ ಹೊಸ ಸತ್ಯಗಳ
ಸ್ವಲ್ಪ ಸ್ವಲ್ಪವೇ ಪೋಣಿಸುತ, ಸಾಂಧರ್ಭಿಕವಾಗಿ
ಪ್ರತಿಸ್ಪಂದನೆ ಬದಲಾಯಿಸಿ, ನನ್ನವನ ಮೂಲ
ವ್ಯಕ್ತಿತ್ವಕೆ ಧಕ್ಕೆ ಬರದೆ, ತನ್ನತನವ ಉಳಿಸುವೆ

 - ತೇಜಸ್ವಿ .ಎ.ಸಿ

Friday, March 21, 2014

ಮಾಯಾಮೃಗ


          ಮಾಯಾಮೃಗ

ಬುದ್ಧ ಹೇಳಿದರು ಆಸೆಯೇ ದುಖಃಕೆ ಮೂಲ
ಅದ ಅರ್ಥೈಸಲು ಬೇಕಾಯಿತು ಕೆಲ ಕಾಲ

ನನಗೂ ಬೇಡ ನಿರಾಸೆಗಳ ಹೊರುವ ಭಾರ
ಎಲ್ಲ ಆಸೆಗಳ ತ್ಯಜಿಸಿ ಮಾಡುವೆ ಮನ ಹಗುರ

ಎಲ್ಲ ಆಸೆಗಳ ಧುತ್ತನೆ ಬಿಟ್ಟು ಕೂತೆ ಒಮ್ಮೆಲೆ
ಎಲ್ಲವೂ ಕಳೆದಂತೆ ಮುಖ ಬಾಡಿತು ಒಮ್ಮೆಲೆ

ಸ್ವಲ್ಪ ದಿನಗಳು ಹಾಗೆ ಕಳೆದೆ ಕಳಾಹೀನನಾಗಿ
ವೈರಾಗ್ಯ ಮೂಡಿ ಕುಳಿತ ಸನ್ಯಾಸಿಯಂತಾಗಿ

ಆಸೆಗೂ ಗೊತ್ತು ಹೃದಯದಲ್ಲಿನ ಸಂವೇದನೆ  
ಅದರ ವಾಸ್ತವ ಮಾಚಬಲ್ಲ ಎಲ್ಲ ಪ್ರಲೋಭನೆ

ಹೃದಯಕೆ ಅರ್ಥವಾಗದು ಮೆದುಳಿನ ಭಾಷೆ
ಮತ್ತೆ ಏರುತಿದೆ ಅವಾಸ್ತವಿಕ ಆಸೆಗಳ ನಶೆ

ಅನುಭವವಿದ್ದರೂ ಮಾಯಾಮೃಗದ ಬೆನ್ನತ್ತಿದೆ
ಅದು ಮಿಂಚಿಮಾಯವಾದಾಗ ಪರಿತಪಿಸಿದೆ

ತೀರದ ಆಸೆಗಳು ಭಾರವಾಗಿ ಕಾಡಿವೆ ಜೀವನವ
ಬಿಡದೆ ಮಾಯಾಮೃಗವ ಹಿಡಿಯುವ ಹಂಬಲವ

 - ತೇಜಸ್ವಿ ಸಿ 

Saturday, February 15, 2014

ಸಂಪದದ ಹಳೆಯಸಹಪಾಠಿಗಳ ನೆನೆದು

ಸಂಪದದ ಹಳೆಯಸಹಪಾಠಿಗಳ ನೆನೆದು

ಸಂಪದ ತೆರೆದಾಗ ನನ್ನ ಹಳೆಯ ಶಾಲೆಯ               
ಹೊಕ್ಕಂತಾಗಿ, ಹೊಸ  ಹೊಸ  ಹೆಸರುಗಳ
ಕಂಡು, ನನ್ನೊಂದಿಗಿದ್ದ ಸಕ್ರಿಯ ಸಂಪಧಿಗರ
ಹೆಸರುಗಳು ಇತಿಹಾಸದ ಪುಟ ಸೇರಿರುವುದ
ನೋಡಿ, ಶಾಲೆಯಲ್ಲಿದ್ದ ಹಳೆಯ ಸಹಪಾಠಿಗಳ 
ನೆನೆದಂತಾಗಿ, ಏನೋ ಖಾಲಿತನ ಕಾಡಿತು

ನಾ ಹಿಂದೆ ಬರೆಯುತ್ತಿದ್ದ ಪ್ರತಿ ಕವಿತೆಗಳ
ತಿದ್ದಿ ತೀಡಿ, ಪ್ರೋತ್ಸಾಹಿಸಿ, ಸ್ಪೂರ್ತಿಯಿತ್ತು
ಸದಾ ನನ್ನೊಂದಿಗೆ ಇದ್ದ  ನಾ ಹೆಚ್ಚು ಕಂಡಿರದ
ನನ್ನ ಸಂಪದ ಸಹಪಾಠಿಗಳ ನೆನೆದಿಂದು
ಮನಸಿನಲಿ ಖಾಲಿ ಮನೋಭಾವ ಮೂಡಿದೆ

ಸಂಪದ ಸಮ್ಮಿಲನದಲಿ ಭೇಟಿ ಮಾಡಿದ ಎಲ್ಲರ
ನೆನೆದು ಬೀಳ್ಕೊಟ್ಟ ವಿದ್ಯಾರ್ಥಿಗಳ ಹಳೆಯ
ನೆನಪಿನಂತೆ, ಒಂದೊಂದಾಗೆ ನೆನಪಿನ ಬುತ್ತಿ ಬಿಚ್ಚಿ,
ಇವರುಗಳು ಮತ್ತೊಮ್ಮೆ ಏಕೆ ಸಕ್ರಿಯರಾಗಬಾರದು
ಎಂದೆನಿಸಿ, ಜೊತೆಗೆ ಹೊಸಬರನ್ನೂ ಸ್ವಾಗತಿಸಿ
ಸಂಪದದ ಅಂಗಳದಲಿ ಸಕ್ರಿಯನಾಗುವಾಸೆ

- ತೇಜಸ್ವಿ.ಎ.ಸಿ 

Friday, February 14, 2014

ಸಾಲಾವಳಿ



                   ಸಾಲಾವಳಿ
 
ದಶಕಗಳು ಕಾದರು ಕನಸಿನ ದಿನ ಬರುವದೆಂದು
ವಿಜ್ಞಾನವ ಓದಿ, ತಿಳಿದರು ಬುದ್ದಿವಂತರಾದರೆಂದು
ಓದಿ ದುಡಿದು ಕೂಡಿಟ್ಟರು ತಮ್ಮ ಶುಭ ವಿವಾಹಕೆ
ತಮ್ಮ ಕನಸಿನ ಸಂಗಾತಿಯ ಪಡೆವ ಸಾಕಾರಕೆ
ಇರುವ ಆಯ್ಕೆಗಳ ಜಾತಿಯ ಹೆಸರಿನಲಿ ಬಸಿದು
ಮತ್ತೊಮ್ಮೆ ಒಳ ಪಂಗಡದ ಹೆಸರಿನಲಿ ಬಸಿದು
ನಂತರ ರೂಪ, ವಿಧ್ಯೆ, ಹಣದ ತಕ್ಕಡಿಯಲಿ ತೂಗಿ
ತದನಂತರ ಗುಣ, ಮನೆತನದ ಜಾಲರಿಗೆ ಹಾಕಿ
ಎಲ್ಲವೂ ಸಿಕ್ಕೂ ಮತ್ತೆ ನೋಡುವರು ಸಾಲಾವಳಿ
ಯುವ ವರ್ಗದ ಅಪೇಕ್ಷೆಗೆ ತಾವೇ ಹಾಕುತ ಬೇಲಿ
ಬೇಕೇ ವಿಜ್ಞಾನದ ಯುಗದಲೂ ಅಜ್ಞಾನದ ಾವಳಿ
ನಿಮ್ಮದೇ ಜೀವನಕೆ ನೀವೇ ಇಡುವ ಬೆಂಕಿ ಕೊಳ್ಳಿ
 
- ತೇಜಸ್ವಿ..ಸಿ