Wednesday, February 21, 2024

ಹಣದ ಜಾಡು ಹಿಡಿಯುವುದು

 ಹಣದ ಜಾಡು ಹಿಡಿಯುವುದು


ಚಿತ್ರ ಕೃಪೆ:  ಅಂತರ್ಜಾಲ

 ನಾವು ಸಂಪಾದಿಸಿದ ಹಣ  ಎಲ್ಲಿ ಹೋಗುತ್ತದೆ,  ಯಾವುದಕ್ಕಾಗಿ ಬಳಸಲಾಗುತ್ತದೆ, ಎಲ್ಲಾದರೂ ಹಣದ ಸೋರಿಕೆ ಆಗುತ್ತಿದೆಯಾ  ಹಾಗೂ  ಇದರ ಮೂಲಕ ನಮ್ಮ ಸ್ವಭಾವವನ್ನು  ಅರಿತುಕೊಳ್ಳಲು  ಹಣದ ಜಾಡನ್ನು ಹಿಡಿಯಬೇಕಾಗುತ್ತದೆ.  ಇದಕ್ಕಾಗಿ  ನಾವು ಮಾಡುವ ಖರ್ಚುಗಳನ್ನು  ಬರೆಯಬೇಕು   ಅದು  ನಿರ್ದಿಷ್ಟವಾಗಿರಲಿ  ಅಂದರೆ  ಈ  ದಿನಾಂಕದಂದು  ಇಂತಿಷ್ಟು ಮೊತ್ತದ ಹಣವನ್ನು   ಈ ಉದ್ದೇಶಕ್ಕಾಗಿ  ಖರ್ಚು ಮಾಡಲಾಗಿದೆ  ನಂತರ  ಖರ್ಚುಗಳನ್ನು  ವರ್ಗಿಕರಣ ಮಾಡಬೇಕು.   ಇದನ್ನು  ಒಂದು ಪುಸ್ತಕದಲ್ಲಿ ಪೆನ್ನಿನ ಸಹಾಯದಿಂದಾದರು ಮಾಡಬಹುದು  ಅಥವಾ   ನಿಮ್ಮ ಮೊಬೈಲ್ ನಲ್ಲಿ   ಖರ್ಚುಗಳಿಗೆ ಸಂಬಂಧಪಟ್ಟ  ಮೊಬೈಲ್ ಅಪ್ಲಿಕೇಶನ್ ಮೂಲಕವಾದರೂ  ಮಾಡಬಹುದು.  ನಿಮ್ಮ ಖರ್ಚು ವೆಚ್ಚಗಳನ್ನು ಅರ್ಥ ಮಾಡಿಕೊಳ್ಳಬೇಕಾದರೆ   ಕನಿಷ್ಠಪಕ್ಷ  ಮೂರು ತಿಂಗಳಾದರೂ ಬರೆಯಬೇಕು. ಆದರೆ  ವರ್ಷಪೂರ್ತಿ ಪ್ರತಿನಿತ್ಯ ಬರೆಯುವ ಅಗತ್ಯವಿರುವುದಿಲ್ಲ.

 ಇಂದಿನ ದಿನಗಳಲ್ಲಿ  ಖರ್ಚಿನ ಲೆಕ್ಕ ಬರೆಯುವುದು ತಂತ್ರಜ್ಞಾನದ ಸಹಾಯದಿಂದ ಇನ್ನೂ ಸುಲಭವಾಗಿದೆ.    ನೀವು  ಯುಪಿಐ ಮೂಲಕ  ಆಗುವ ವೆಚ್ಚಗಳು  ನೆಟ್ ಬ್ಯಾಂಕಿಂಗ್  ನಲ್ಲಿ   ಸುಲಭವಾಗಿ   ನೋಡಿ  ಲೆಕ್ಕವನ್ನು ಬರೆಯುವುದು.   ಮೊಬೈಲ್ ಅಪ್ಲಿಕೇಶನ್ ನಲ್ಲಿ   ಖರ್ಚು ಆದ ತಕ್ಷಣ   ಖರ್ಚನ್ನು ದಾಖಲಿಸಬಹುದು.   ಇದಲ್ಲದೆ   ಖರ್ಚಿನ  ಸಮಗ್ರ ವರದಿಯನ್ನು ಸಿದ್ಧಪಡಿಸಬಹುದು.  ಇದರಿಂದ   ನಿಮಗೆ   ಏತಕ್ಕಾಗಿ,   ಎಷ್ಟು,   ಎಲ್ಲಿ,   ಯಾವತ್ತು   ಖರ್ಚುಗಳನ್ನು ಮಾಡಿದ್ದೇವೆ  ಎಂಬುದು   ನಿಮ್ಮ ಮುಂದೆ ಬರುತ್ತದೆ.    ಈ ವರದಿಯಿಂದ   ನೀವು   ವಿಷಯಗಳನ್ನು ಅರ್ಥೈಸಿಕೊಂಡು  ಮುಂದೆ  ಯಾವ ಕ್ರಮವನ್ನು ಕೈಗೊಳ್ಳಬೇಕೆಂದು  ನಿರ್ಧರಿಸಬಹುದು.

Tuesday, February 6, 2024

ಒಬ್ಬರೇ ನಿರ್ವಹಿಸುವುದು ಅಸಾಧ್ಯ

ಒಬ್ಬರೇ  ನಿರ್ವಹಿಸುವುದು  ಅಸಾಧ್ಯ:

ಚಿತ್ರ ಕೃಪೆ:  ಅಂತರ್ಜಾಲ 

    ವೈಯಕ್ತಿಕ  ಹಣಕಾಸು ನಿರ್ವಹಣೆ    ಹೆಸರೇ ಸೂಚಿಸುವಂತೆ  ವೈಯಕ್ತಿಕ ಆದರೂ  ಅದು  ನಿಜ ಅರ್ಥದಲ್ಲಿ ಕೌಟುಂಬಿಕ.   ಅಂದರೆ  ಮನೆಯ ಹಣಕಾಸು ನಿರ್ವಹಣೆ  ಕೇವಲ  ಮನೆಯ  ಯಜಮಾನನದಲ್ಲ ಅದರಲ್ಲಿ  ಸಂಗಾತಿಯ ಪಾತ್ರ ಬಹಳ ಮಹತ್ವದ್ದಾಗಿರುತ್ತದೆ ಹಾಗೂ ಕೌಟುಂಬಿಕ   ಮಟ್ಟದಲ್ಲಿ ನಡೆಯಬೇಕು.    ಹಣಕಾಸಿನ  ಎಲ್ಲಾ  ಆಯವ್ಯಯಗಳ  ಚರ್ಚೆ  ಮನೆಯಲ್ಲಿ ನಡೆಯಬೇಕು  ಸಂಗಾತಿಗಳು ಇಬ್ಬರು ಕುಳಿತು  ಚರ್ಚಿಸಿ  ತೀರ್ಮಾನಗಳನ್ನು ತೆಗೆದುಕೊಳ್ಳಬೇಕು.   ಇಲ್ಲದೆ ಹೋದರೆ   ಎತ್ತು ಏರಿಗೆ  ಎಳೆದರೆ ಕೋಣ  ನೀರಿಗೆ ಎಳಿದಂತೆ.  ಇದರಿಂದ  ಬದುಕಿನ ಬಂಡಿ  ಎಲ್ಲೂ ಸಾಗುವುದಿಲ್ಲ. 

 ಇಂತಹ ಅವ್ಯವಸ್ಥೆಯಿಂದ ಸೋಲುಗಳು, ನಿರಾಶೆಗಳು, ಹತಾಶೆಗಳು ಸಾಮಾನ್ಯವಾಗಿ ಬಿಡುತ್ತವೆ. ಅತೃಪ್ತಿ, ಅಸಮಾಧಾನ, ಕೋಪ  ಹೊಗೆಯಾಡುತ್ತಿರುತ್ತದೆ ಇದರಿಂದ ಕೌಟುಂಬಿಕ ವ್ಯವಸ್ಥೆಗೆ  ಅಡ್ಡ ಪರಿಣಾಮ ಬೀರುತ್ತದೆ.  ಆದ್ದರಿಂದ  ಪರಿಹಾರವಾಗಿ ಕುಟುಂಬದಲ್ಲಿ  ಆರ್ಥಿಕ ವ್ಯವಸ್ಥೆಯನ್ನು  ಸೃಷ್ಟಿಸಿಕೊಳ್ಳಬೇಕು  ಒಂದು ಪ್ರಕ್ರಿಯೆಯನ್ನು  ರೂಪಿಸಬೇಕು,   ಅದಕ್ಕಾಗಿ   ಮೂಲಸೌಕರ್ಯದ  ವ್ಯವಸ್ಥೆಯನ್ನು ಮಾಡಿರಬೇಕು ಹಾಗೆ ಅದಕ್ಕೆ ಸಾಧನಗಳನ್ನು ಕಂಡುಕೊಳ್ಳಬೇಕು.    

     ಈ ವ್ಯವಸ್ಥೆಯ ಭಾಗವಾಗಿ  ಕನಿಷ್ಠಪಕ್ಷ  ತಿಂಗಳಿಗೆ ಒಂದು  ದಿನ ಕುಳಿತು  ಆಯವ್ಯಯಗಳ  ಚರ್ಚೆ ನಡೆಸಬೇಕು.  ಇದರಲ್ಲಿ  ಮುಂದಿನ ಕೆಲಸ ಕಾರ್ಯಗಳು,  ಎದುರಿಸುತ್ತಿರುವ ಸಮಸ್ಯೆಗಳು,  ಅದರ  ಪರಿಹಾರಗಳು  ಹಾಗೂ ಭವಿಷ್ಯದ ಯೋಜನೆಗಳನ್ನು ಚರ್ಚಿಸಬೇಕು.   ಎಲ್ಲದಕ್ಕೂ ಎಷ್ಟು ಖರ್ಚಾಗುತ್ತದೆ,  ಅವುಗಳನ್ನು ಹೇಗೆ ನಿಭಾಯಿಸಬೇಕು  ಎಂಬುದರ ಚರ್ಚೆ ನಡೆಸಬೇಕು  ಹಾಗೆಯೇ ಮುಂದಿನ ತಿಂಗಳ  ಬಜೆಟ್  ಅನ್ನು ಸಿದ್ಧಪಡಿಸಬೇಕು. ಈ ಚರ್ಚೆಯು  ಒಂದು ಕಚೇರಿಯಲ್ಲಿ ಕಾರ್ಯವು ನಡೆಯುವಂತೆ  ವ್ಯವಸ್ಥಿತವಾಗಿ  ಇರಬೇಕು   ಅದಕ್ಕಾಗಿ  ನೀವು ಮನೆಯಲ್ಲಿ  ಕುರ್ಚಿ ಮೇಜುಗಳ  ವ್ಯವಸ್ಥೆ ಇರಬೇಕು ಅಥವಾ  ನಿಮ್ಮ ಮನೆಯ  ಡೈನಿಂಗ್ ಟೇಬಲ್ ಮೇಲೆ  ಕೂಡ ನಡೆಸಬಹುದು.   ಇದಕ್ಕಾಗಿ    ಗಣಕಯಂತ್ರದಲ್ಲಿ   ಎಂಎಸ್ ಎಕ್ಸೆಲ್  ನಂತಹ  ಸಾಧನಗಳನ್ನು  ಬಳಸುವುದು  ಅತಿ ಮುಖ್ಯ.   ಜೊತೆಗೆ   ಅವಶ್ಯಕತೆ   ಬಂದಲ್ಲಿ  ಸಂಬಂಧಪಟ್ಟ  ಮೊಬೈಲ್ ಅಪ್ಲಿಕೇಶನ್ ಗಳನ್ನು  ಬಳಸಬಹುದು.         

     ಈ ರೀತಿಯಲ್ಲಿ  ಇಬ್ಬರೂ ಚರ್ಚೆ ನಡೆಸುವುದರಿಂದ ಮನೆಯಲ್ಲಿನ ಬೇಡಿಕೆಗಳನ್ನು ಅರ್ಥೈಸಿಕೊಂಡು ಅದರ ಪೂರೈಕೆ ಹೇಗೆ,  ಯಾವಾಗ  ಮಾಡಬೇಕು ಎಂಬುದನ್ನು ನಿರ್ಧರಿಸಬಹುದು. ಇದರಿಂದ ಇಬ್ಬರಲ್ಲೂ ಸಮನ್ವಯತೆ  ಮೂಡಿ ಬರುತ್ತದೆ  ಜೊತೆಗೆ ಕೆಲಸಗಳು ಸರಾಗವಾಗಿ ಸಾಗುತ್ತವೆ.   ಇಲ್ಲದೆ ಹೋದರೆ ಮನೆಯಲ್ಲಿರುವ ಇತರೆ ಸದಸ್ಯರುಗಳು ಬೇಡಿಕೆಗಳನ್ನು ಇಡುವುದು,  ಒಬ್ಬರು ಮಾತ್ರ  ಅವುಗಳನ್ನು ನಿರ್ವಹಿಸುವುದು, ಪೂರೈಸುವುದು   ಸಾಧ್ಯವಾಗದ ಮಾತು.   ಅದಕ್ಕೆ   ಮನೆಯ ಎಲ್ಲಾ ಸದಸ್ಯರು   ಬೇಡಿಕೆ ಹಾಗೂ ಪೂರೈಕೆಗಳನ್ನು ಅರ್ಥಮಾಡಿಕೊಳ್ಳಬೇಕು. ಬಜೆಟ್ ಗೆ ಎಲ್ಲರೂ ಸ್ಪಂದಿಸಬೇಕು  ಆಗಲೇ  ಮನೆಯಲ್ಲಿ  ಸಮತೋಲನವಿರುತ್ತದೆ.

     ಸಾಮಾನ್ಯವಾಗಿ  ಮನೆಯಲ್ಲಿ  ಮಾಡಬೇಕಾದ ಕೆಲಸಗಳ ಪಟ್ಟಿಯನ್ನು (To-Do List) ಸಿದ್ಧಪಡಿಸುತ್ತಾ ಹೋಗಬೇಕು.     ಈ ಪಟ್ಟಿ  ನಿಮ್ಮ  ಕೆಲಸಗಳನ್ನು  ಮರೆಯದೆ  ಮಾಡಲು  ಸಹಕಾರಿಯಾಗುತ್ತದೆ ಅಲ್ಲದೆ ನಿಮ್ಮ ಚರ್ಚೆಗೆ  ವಿಷಯಗಳಾಗಿ  ಪ್ರಸ್ತುತವಾಗುತ್ತದೆ.   ಇದಲ್ಲದೆ  ನೀವು ಮಾಡುವ ಖರ್ಚುಗಳನ್ನು  ಒಂದು ಪುಸ್ತಕದಲ್ಲಿ  ಬರೆಯಿರಿ, ಅದಕ್ಕಿಂತಲೂ ಉತ್ತಮವಾದ  ಉಪಾಯವೆಂದರೆ  ಒಂದು ಮೊಬೈಲ್ ಅಪ್ಲಿಕೇಶನ್ ನಲ್ಲಿ  ದಾಖಲಿಸುತ್ತಾ ಹೋಗಬೇಕು.  ಇದು  ನೀವು ಮಾಡುವ  ಖರ್ಚುಗಳ ವೈಕರಿಯನ್ನು  ತೋರಿಸುತ್ತದೆ  ಇದರಿಂದ  ನೀವು ಚರ್ಚೆ  ಹಾಗೂ ವಿಶ್ಲೇಷಣೆ ಮಾಡಲು  ಅನುಕೂಲವಾಗುತ್ತದೆ.   ಇದು ಒಂದು ತ್ರಾಸದಾಯಕವಾದ ಕೆಲಸ  ಆದುದರಿಂದ  2 ರಿಂದ 3 ತಿಂಗಳು ಮಾಡಿದರು  ನಿಮಗೆ  ಒಂದು ಅಂದಾಜು ಲೆಕ್ಕ ಸಿಗುತ್ತದೆ.      

 ಸಾಕಷ್ಟು ಮನೆಗಳಲ್ಲಿ  ವೇತನ ಬಂದ  ಒಂದು ವಾರ ಅಥವಾ 15 ದಿವಸಗಳಲ್ಲಿ   ಹಣವೆಲ್ಲ ಮುಕ್ಕಾಲು ಪಾಲು ಖಾಲಿಯಾಗುತ್ತದೆ ಎಂದು ಹೇಳುವವರು ಹೆಚ್ಚು.    ನೀವು ಬಕಪಕ್ಷಿಗಳಂತೆ  ಕಾದು ಕುಳಿತು ನಿಮ್ಮ ವೇತನ ಅಥವಾ ಆದಾಯ ಬರುತ್ತಿದ್ದಂತೆ   ಎಲ್ಲವನ್ನು ಒಟ್ಟಿಗೆ ಖರ್ಚು ಮಾಡದಿರಿ.   ಅದರ ಬದಲಾಗಿ  ಕೇವಲ ಮಾಸಿಕ ಬಿಲ್ ಗಳನ್ನು ಕಟ್ಟಿ  ಉಳಿದವನ್ನು  10 ದಿನಗಳ ಕಾಲಾವಧಿಯ  3 ಸ್ಲಾಟ್ ಗಳನ್ನು  ಮಾಡಿಕೊಳ್ಳಿ.   ಅಂದರೆ   ಮೊದಲ 10 ದಿನದಲ್ಲಿ   ಕೆಲವು ಕಾರ್ಯಗಳನ್ನು ಮಾಡಿ.  ಉಳಿದ ಕೆಲಸಗಳನ್ನು 10 ದಿನಗಳ  ಇನ್ನು ಎರಡು ಸ್ಲಾಟ್ ಗಳಲ್ಲಿ  ಹಂಚಿಕೆ ಮಾಡಿ.   ಇದರಲ್ಲಿ ಕಾಯಲಾರದ ಕೆಲಸಗಳನ್ನು  ಮೊದಲ ಸ್ಲಾಟ್ ನಲ್ಲೆ ಮುಗಿಸಿ, ಆತುರವಲ್ಲದ ಕಾಯಬಲ್ಲ ಕೆಲಸಗಳನ್ನು ಉಳಿದ ಇನ್ನೆರಡು ಸ್ಲಾಟ್ ಗಳಲ್ಲಿ  ಮಾಡಬಹುದು.    ಇದರಿಂದ  ತಿಂಗಳ ಮೊದಲ ವಾರದಲ್ಲೇ  ಹಣವೆಲ್ಲ ಖರ್ಚಾಗಿ  ಅಭದ್ರತೆಯಿಂದ  ಚಿಂತೆ ಮಾಡುವುದು ತಪ್ಪುತ್ತದೆ  ಹಾಗೂ  ಮುಂಬರುವ ತುರ್ತು ಪರಿಸ್ಥಿತಿಗಳನ್ನು  ನಿಭಾಯಿಸಲು  ಹಣದ ಅಭಾವ  ಇರುವುದಿಲ್ಲ.   ಹೀಗೆ ಮಾಡುವುದರಿಂದ  ನಿಮ್ಮ ಬ್ಯಾಂಕಿನ ಖಾತೆಯಲ್ಲಿ  ಹಣ ಉಳಿದು  ಮನದ ನೆಮ್ಮದಿಯನ್ನು ಕಾಪಾಡಲು  ಸಹಾಯವಾಗುತ್ತದೆ.    

 ಹೀಗೆ  ಮನೆಯಲ್ಲಿರುವ ದಂಪತಿಗಳು  ಹಾಗೂ ಹಿರಿಯರು  ಎಲ್ಲರೂ ಸೇರಿ  ಚರ್ಚೆಗಳ ಮೂಲಕ  ಹಾಗೂ ಒಪ್ಪಂದದ ಮೂಲಕ  ಮನೆಯನ್ನು ಹಾಗೂ ಹಣಕಾಸನ್ನು ನಿರ್ವಹಿಸಿದರೆ,  ಮನೆಯ  ಮತ್ತು  ಆರ್ಥಿಕ ನಿರ್ವಹಣೆ  ವಾಸ್ತವಿಕತೆಯ ನೆಲೆಗಟ್ಟಿನಲ್ಲಿ  ಸುಸೂತ್ರವಾಗಿ ನಡೆಯುತ್ತದೆ.  ಒಂದು ವೇಳೆ  ಮನೆಯ ಹಿರಿಯ ಸದಸ್ಯರು  ಇದಕ್ಕೆ  ಆಸಕ್ತಿ  ತೋರದಿದ್ದಲ್ಲಿ   ಅವರಿಗೆ   ಇದರ ಮಹತ್ವವನ್ನು  ವಿಸ್ತೃತವಾಗಿ ಹೇಳಿ   ಮನದಟ್ಟು ಮಾಡಬೇಕು  ಮತ್ತು   ಅವರು  ಇದಕ್ಕೆ ಸಹಕಾರ ಕೊಡುವಂತೆ  ಮನವೊಲಿಸಿ  , ಈ ಚಟುವಟಿಕೆಯಲ್ಲಿ   ಸಕ್ರಿಯವಾಗಿ   ಭಾಗವಹಿಸುವಂತೆ  ಮಾಡಬೇಕಾಗುತ್ತದೆ.


  


Thursday, February 1, 2024

ಹಣಕ್ಕೆ ಪ್ರತಿಯಾಗಿ ಸಿಗುವ ಮೌಲ್ಯ

 ಹಣಕ್ಕೆ ಪ್ರತಿಯಾಗಿ ಸಿಗುವ  ಮೌಲ್ಯ :


                                
ಹಣವೇ  ಮುಖ್ಯಾನಾ ? ಈ ಪ್ರಶ್ನೆಗೆ  ಸಿಗುವ  ಸರಳವಾದ ಉತ್ತರವೆಂದರೆ   'ಇಲ್ಲ'.   ಹಾಗಿದ್ದರೆ ಹಣ ಯಾಕೆ ಮುಖ್ಯವಲ್ಲ?   ಏಕೆಂದರೆ  ನಮಗೆ ಬೇಕಾದದ್ದು  ಹಣವಲ್ಲ  ಬದಲಾಗಿ  ಹಣವೆಂಬ ವಿನಿಮಯ ಮಾಧ್ಯಮದಿಂದ  ವಿನಿಮಯದಲ್ಲಿ ಸಿಗುವ  ಮೌಲ್ಯ  ಅಂದರೆ  ಉತ್ಪನ್ನಗಳು  ಹಾಗೂ ಸೇವೆಗಳು   ಹಾಗೂ ಅದರ ಮೂಲಕ  ನಮ್ಮ ಅವಶ್ಯಕತೆ  ಹಾಗೂ  ಆಸೆಗಳ  ಈಡೇರಿಕೆ. 


                                          ಚಿತ್ರ ಕೃಪೆ:  ಅಂತರ್ಜಾಲ

ಮೌಲ್ಯಗಳೆಂದರೆ ಯಾವುದು?   ಉತ್ತಮವಾದ ಆರೋಗ್ಯ,  ಆರ್ಥಿಕ ಮತ್ತು ಸಾಮಾಜಿಕ ಭದ್ರತೆ,   ಸುಸಜ್ಜಿತವಾದ ಮನೆ, ಪ್ರಯಾಣಕ್ಕೆ ವಾಹನದಂತಹ ಮೂಲ ಸೌಕರ್ಯ, ಆರೋಗ್ಯಕರ ಮನೋರಂಜನೆ,  ಸ್ನೇಹಿತರೊಡನೆ, ಕುಟುಂಬದೊಡನೆ  ಉಲ್ಲಾಸ ಗೊಳಿಸುವ ಪ್ರವಾಸ, ಆಸೆಗಳ ಈಡೇರಿಕೆ,  ಸ್ವಚ್ಛತೆ,  ಶಾಂತಿ-ನೆಮ್ಮದಿ, ಗುರಿಗಳ ಸಾಧನೆ ಹಾಗೂ  ಅಭಿವೃದ್ಧಿ, ಉತ್ತಮರ ಒಡನಾಟ,   ಮಕ್ಕಳ  ಶ್ರೇಯೋಭಿವೃದ್ಧಿ  ಹಾಗೂ  ಬೌದ್ಧಿಕ ವಿಕಾಸ,  ಸೃಜನಶೀಲತೆ ಹೆಚ್ಚಿಸುವ ಚಟುವಟಿಕೆ,  ಆರೋಗ್ಯಕರ ಕ್ರೀಡೆಗಳು, ಉತ್ತಮ ಹವ್ಯಾಸಗಳು ಇತ್ಯಾದಿ  

   ಮೇಲೆ ತಿಳಿಸಿದ  ಮೌಲ್ಯಗಳನ್ನು  ತಲುಪಲು  ಮಾಧ್ಯಮಗಳು ಬೇಕು ಅದಕ್ಕೆ ಉತ್ತಮವಾದ ಸೇವೆ  ಹಾಗೂ  ಉತ್ಪನ್ನಗಳ ಪಾತ್ರ ಮಹತ್ವದ್ದು. ಅದರಲ್ಲೂ ಉತ್ಪನ್ನಗಳು  ಹೆಚ್ಚು    ಲಾಭದಾಯಕವಾಗಿರುತ್ತದೆ ಅವು ಏಕೆ ಮಹತ್ವದ್ದು ಎಂದರೆ ಒಂದು ಉತ್ಪನ್ನವು ಕೂಡ ಸೇವೆಯನ್ನೇ ಒದಗಿಸುತ್ತದೆ, ಅವುಗಳಿಗೆ  ಒಮ್ಮೆ ಹಣ ಪಾವತಿ ಮಾಡಿಕೊಂಡು ಕೊಂಡರೆ ಅವು ನಮ್ಮ ಮಾಲೀಕತ್ವದಲ್ಲಿ  ಇರುವುದರಿಂದ   ಸೇವೆಗಳನ್ನು  ಪುನರತ್ಮಾಕವಾಗಿ  ಬಳಸಿಕೊಳ್ಳಬಹುದು.  ನಮ್ಮ ಬಳಿ ಇರುವ  ಕುಕ್ಕರ್ ,  ಗಣಕಯಂತ್ರ,   ವಾಹನ ,   ಮೊಬೈಲ್ ಫೋನ್  ಅಥವಾ  ಯಾವುದಾದರೂ ಸಲಕರಣೆಗಳು ಅಂದರೆ ಮನೆಯ ಪಾತ್ರೆಗಳು,  ಸೌಟು, ಚಮಚ ,  ಏಣಿ,  ಕುರ್ಚಿ, ಮೇಜು  ಇವುಗಳನ್ನು ಸಹ ಪುನರ್  ಬಳಕೆ ಮಾಡಿ    ಅವು ಕೊಡುವ  ಸೇವೆಗಳನ್ನು  ಪುನರತ್ಮಾಕವಾಗಿ   ಬಳಸಬಹುದು. ಅಂದರೆ  ಉತ್ಪನ್ನಗಳು  ತಮ್ಮ ಸೇವೆಗಳನ್ನು ಹೆಚ್ಚುವರಿ ಶುಲ್ಕವಿಲ್ಲದೆ  ಸತತವಾಗಿ  ಕೊಡುತ್ತವೆ. 

  ಅದೇ ರೀತಿಯಲ್ಲಿ ಹಣ ಪಾವತಿಸಿ  ಒಮ್ಮೆಲೆ  ಮಾತ್ರ  ಬಳಸಬಹುದಂತ  ಹೋಟೆಲ್  ಆಹಾರ,  ಬಾಡಿಗೆ ವಾಹನ,  ದಿನಸಿ,  ತರಕಾರಿ,  ಇಂಧನ,  ಬ್ಯೂಟಿ ಪಾರ್ಲರ್ ಸೇವೆ,  ಸಮಾರಂಭದ ಖರ್ಚು  ಇತ್ಯಾದಿ  ಸೇವೆಗಳು  ಪಾವತಿಸಿದ ಹಣಕ್ಕೆ ಒಮ್ಮೆ ಮಾತ್ರ ಬಳಸಬಹುದು.  ಇವುಗಳನ್ನು  ಉಪಭೋಗ್ಯ (consumables) ವಸ್ತುಗಳನ್ನಾಗಿ  ಗುರುತಿಸಬಹುದು. ಹೀಗೆ  ಉತ್ಪನ್ನಗಳು ಆಗಿರಲಿ,  ಸಲಕರಣೆಗಳಾಗಿರಲಿ  ಅಥವಾ ಸೇವೆಗಳಾಗಿರಲಿ  ನಮ್ಮ ಜೀವನದಲ್ಲಿ  ಬೇಕಿದ್ದ ಮೌಲ್ಯಗಳನ್ನು ಸೃಷ್ಟಿ ಮಾಡುವುದು.   ಆದುದರಿಂದ  ನಮಗೆ ಬೇಕಿರುವ  ಮೌಲ್ಯಗಳು  ಅಥವಾ ಸೇವೆಗಳ  ಕಡೆಗೆ ಗಮನವಿರಬೇಕೆ ಹೊರತು ಅದರ ಬೆಲೆಗಲ್ಲ ಅಥವಾ ಬರಿ ಹಣದ ಸಂಗ್ರಹಣೆಗಲ್ಲ.

 ಹಣ ಗಳಿಸುತ್ತಾ ಹೋದರೆ  ಅದಕ್ಕೆ ಮಿತಿ ಇರುವುದಿಲ್ಲ ಆದರೆ  ನೀವು ನಿಮ್ಮ ಅವಶ್ಯಕ  ವಸ್ತುಗಳನ್ನು  ಅಥವಾ  ನಿಮ್ಮ ಆಸೆಗಳನ್ನು  ಈಡೇರಿಸಲು ಹೊರಟರೆ ಜೊತೆಗೆ ಅದು ನಿಮ್ಮ ಜೀವನಕ್ಕೆ ಕೊಡುವ  ಮೌಲ್ಯಗಳಿಗೆ ಗಮನಹರಿಸಿದರೆ  ಅದಕ್ಕೊಂದು ಮಿತಿ ಇರುತ್ತದೆ  ಹಾಗೆಯೇ  ತೃಪ್ತಿಯ  ಕೊನೆ ಇರುತ್ತದೆ.   ಆದುದರಿಂದ  ನಿಮಗೇನು ಬೇಕು  ಎಂಬುದು ಸ್ಪಷ್ಟವಾಗಿ   ತಿಳಿದಿರಲಿ  ಆಗ  ನಿಮ್ಮ ಜೀವನದಲ್ಲಿ ಮೌಲ್ಯದ ಕಡೆಗೆ ಗಮನ ಹರಿಸಬಹುದು  ಹಾಗೂ  ಸಂತೃಪ್ತಿಗೆ ಒತ್ತು ಕೊಡಬಹುದು. 


ಒಂದು ವೇಳೆ ಜಗತ್ತನ್ನು  ಮೆಚ್ಚಿಸಬೇಕು  ಎಂಬ ಉದ್ದೇಶದಿಂದ  ಹೊರಟರೆ, ನೀವು ಅನಗತ್ಯವಾದಂತಹ   ಅದ್ದೂರಿ  ಮತ್ತು ಆಡಂಬರದ ವಸ್ತುಗಳನ್ನು,  ನಿಮ್ಮ ಬಳಿ ಇಲ್ಲದ ದುಡ್ಡಿನಿಂದ  (ಸಾಲದ  ಹಣದಿಂದ)  ಖರೀದಿಸಲು ಹೊರಟರೆ, ಆ ಜಗಮೆಚ್ಚುಗೆ ಎಂಬ ಕಾರ್ಯ ಯಾವುದೇ ಮೌಲ್ಯ   ಸೃಷ್ಟಿಸುವುದಿಲ್ಲ.  ನಿಮಗೆ ಹೊರೆಯಾಗಿ ಮಾನಸಿಕ ಹಿಂಸೆಯಾಗಿ  ಪರಿಣಮಿಸುತ್ತದೆ.   ಹಾಗಾಗಿ ಪೊಳ್ಳು ಪ್ರತಿಷ್ಠೆಯನ್ನು ಬಿಟ್ಟು  ಸರಿಯಾದ ಮೌಲ್ಯಗಳನ್ನು ಅರ್ಥೈಸಿಕೊಳ್ಳಿ  ಹಾಗೂ ಅದರ ಈಡೇರಿಕೆಯೊಂದಿಗೆ ತೃಪ್ತಿಯ ಜೀವನ ನಡೆಸಿ.


Monday, January 29, 2024

ಪಾರ್ಕಿನ್ ಸನ್ಸ್ ನಿಯಮ

  ಪಾರ್ಕಿನ್ ಸನ್ಸ್ ನಿಯಮ :


              ಮನೆ ಹಾಗೂ ಹಣವನ್ನು ನಿರ್ವಹಣೆ ಮಾಡುವ  ಯಜಮಾನ  ಪಾರ್ಕಿನ್ ಸನ್ಸ್ ನಿಯಮವನ್ನು ತಿಳಿಯುವುದು ಅತಿ ಮುಖ್ಯ.  ಇಲ್ಲದೆ ಹೋದರೆ  ಮುಂದೊಂದು ದಿವಸ  ಎಷ್ಟೇ ಹಣ ಸಂಪಾದಿಸಿದರು  ಯಾಕೆ ಅದು ಉಳಿಯುವುದಿಲ್ಲ ಎಂಬ  ಪ್ರಶ್ನೆ ಮೂಡುವುದು ಸಹಜ.   ಹಣ ಉಳಿಯದೆ ಇರುವುದಕ್ಕೆ  ಹಲವಾರು ಕಾರಣಗಳಿರುತ್ತವೆ, ಅದರಲ್ಲಿ ಒಂದು ಕಾರಣವನ್ನು  ಪಾರ್ಕಿನ್ ಸನ್ಸ್ ತಮ್ಮ ನಿಯಮದ  ಮೂಲಕ ಹೇಳುತ್ತಾರೆ. ಸಿರಿಲ್  ನಾರ್ತ್ ಕೋಟ್ ಪಾರ್ಕಿನ್ ಸನ್  ಒಬ್ಬ ಬ್ರಿಟಿಷ್  ಮೂಲದ ನೌಕೆಗಳ ಇತಿಹಾಸಗಾರ.  ಇವರು 1958ರಲ್ಲಿ The Parkinson's Law: The Pursuit of progress  ಎನ್ನುವ ಪುಸ್ತಕವನ್ನು  ಪ್ರಕಟಿಸಿದರು.  ಈ ಪುಸ್ತಕದಲ್ಲಿ ಅವರು  ಸಮಯದ ಬಗ್ಗೆ ಒಂದು ನಿಯಮವನ್ನು ಬರೆದಿದ್ದಾರೆ.  ಅದು ಕೆಳಕಂಡಂತೆ ಇದೆ.


                                 ಚಿತ್ರ ಕೃಪೆ:  ಅಂತರ್ಜಾಲ

"ಕೆಲಸವು ಅದರ ಪೂರ್ಣಗೊಳಿಸುವಿಕೆಗೆ ನಿಗದಿಪಡಿಸಿದ ಸಮಯವನ್ನು ತುಂಬಲು ವಿಸ್ತರಿಸುತ್ತದೆ"

ಅಂದರೆ  ನಿಮಗೆ ಕೊಟ್ಟಂತಹ ಸಮಯದ ಗಡುವಿಗೆ ತಕ್ಕಂತೆ  ನಿಮ್ಮ  ಕೆಲಸವು  ವಿಸ್ತರಿಸುತ್ತದೆ.    ಉದಾಹರಣೆಗೆ  ವಿದ್ಯಾರ್ಥಿಗಳು  ವಾರ್ಷಿಕ ಪರೀಕ್ಷೆಯು ಮಾರ್ಚ್ ನಲ್ಲಿ ಇರುವುದರಿಂದ ಇನ್ನೂ ಬೇಕಾದಷ್ಟು ಸಮಯವಿದೆ ಎಂದು ಉದಾಸೀನತೆ ಮಾಡಿ, ಜನವರಿಯಲ್ಲಿ ಗಂಭೀರವಾಗಿ ಓದಲು ಪ್ರಾರಂಭಿಸಬಹುದು  ಅಂದರೆ  ಇನ್ನೂ ಬೇಕಾದಷ್ಟು ಸಮಯವಿದೆ  ಎಂಬ ತಾತ್ಸಾರ  ಕಾಲಹರಣ ಮಾಡುವಂತೆ ಮಾಡುತ್ತದೆ. ಓದುವ ಕಾರ್ಯವನ್ನು ಕೊನೆಯ ತನಕ ಮಾಡುವಂತೆ  ವಿಸ್ತರಿಸುತ್ತದೆ.   

ಇದೇ ರೀತಿ  ಆರ್ಥಿಕತೆ ಬಗ್ಗೆ ಇರುವ ನಿಯಮವೆಂದರೆ

"ಜನರು ಎಷ್ಟೇ ಹಣವನ್ನು ಸಂಪಾದಿಸಿದರೂ,  ಅವರ ಖರ್ಚುಗಳು  ಗಳಿಸಿದ ಆದಾಯಕ್ಕೆ ತಕ್ಕಂತೆ ವಿಸ್ತರಿಸುತ್ತದೆ"

 ಈ ನಿಯಮದ ಮೂಲಕ  ಅವರು ಹೇಳಬಯಸುವುದು ಜನರು  ತಮ್ಮ ವೃತ್ತಿ ಜೀವನದ ಆರಂಭದ ಆದಾಯಕ್ಕಿಂತ (ವೇತನ/ವ್ಯಾಪಾರ/ಉದ್ಯಮದ ಲಾಭ)  ಭವಿಷ್ಯದಲ್ಲಿ ಎಷ್ಟೇ ಪಟ್ಟು ಹಣವನ್ನು ಸಂಪಾದಿಸಿದರು  ಅವರ ಖರ್ಚುಗಳು  ಅವರ ಜೀವನ ಶೈಲಿಯ ತಕ್ಕಂತೆ  ಸಂಪಾದನೆಯ ಸಮಕ್ಕೆ ವಿಸ್ತರಿಸುತ್ತದೆ. 

 ಉದಾಹರಣೆಗೆ ಜನರು  ಒಂದು ದರ್ಶಿನಿ ಹೋಟೆಲ್ ನಲ್ಲಿ ಊಟ ಮಾಡುತ್ತಿದ್ದವರು   ಹಣ ಸಂಪಾದನೆ ಹೆಚ್ಚಾದಂತೆ   ಒಂದು ದುಬಾರಿ ರೆಸ್ಟೋರೆಂಟ್ ನಲ್ಲಿ  ಊಟ ಮಾಡುತ್ತಾರೆ,  ಹಾಗೆಯೆ  ಒಂದು ಸಾಧಾರಣ ಮನೆಯಲ್ಲಿ ವಾಸ ಮಾಡುವವರು  ಹಣ ಗಳಿಸಿದಂತೆ  ದೊಡ್ಡ ಬಂಗಲೆಯಲ್ಲಿ ವಾಸ ಮಾಡಲು ಮುಂದಾಗುತ್ತಾರೆ. ಒಂದು ದ್ವಿಚಕ್ರ ವಾಹನದಲ್ಲಿ ಓಡಾಡುವವರು ಒಂದು ದೊಡ್ಡ ಕಾರನ್ನು  ಹಾಗೆಯೇ ಮುಂದೆ  ಐಷಾರಾಮಿ ಕಾರನ್ನು ಕೊಂಡುಕೊಳ್ಳಲು ಮುಂದಾಗುವರು. ಇದೇ ರೀತಿಯಲ್ಲಿ  ಇಂದು  ಹಲವು ಬಗೆಯ ವಿದ್ಯುನ್ಮಾನ ಉಪಕರಣಗಳು, ಉತ್ಪನ್ನಗಳು  ಲಭ್ಯವಿದೆ.  ಹೀಗೆ ನಾವು  ಹತ್ತು ಹಲವಾರು  ಉತ್ಪನ್ನಗಳ ಬಳಕೆ ಮಾಡುತ್ತೇವೆ ಹಾಗೆಯೇ ವಿವಿಧ ಸೇವೆಗಳನ್ನು  ಬಳಸಿಕೊಳ್ಳುತ್ತೇವೆ .  ಒಂದೊಂದೇ ಇತರ ವೆಚ್ಚಗಳನ್ನು  ಸೇರಿಸುತ್ತಾ ಹೋದರೆ  ಇವುಗಳ ಒಟ್ಟು ಸಮಗ್ರ  ವೆಚ್ಚವು ಜನರ ಆದಾಯದ ಸಮಕ್ಕೆ ಅಥವಾ ಆದಾಯವನ್ನು ಮೀರಿ  ಬೆಳೆಯುತ್ತದೆ. 
                                                                                                                                                                      ಮಾರುಕಟ್ಟೆಯಲ್ಲಿ ಒಂದು ಉತ್ಪನ್ನ ಕಡಿಮೆ ಬೆಲೆಯ ಬ್ರಾಂಡ್ ನಿಂದ  ಹಿಡಿದು  ಕೈಗೆಟುಕಲಾರದ  ಐಶಾರಾಮಿ ಬ್ರಾಂಡ್ ಗಳ ತನಕ ಎಲ್ಲಾ ವಿವಿಧ  ಬೆಲೆಗಳಲ್ಲಿ ಲಭ್ಯವಿದೆ. ಸಾಮಾನ್ಯವಾಗಿ  ಜನರ ಅವಶ್ಯಕತೆಗಳಿಗೆ ಮಿತಿ ಇರುತ್ತದೆ  ಆದರೆ ಆಸೆಗಳಿಗೆ ಮಿತಿ ಇರುವುದಿಲ್ಲ. ಹೀಗಾಗಿ ಜನರು ಎಷ್ಟೇ ಸಂಪಾದನೆ ಮಾಡಿದರು  ಜೀವನ ಶೈಲಿಗೋಸ್ಕರ  ಹಾಗೂ ಪರರ ಮೆಚ್ಚುಗೆಗೋಸ್ಕರ  ತಮ್ಮ ಜೀವನ ಶೈಲಿಯನ್ನು ಮೇಲ್ದರ್ಜೆಗೆ ಏರಿಸಿ ಹಣವನ್ನು ಅಧಿಕವಾಗಿ ಖರ್ಚು ಮಾಡುತ್ತಾರೆ. ಪರಿಣಾಮವಾಗಿ ಹಣದ ಕೊರತೆಯಿಂದ, ಅಭದ್ರತೆಯಿಂದ, ಭವಿಷ್ಯದ  ಅನಿಶ್ಚಿತತೆಗಳಿಂದ  ಕೊರಗುತ್ತಾರೆ. ಹೀಗಾಗಿ  ಭವಿಷ್ಯದಲ್ಲಿ ಬರುವ  ಉದ್ಯೋಗ ಮುಂಬಡ್ತಿ ಮತ್ತು ವೇತನ ಪರಿಷ್ಕರಣೆ  ನಮ್ಮ ಈಗಿನ  ಸಮಸ್ಯೆಗಳನ್ನು ಪರಿಹಾರ ಮಾಡುತ್ತದೆ  ಎಂದು  ಹೇಳಲಾಗದು. ಆದರೆ  ನಮ್ಮ ಈ ತಿಳುವಳಿಕೆಯಿಂದ,  ನಾವು  ಪ್ರಜ್ಞಾಪೂರ್ವಕವಾಗಿ  ಪ್ರಯತ್ನಿಸಿದಲ್ಲಿ   ಖರ್ಚುಗಳನ್ನು  ಮಿತಿಗೊಳಿಸಿ   ಒಂದಷ್ಟರ ಮಟ್ಟಿಗೆ  ನಿಯಂತ್ರಣ ಸಾಧಿಸಿ  ಜೀವನವನ್ನು  ಸುಗಮಗೊಳಿಸಬಹುದು.

ಉಳಿದ ಕಾರಣಗಳು ಯಾವುವು    

ಕೇವಲ ಪಾರ್ಕಿನ್ ಸನ್ಸ್ ನಿಯಮ ಕೊಟ್ಟ ಕಾರಣ ಮಾತ್ರವಲ್ಲ, ಹಣದ ಕೊರತೆಗೆ ಇನ್ನೂ ಹಲವಾರು ಕಾರಣಗಳಿವೆ.  ಕೆಲವು ನಮ್ಮ ನಿಯಂತ್ರಣದಲ್ಲಿರುತ್ತದೆ,  ಇನ್ನುಳಿದವು ನಮ್ಮ ನಿಯಂತ್ರಣಕ್ಕೆ ಬಾರದು. ಅವುಗಳು ಈ ಕೆಳಕಂಡಂತಿವೆ

ತೆರಿಗೆಗಳು:

 ಭಾರತದಲ್ಲಿ  ಹಲವು ವಿಧದ ತೆರಿಗೆಗಳಿವೆ  ಅವುಗಳಲ್ಲಿ ಪ್ರಮುಖವಾಗಿ ಎರಡು ವಿಧಗಳು.   ಅವುಗಳೆಂದರೆ ನೇರ ತೆರಿಗೆ (Direct Tax)  ಹಾಗೂ  ಪರೋಕ್ಷ ತೆರಿಗೆ (Indirect Tax).    ವೇತನದಾರರಿಗೆ    ಮಾಸಿಕ ವೇತನ ಬರುವುದೇ ತೆರಿಗೆಗಳು ಕಡಿತಗೊಳಿಸಿದ ನಂತರ.  ಇದರಲ್ಲಿ  ವೇತನದಾರನು  ಶೇ. 5ರಿಂದ ಶೇ. 30 ತನಕ ಮಾಸಿಕ ವೇತನವನ್ನು  ಆದಾಯ ತೆರಿಗೆ(Income Tax) ರೂಪದಲ್ಲಿ  ಸರಕಾರಕ್ಕೆ  ಕೊಡಬೇಕಾಗುತ್ತದೆ.   ಇದು ನೇರ  ತೆರಿಗೆ  ಆದರೆ  ತೆರಿಗೆ ಇಲ್ಲಿಗೆ ನಿಲ್ಲುವುದಿಲ್ಲ  ಕೈಗೆ ಬಂದ ಬಾಕಿ ಉಳಿದ ಶೇ. 70ರಷ್ಟು ವೇತನದಲ್ಲಿ ಖರ್ಚು ಮಾಡುವಾಗ ಪರೋಕ್ಷ ತೆರಿಗೆಯನ್ನು ಕಟ್ಟಬೇಕಾಗುತ್ತದೆ.  ಇದರ ಅಡಿಯಲ್ಲಿ  ಪ್ರಮುಖವಾಗಿ  ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ - GST),   ಮೌಲ್ಯವರ್ಧಿತ ತೆರಿಗೆ (ವಿಎಟಿ-VAT),  ಮಾರಾಟ ತೆರಿಗೆ(Sales Tax),  ಸೇವಾ ತೆರಿಗೆಗಳಿವೆ (Service tax).  ಇವುಗಳಲ್ಲಿ  ಹಲವು ಮಟ್ಟದ ಶೇಕಡವಾರು ತೆರಿಗೆಗಳಿವೆ (5%, 12%, 18% ಹಾಗೂ 28%). 


ಇದಷ್ಟೇ ಅಲ್ಲದೆ  ಬಂಡವಾಳ ಹೂಡಿಕೆದಾರರಿಗೆ  ಬಂಡವಾಳ ಲಾಭ ತೆರಿಗೆ (Capital Gains Tax),  ಸ್ವಂತ ಮನೆ ಹೊಂದಿದ್ದರೆ ವಾರ್ಷಿಕ ಆಸ್ತಿ ತೆರಿಗೆ(Property Tax),  ವಾಹನ ಕೊಂಡುಕೊಂಡರೆ ಜೀವಿತಾವಧಿ ರಸ್ತೆ ತೆರಿಗೆ (Lifetime Road Tax),  ನೋಂದಣಿ ಶುಲ್ಕ(Registration fee), ರಸ್ತೆ ಸುಂಕ(Toll Tax),  ಹೆಚ್ಚುವರಿ ಶುಲ್ಕ (Surcharge),  ಸೆಸ್ (cess)  ಹೀಗೆ  ಹಲವು ರೀತಿಯ  ನೇರ, ಪರೋಕ್ಷ ಹಾಗೂ  ಇತರೆ  ತೆರಿಗೆಗಳನ್ನು ನಾಗರಿಕರು  ಸರ್ಕಾರಕ್ಕೆ  ಕಟ್ಟಬೇಕಾಗುತ್ತದೆ.  

     ಒಟ್ಟಾರೆಯಾಗಿ  ಭಾರತದ ನಾಗರಿಕರು  ಸಾಮಾನ್ಯವಾಗಿ   ತಮ್ಮ ಆದಾಯದ  ಶೇ.42 ರಿಂದ  ಶೇ. 50ರವರೆಗೆ   ಆದಾಯವನ್ನು  ತೆರಿಗೆಯ ರೂಪದಲ್ಲಿ  ಸರ್ಕಾರಕ್ಕೆ ಕಟ್ಟುತ್ತಾರೆ.   ಅಂದರೆ  ತಾವು ದುಡಿದ  ಐದರಿಂದ ಆರು ತಿಂಗಳ  ಆದಾಯವನ್ನು  ತೆರಿಗೆ ರೂಪದಲ್ಲಿ  ಸರ್ಕಾರಕ್ಕೆ ಕಟ್ಟುತ್ತಾರೆ.  ಇದು ಸಹ  ಹಣದ ಅಭಾವಕ್ಕೆ  ಕೊಡುಗೆಯನ್ನು ನೀಡುತ್ತದೆ. ಆದರೆ  ತೆರಿಗೆಗಳ ಮೇಲೆ  ಹೆಚ್ಚಿನ ಸಂಶೋಧನೆ ನಡೆಸಿ  ತೆರಿಗೆ ಕಾನೂನು ನಿಯಮಗಳ ತಿಳುವಳಿಕೆಯನ್ನು ಹೆಚ್ಚಿಸಿಕೊಂಡು  ಸರ್ಕಾರ  ಒದಗಿಸಿರುವ  ಅವಕಾಶಗಳ ಸರಿಯಾದ ಬಳಕೆಯಿಂದ  ಅನಗತ್ಯ  ತೆರಿಗೆಯನ್ನು  ಕಟ್ಟದೆ ಒಂದು ಮಟ್ಟಿಗೆ ಹಣವನ್ನು ಉಳಿಸಬಹುದು.    

ಹಣದುಬ್ಬರ:

ಹಣದುಬ್ಬರವೆಂದರೆ  ಸರಕು ಮತ್ತು ಸೇವೆಗಳಲ್ಲಿ ಬೆಲೆಗಳ   ಹೆಚ್ಚಳ.  ಪ್ರತಿ  ವರ್ಷವೂ  ದೇಶದಲ್ಲಿ ಹಣದುಬ್ಬರ ಇದ್ದೇ ಇರುತ್ತದೆ  ಅದರ ಶೇಖಡಾವಾರು ಪ್ರಮಾಣ ವರ್ಷದಿಂದ ವರ್ಷಕ್ಕೆ  ಬದಲಾಗುತ್ತಿರುತ್ತದೆ.  ಹಣದುಬ್ಬರದ ಪ್ರಮಾಣ ಕಡಿಮೆ ಇದ್ದಷ್ಟು  ಬೆಲೆಗಳು ಕಡಿಮೆ ಇರುತ್ತದೆ  ಅದು ಹೆಚ್ಚಿದಷ್ಟು  ವಸ್ತುಗಳು ಮತ್ತು ಸೇವೆಗಳ ಬೆಲೆ  ಹೆಚ್ಚಾಗಿರುತ್ತದೆ.    ಹಣದುಬ್ಬರದಿಂದ ರೂಪಾಯಿಯು ತನ್ನ ಮೌಲ್ಯವನ್ನು ಕಳೆದುಕೊಳ್ಳುತ್ತದೆ.  ಉದಾಹರಣೆಗೆ  ಇಂದು ಹಣದುಬ್ಬರ ಶೇ. 7 ಇದೆ ಎಂದು ತಿಳಿಯೋಣ,  ಈ ವರ್ಷ ಒಂದು ವಸ್ತು  ರೂ.100 ಕ್ಕೆ   ಸಿಕ್ಕರೆ  ಅದೇ ವಸ್ತುವಿನ  ಬೆಲೆ  ಮುಂದಿನ ವರ್ಷಕ್ಕೆ ರೂ.107 ಆಗಿರುತ್ತದೆ.  
           ವೇತನದಾರರ ವಾರ್ಷಿಕ ವೇತನದಲ್ಲಿ ಪರಿಷ್ಕರಣೆಯು  ಹಣದುಬ್ಬರಕ್ಕಿಂತ ಹೆಚ್ಚಿದ್ದರೆ  ಅದು ವೇತನದಲ್ಲಿ ಹೆಚ್ಚಳವಾದಂತೆ,  ಇಲ್ಲದೆ ಹೋದರೆ  ಆ ಪರಿಷ್ಕರಣೆ ಕೇವಲ  ಹಣದುಬ್ಬರಕ್ಕೆ ಹೊಂದಾಣಿಕೆ ಆಗುತ್ತದೆ ಅಥವಾ ವೇತನದ ಮೌಲ್ಯ ಕುಸಿಯುತ್ತದೆ ಹೊರತಾಗಿ  ನಿಮ್ಮ ಆದಾಯದಲ್ಲಿ ಏರಿಕೆಯಾಗುವುದಿಲ್ಲ.  ಹೀಗೆ  ನಾವು ದುಡಿದ ಹಣದ  ಮೌಲ್ಯವು  ಕುಸಿಯುತ್ತಿರುತ್ತದೆ.   ಹೀಗಾಗಿ ಹಣದುಬ್ಬರ ಸಹ  ಹಣದ ಅಭಾವಕ್ಕೆ ದೊಡ್ಡ ಕೊಡುಗೆಯನ್ನು  ಕೊಡುತ್ತದೆ.    


ಹೆಚ್ಚಾಗುವ ಜವಾಬ್ದಾರಿಗಳು:

ಸಾಮಾನ್ಯ ಜೀವನ ನೋಡಿದಾಗ  ವಿದ್ಯಾಭ್ಯಾಸ ಮುಗಿಸಿದ ನಂತರ  ತರುಣ ತರುಣಿಯರು ಸಂಪಾದಿಸಲು  ಆರಂಭಿಸುತ್ತಾರೆ.   ಆ  ಅವಿವಾಹಿತ ಜೀವನದ ಹಂತದಲ್ಲಿ  ಅವರಲ್ಲಿ ಹಣವು ಹೆಚ್ಚಾಗಿರುತ್ತದೆ  ಆದರೆ  ಖರ್ಚುಗಳು ಕಡಿಮೆ ಇರುತ್ತದೆ. ಆಗ ಹಣದ ಕೊರತೆಯು ಕಾಣುವುದಿಲ್ಲ.   

ನಂತರದ ಹಂತಗಳಲ್ಲಿ  ವಿವಾಹಿತರಾಗಿ  ಇನ್ನೊಬ್ಬ ವ್ಯಕ್ತಿಯ ಜವಾಬ್ದಾರಿ ಹೊರುತ್ತಾರೆ. ಸಂಗಾತಿಯ  ಮೂಲಭೂತ ಅವಶ್ಯಕತೆಗಳು  ಹಾಗೂ ಕನಿಷ್ಠ ಆಸೆಗಳು  ಹಣದ ಬೇಡಿಕೆಯನ್ನು  ಹೆಚ್ಚು ಮಾಡುತ್ತದೆ. ಉದ್ಯೋಗಕ್ಕಾಗಿ  ನಗರಕ್ಕೆ ವಲಸೆ ಬಂದವರಾದರೆ  ಸಂಗಾತಿ ಹಾಗೂ ಸಂಸಾರಕ್ಕಾಗಿ  ಹೊಸ ಮನೆಯನ್ನು  ಮಾಡಬೇಕಾಗುತ್ತದೆ.  ಮನೆಗೆ ಅಗತ್ಯ ವಸ್ತುಗಳು  ಹಾಗೂ  ಸೌಕರ್ಯಗಳನ್ನು  ಒದಗಿಸಬೇಕಾಗುತ್ತದೆ. ನಂತರ  ಒಂದು ಅಥವಾ ಎರಡು ಮಕ್ಕಳಾಗುತ್ತಾರೆ ಹಾಗೆಯೇ  ಅವರ  ಅವಶ್ಯಕತೆಗಳು  ಮತ್ತು ಆಸೆಗಳು   ಖರ್ಚುಗಳನ್ನು ಹೆಚ್ಚು ಮಾಡುತ್ತಾ  ಹೋಗುತ್ತದೆ. ಪರಿವಾರಕ್ಕಾಗಿ  ಒಂದು ಕಾರನ್ನು  ಕೊಂಡುಕೊಳ್ಳ ಬೇಕಾಗುತ್ತದೆ.  ಕುಟುಂಬದ ಗಾತ್ರಕ್ಕೆ ತಕ್ಕಂತೆ  ಸ್ವಂತ ನಿವೇಶನ ಕೊಂಡು ನಂತರ ಸುಸಜ್ಜಿತವಾದ ಮನೆಯನ್ನು ಕಟ್ಟಬೇಕಾಗುತ್ತದೆ.  

ಕುಟುಂಬದ ಎಲ್ಲಾ ಸದಸ್ಯರಿಗೆ ಸೌಲಭ್ಯಗಳ ಪೂರೈಸ ಬೇಕಾಗುತ್ತದೆ, ಎಲ್ಲರ ರಕ್ಷಣೆ ಮಾಡಬೇಕು ಹಾಗೂ ಸಣ್ಣಪುಟ್ಟ ಆಸೆಗಳನ್ನು  ಈಡೇರಿಸಬೇಕಾಗುತ್ತದೆ .    ಹೀಗೆಯೇ ಪ್ರಮುಖ ಹಂತಗಳಾದ ಮಕ್ಕಳ ವಿದ್ಯಾಭ್ಯಾಸ,   ವಿವಾಹ  ಹಾಗೂ  ನಿವೃತ್ತಿಯ ಪಿಂಚಣಿಯಂತಹ   ಅನೇಕ ಬೇಡಿಕೆಗಳು ಕಾಲ ಕಾಲಕ್ಕೆ ಉದ್ಭವವಾಗುತ್ತದೆ.  ಈ ಹೊಸ ಬೇಡಿಕೆಗಳು  ಖರ್ಚುಗಳನ್ನು ನಿಮ್ಮ ಆದಾಯದ  ಮಟ್ಟಕ್ಕೆ ತಲುಪಿಸುತ್ತವೆ,   ಎಷ್ಟೋ ಬಾರಿ ಆದಾಯವನ್ನು ಮೀರಿ ಬೇಡಿಕೆಗಳು ಬೆಳೆಯುತ್ತವೆ.   ಹೀಗೆ ಹಂತ ಹಂತವಾಗಿ ಹೆಚ್ಚಾಗುವ ಹಣದ ಬೇಡಿಕೆಗಳು  ಎಷ್ಟೇ ದುಡಿದರು  ಹಣ ಸಾಕಾಗುವುದಿಲ್ಲ ಎಂಬ ಭಾವನೆಯನ್ನು  ತರಿಸುತ್ತದೆ. ಆದರೆ  ನಮ್ಮ ಈ ತಿಳುವಳಿಕೆಯಿಂದ,  ನಾವು  ಪ್ರಜ್ಞಾಪೂರ್ವಕವಾಗಿ  ಸಂಗಾತಿಯೊಡನೆ ಕುಳಿತು  ಪ್ರತಿ ತಿಂಗಳ  ಆಯ- ವ್ಯಯಗಳ ಯೋಜನೆ ಹಾಕಿ  ಸಂಸಾರವನ್ನು  ಬುದ್ಧಿವಂತಿಕೆಯಿಂದ ನಿಭಾಯಿಸದಲ್ಲಿ  ಜೀವನದ ದೋಣಿಯನ್ನು  ಸರಾಗವಾಗಿ ಸಾಗಿಸಬಹುದು.       

 ಸಾರಾಂಶ:

 ಸಾಮಾನ್ಯವಾಗಿ  ಜನರು  ತಾವು  ಗಳಿಸಿದ  ಹಣ  ಎಲ್ಲಾ ಖರ್ಚಾಗಿ  ನಮಗೇನು ಉಳಿಯುವುದಿಲ್ಲ  ಎಂದು  ಚಿಂತಿಸುತ್ತಾರೆ.   ನಮ್ಮ ಹಣದ  ಕೊರತೆಯಲ್ಲಿ  ನಮ್ಮ ಅವಶ್ಯಕತೆ , ಆಸೆಗಳಿಗೆ ಮಾಡುವ ಖರ್ಚುಗಳ         ಹೊರತಾಗಿ   ನಮ್ಮ ನಿಯಂತ್ರಣಕ್ಕೆ  ಬಾರದ  ಹಲವಾರು ಅಂಶಗಳು  ಒಳಗೊಂಡಿರುತ್ತದೆ  ಹೀಗಾಗಿ  ನಮ್ಮ ಖರ್ಚುಗಳ ಹತೋಟಿ  ಸಂಪೂರ್ಣವಾಗಿ ನಮ್ಮಲ್ಲಿ ಇರುವುದಿಲ್ಲ  ಅದಕ್ಕೆ  ಇರುವ   ಕಾರಣಗಳು  ಈ ಕೆಳಕಂಡಂತೆ  ಇವೆ.

ಪಾರ್ಕಿನ್ ಸನ್ಸ್  ನಿಯಮ :   ಆದಾಯಕ್ಕೆ ತಕ್ಕಂತೆ  ಜನರು  ತಮ್ಮ ಜೀವನ ಶೈಲಿಯನ್ನು   ಮೇಲ್ದರ್ಜೆಗೆ ಏರಿಸುತ್ತಾ  ದುಬಾರಿ   ಹಾಗೂ  ಐಷಾರಾಮಿ  ಉತ್ಪನ್ನಗಳು ಹಾಗೂ   ಸೇವೆಗಳನ್ನು ಪಡೆಯುತ್ತಾರೆ. ಇದು  ಹಣದ ಕೊರತೆಗೆ ಕಾರಣವಾಗುತ್ತದೆ.
ಸರ್ಕಾರದ  ತೆರಿಗೆ ಪದ್ಧತಿ:   ನಮ್ಮ  ಆದಾಯದ ಹಣದಲ್ಲಿ  ತೆರಿಗೆ ಮೂಲಕ ದೊಡ್ಡ ಪಾಲು ಮೊತ್ತವನ್ನು ಸರ್ಕಾರಕ್ಕೆ ಕೊಡಲೇಬೇಕಾದಂತ ಅನಿವಾರ್ಯತೆ. ಇದು ಸಹ ನಮ್ಮ  ಹಣದ ಕೊರತೆಗೆ  ಕೊಡುಗೆಯಾಗುತ್ತದೆ 
ಹಣದುಬ್ಬರ:  ಪ್ರತಿ ವರ್ಷ ಇರುವ ಹಣದುಬ್ಬರ  ರೂಪಾಯಿಯ ಮೌಲ್ಯವನ್ನು  ಕುಸಿತಗೊಳಿಸಿ  ನಮ್ಮ ದುಡಿಮೆಯ ಮೌಲ್ಯವನ್ನು ಕಡಿಮೆ ಮಾಡುತ್ತದೆ.
ಕಾಲ ಕಾಲಕ್ಕೆ ಹೆಚ್ಚಾಗುವ ಜವಾಬ್ದಾರಿ: ಮನುಷ್ಯನ  ಜೀವನದಲ್ಲಿ ಹಂತ ಹಂತವಾಗಿ ಬರುವ     ಸಂಗಾತಿ, ಮಕ್ಕಳು,  ಮನೆ,  ವಾಹನ, ನಿವೃತ್ತಿ ಅನೇಕ ಜವಾಬ್ದಾರಿಗಳು ಕೂಡ  ಹಣದ ಕೊರತೆಗೆ  ಕಾರಣವಾಗುತ್ತದೆ.

Thursday, January 25, 2024

ಪರಿವಿಡಿ

ಪರಿವಿಡಿ  

 ವೈಯಕ್ತಿಕ ಹಣಕಾಸು:

        ಪಾರ್ಕಿನ್ ಸನ್ಸ್ ನಿಯಮ

        ಹಣಕ್ಕೆ ಪ್ರತಿಯಾಗಿ ಸಿಗುವ  ಮೌಲ್ಯ 

        ಒಬ್ಬರೇ  ನಿರ್ವಹಿಸುವುದು  ಅಸಾಧ್ಯ

        ಹಣದ ಜಾಡು ಹಿಡಿಯುವುದು    

        ವೈಯಕ್ತಿಕ ಹಣಕಾಸು ಯೋಜನೆ

        ಹಣದ ಗಳಿಕೆ 

        ಉದ್ದೇಶಕ್ಕಾಗಿ ಕೂಡಿಡುವುದು

        ಹಣದ ಉಳಿತಾಯ

        ರಕ್ಷಣೆ

        ಹೂಡಿಕೆ

 ನಡವಳಿಕೆ:

         ಗಣ್ಯ ನಗಣ್ಯ

         ತಡೆಗಟ್ಟುವಿಕೆ / ರಕ್ಷಣೆ  

         ಪರಿಸರ ಅತ್ಯಂತ ಶಕ್ತಿಶಾಲಿ 

         ನಮ್ಮ ನಿಯಂತ್ರಣದಲ್ಲಿ ಇರುವುದರ ಕಡೆಗೆ ಗಮನ 

         ಸ್ಪಷ್ಟವಾಗಿ ಯೋಚಿಸುವುದು

         ಪುಸ್ತಕ ಓದುವ ಅಭ್ಯಾಸ

          ಸಂವಹನದ ಉದ್ದೇಶ

         ಪ್ರತಿ ಗುರಿಗೂ ಅಳತೆ ಇರಬೇಕು  

          ದಿನಚರಿ
        
ಕಾರ್ಪೊರೇಟ್ ಸಂಸ್ಥೆಗಳ ಕಾರ್ಯವೈಕರಿ:


             ಮಾಡಬೇಕಾದ ಕಾರ್ಯಗಳ ಪಟ್ಟಿ    

             ಮೂಲ ಕಾರಣದ ವಿಶ್ಲೇಷಣೆ

             ಕೆಲಸ  ವಿಂಗಡಣೆಯ ಕ್ರಮ

             ಏನು  ತಡೆಯುತ್ತಿದೆ

             ಮೂಲಸೌಕರ್ಯ, ಪರಿಸರ, ಉಪಕರಣಗಳು,  ಪ್ರಕ್ರಿಯೆ

            ನಿರಂತರ ಕಲಿಕೆ

             ಅಡೆತಡೆಗಳು,  ಅಪಾಯ

Sunday, March 22, 2015

"ನೆರಳ ಹೆಜ್ಜೆ" ಕೃತಿ ಲೋಕಾರ್ಪಣೆ

                                       
ಪ್ರಿಯ ಸಾಹಿತ್ಯ ಪ್ರಿಯರೆ,

ನಾ ಬರೆದ ಮೊದಲ ಕೃತಿ ನೆರಳ ಹೆಜ್ಜೆ ಯನ್ನು ಭಾನುವಾರ ದಿ: 15-ಮಾರ್ಚ್ -2015ರಂದು ಲೋಕಾರ್ಪಣೆ ಮಾಡಲಾಯಿತು
ಖ್ಯಾತ ಕವಿ ಹಾಗು ಅಖಿಲ ಭಾರತ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದ  ಡಾ. ಸಿದ್ಧಲಿಂಗಯ್ಯ  ನವರು  ಕೃತಿ  ಬಿಡುಗಡೆ  ಮಾಡಿದರು. ಖ್ಯಾತ ರಂಗಭೂಮಿ ಹಾಗು ಚಲನ ಚಿತ್ರ ಕಲಾವಿದರಾದ  ಶ್ರೀ ಯಶವಂತ ಸರದೇಶಪಾಂಡೆ ಯವರು ಅಧ್ಯಕ್ಷತೆ  ವಹಿಸಿದ್ದರು ಹಾಗು ಕವಯಿತ್ರಿ  ಅರುಂಧತಿ ರಮೇಶ್ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು.
                                         
                                           ಪುಸ್ತಕ:              ನೆರಳ ಹೆಜ್ಜೆ
                                           ಕವಿ/ಲೇಖಕ :      ತೇಜಸ್ವಿ ಎ. ಸಿ
                                           ಸಾಹಿತ್ಯ ಪ್ರಕಾರ: ಕವನ ಸಂಕಲನ
                                           ಪ್ರಕಾಶಕರು:       ನಿರೂಪ್ ಪಬ್ಲಿಕೇಷನ್ಸ್
                                           ಪುಸ್ತಕದ ಬೆಲೆ:      ರೂ. 70
                                         



 

Friday, December 26, 2014

ಉದ್ಯಾನ


                      ಉದ್ಯಾನ

     ಮುಂಜಾವಿನ ಸಮಯದ ತಂಗಾಳಿಗೆ
     ಹೊಸ ಜೀವ ಕೊಡುವ ತಾಜಾತನಕೆ 
     ಬಂದು ಕುಳಿತಿಹರು ಉದ್ಯಾನವನದಲಿ

     ದೃಷ್ಟಿ ಆಯಿಸಿದಷ್ಟು ಸುಂದರ ಹಸಿರು
     ಸುಸಜ್ಜಿತ ನಡೆವ ಪಥ, ಪಕ್ಕದಲ್ಲೇ
     ಸಾಲಾಗಿ ನೆಟ್ಟಿರುವ ಕಲ್ಲಿನಾಸನಗಳು
  
     ಆಸೀನರಾಗಿ ಹರಟುತ್ತ ಕುಳಿತ ವೃದ್ಧರ 
     ಗುಂಪು, ಅವರದು ಅದೇ ರಾಜಕೀಯ,
     ಪತ್ರಿಕಾ ಸುದ್ದಿಗಳು ಚರ್ಚೆಯ ವಿಷಯ

     ಅಲ್ಲಿಯೇ ಪಕ್ಕದಲಿ ಕುಳಿತ ಜೋಡಿಗಳ
     ಪಿಸುಮಾತಿನೊಡನೆ ಕಿಸಕ್ಕನೆಯ ನಗೆ
     ಅವರಿಗೂ ಬೇಕು ಉದ್ಯಾನದ ಪರಿಸರ 

     ಇವೆಲ್ಲವೂ ನಮಗೇಕೆಂಬಂತೆ ಮಕ್ಕಳ
     ನಲಿದಾಟದಲಿ ಕೇಳಬರುತ್ತಿದೆ ಕಲರವ
     ತಂದಿಟ್ಟಿದೆ ಉದ್ಯಾನಕೆ ನವೋತ್ಸಾಹ
 
     ತಾಜಾತನಕ್ಕೆ ವೇಗದಿ ಹೆಜ್ಜೆ ಹಾಕುತ್ತಿಹ 
     ಜನರು ಹತೋಟಿಯಲ್ಲಿಡಲು, ಹೃದಯ 
     ಮಧುಮೇಹ ಹಾಗು ಅಧಿಕ ರಕ್ತದೊತ್ತಡ

     ಹೀಗೆ ಕಾಣುವುದು ವಿವಿಧ ಲೋಕಗಳು
     ಉದ್ಯಾನದೊಳು, ಎಲ್ಲರಿಗು ಬೇಕಾಗಿ 
     ಎಲ್ಲ ಬಡವಾಣೆಯ ಜನರ ಅಗತ್ಯವಾಗಿ
     
    - ತೇಜಸ್ವಿ ಎ ಸಿ