Sunday, November 30, 2014

ಕನಸು

                     ಕನಸು

  ನೆರಳು ಬೆನ್ನತ್ತುವದ ನಿಲ್ಲಬಹುದೇನೋ
  ಆದರೆ ಕನಸುಗಳು ಬೆನ್ನತ್ತುವುದ ನಿಲ್ಲಲಾರವು
  ನೆರಳೂ ಕೂಡ ಕದ ತಟ್ಟಿ ಒಳ ಬರಬಹುದೇನೋ
  ಕನಸುಗಳಿಗೆ ಮನಸಿನ ಕದವೇ ಗೊತ್ತಿಲ್ಲ 

  ಎಲ್ಲ ವಾಸ್ತವ ಒಮ್ಮೆಲೇ ಮರೆಸಿ, ಸದಾ
  ಬಂದು ನನ್ನ ಹೊತ್ತೊಯ್ಯುವ ನಿನಗೆ
  ನನ್ನ ಮೈ ಮನಗಳಿಗೆ ರಸದೌತಣ
  ಉಣಬಡಿಸದೆ ಮನದ ತಣಿವಾರದೇ 

  ನೀ ನಿತ್ಯವೂ ತೋರುವ ಲೋಕದ
  ಸೌಂದರ್ಯವು ನಿನ್ನ ಕೈಗಳ ಸೃಷ್ಟಿಯೇ 
  ಅಥವಾ ಇಂದ್ರನ ಆಸ್ಥಾನದಿಂದ
  ನನಗಾಗಿ ಎರವಲು ತಂದಿರಿವೆಯೋ

  ದಿನ ನಿತ್ಯ ನೋಡುವ ವಿಭಿನ್ನ ಕಥಾನಕ
  ಆ ಕಥೆಯ ವಿವಿಧ ಪಾತ್ರಗಳು ನನ್ನ
  ಕುತೂಹಲವ ಮೀರಿ ಸಂತಸವ 
  ಹೊತ್ತು ತಂದು ಮನದುಂಬಿವೆ

  ನೀ ನನಗಾಗಿ ತರುವ ಸುಖಾನುಭವ 
  ಸಂತಸವಿತ್ತಿದೆ, ಎನ್ನುವುದರ ಜೊತೆಗೆ
  ವಾಸ್ತವವ ಮರೆಮಾಚಿ ನನ್ನ ಕೆಲಸ
  ಕಾರ್ಯಗಳ ತಡ ಮಾಡಿರುವುದೂ ಸತ್ಯ

  ನೀ ಒಯ್ಯುವ ಸುಂದರ ಲೋಕದ
  ಪಯಣಕೆ  ಶಿಸ್ತಿನ ಅಲ್ಪವಿರಾಮವನಿತ್ತಿ
  ವಾಸ್ತವ ಜೀವನಕು ಪ್ರಾಶಸ್ತ್ಯ ಕೊಟ್ಟು
  ಎರಡನು ಸಮತೋಲನಗೊಳಿಸುವಾಸೆ

   - ತೇಜಸ್ವಿ.ಎ.ಸಿ

Friday, November 28, 2014

ನಿಷ್ಟುರ


                         ನಿಷ್ಟುರ


ನೀನೇನೆ ಬೈದರು, ಚುಚ್ಚಿದರು, ಅಪಮಾನಿಸಿದರು
ಸುಮ್ಮನಿರುವೆನೆಂದರೆ ಅದು ನನ್ನ ದೌರ್ಬಲ್ಯವೆಂದೋ
ನನ್ನಲ್ಲಿ ಇರುವ ಕೀಳರಮೆಯ ಪರಿಣಾಮವಾಗಿಯೋ
ನನ್ನ ಬಗ್ಗೆಯೇ ಇರುವ ಕೀಳು ಆತ್ಮ ಗೌರವದಿಂದೋ
ಎಂದು ತಪ್ಪು ತಿಳಿಯ ಬೇಡ ನನ್ನ ಬಂಧು ಮಿತ್ರನೇ

ನನ್ನ ತಾಳ್ಮೆ, ಸಹನೆಯ ತಪ್ಪು ತಿಳಿದು ನನ್ನ ಲಘುವಾಗಿ
ತೆಗೆದು ಕೊಳ್ಳಬೇಡ ನನ್ನ ಬಂಧು ಮಿತ್ರನೇ
ನಾ ತೋರುವ ಸಹಿಷ್ಣುತೆಗೆ ಇರುವ ಕಾರಣವೆಂದರೆ
ನಾ ನಮ್ಮ ಸಂಬಂಧಕ್ಕೆ ಕೊಡುವ ಬೆಲೆ ಹಾಗು ಅದನ್ನು
ಉಳಿಸಿಕೊಳ್ಳುಲು ನಾ ಮಾಡುತ್ತಿರುವ ತ್ಯಾಗ, ತಾಳ್ಮೆ

ನಾ ನಮ್ಮಗಳ ಸಂಬಂಧಕ್ಕೆ ಬೆಲೆ ಕೊಡುವ ಬದಲು
ತಿರುಗಿ ಸಿಡಿದೆದ್ದಿ ನಿಂತರೆ, ನಿಷ್ಟುರ ಕಟ್ಟಿಕೊಂಡು,
ನಮ್ಮೀ ಧೀರ್ಘ ಕಾಲದ ಸಂಬಂಧ ಕ್ಷಣ ಮಾತ್ರಕೆ
ಮುರಿದು ಬಿದ್ದು, ಜೀವನ ಪೂರ್ತಿ ಒಬ್ಬರನೊಬ್ಬರ
ಮುಖ ನೋಡದೆ, ಸಂಬಂಧ ಹಳಸೀತು ಎಚ್ಚರ.

ಕೋಪದಲ್ಲಿ ಕೊಯ್ದ ಮೂಗ, ಕೋಪವಿಳಿದ ಮೇಲೆ
ಬರಲಾರದೆಂಬಂತೆ, ನಮ್ಮ ಸಂಬಂಧ ಉಳಿಸಲು
ನಮ್ಮಿಬ್ಬರಲ್ಲಿಯೂ ಇರಲಿ ಸಹನೆ, ತಾಳ್ಮೆ, ತ್ಯಾಗ
ಇವೇ ನಮ್ಮ ದೀರ್ಘ ಕಾಲದ ಬಂಧುತ್ವ, ಸ್ನೇಹ
ಉಳಿಸಲು ಇರುವ ಅತ್ಯುತ್ತಮ ರಾಜ ಮಾರ್ಗಗಳು.

- ತೇಜಸ್ವಿ ಎ ಸಿ