Friday, December 31, 2010

ವನ ಮಹೋತ್ಸವ

ವನ ಮಹೋತ್ಸವ


ಶಾಲೆಯಲ್ಲಿ ಮಾಡಿದೆವು ವನ ಮಹೋತ್ಸವ
ಸಸಿಯ ನೆಡಲು ನಮಗೆ ಕೊಟ್ಟಿತು ಉತ್ಸಾಹ

ಅಂದು ಶಾಲೆಯಲಿ ಇತ್ತು ಪುಟ್ಟ ಸಮಾರಂಭ
ನಂತರ ಮಾಡಿದೆವು ಗಿಡ ನೆಡಲು ಆರಂಭ

ಪುಟ್ಟ ಸಲಾಖೆಯ ಹೊತ್ತು ತಂದೆವು ನಾವು
ಕೆತ್ತಿ ಆವರಣದಲಿ ಚಿಕ್ಕ ಪಾತಿಯ ಮಾಡಿದೆವು

ಬಗೆ ಬಗೆಯ ಸಸಿ ನೆಟ್ಟು ಅದಕ್ಕೆ ನೀರೆರೆದೆವು
ಆ ಸಸಿಗಳಿಗೆ ಗೊಬ್ಬರ ನೀಡಿ ಪೋಷಿಸಿದೆವು

ಪುಟ್ಟ ಸಸಿಗಳ ತೋಟವಾಯ್ತು ಶಾಲೆ ಅಂಗಳ
ಮುಂದಿನ ಪೀಳಿಗೆಗೆ ಹಾಡುವುದಿದು ಮಂಗಳ

ಪ್ರತಿ ವರ್ಷ ಆಚರಿಸುವೆವು ವನ ಮಹೋತ್ಸವ
ಹಸಿರು ಹೆಚ್ಚಿಸಲು ಕೊಡುವೆವು ಪ್ರೋತ್ಸಾಹ

- ತೇಜಸ್ವಿ.ಎ.ಸಿ

Wednesday, December 22, 2010

ಪ್ರಕೃತಿ ಪ್ರವಾಸ

ಪ್ರಕೃತಿ ಪ್ರವಾಸ


ಯಾಂತ್ರಿಕತೆಯಿಂದ ಬೇಸರವೆನಿಸಿತು ನಗರದ ವಾಸ
ಯೋಚಿಸಿದೆವು ನಾವೆಲ್ಲಾ ಮಾಡಲು ಪುಟ್ಟ ಪ್ರವಾಸ

ಸಭೆ ಏರ್ಪಡಿಸಿದೆವು ತೀರ್ಮಾನಿಸಲು ಪ್ರವಾಸದ ತಾಣ
ಬದಲಾವಣೆಗೆ ಮಲೆನಾಡೇ ಒಳ್ಳೆಯದೆಂದ ಒಬ್ಬ ಜಾಣ

ನಾಲ್ವರೂ ಸೇರಿ ಹೊರೆಟೆವು ಹತ್ತಿ ನಮ್ಮ ಕಾರು
ಉತ್ಸಾಹದಲೇ ಪ್ರವಾಸಕಾಗಿ ಬಿಟ್ಟೆವು ನಮ್ಮ ಊರು

ದಾರಿಯುದ್ದಕೂ ಕಂಡಿತು ಹಚ್ಚ ಹಸಿರ ಗುಡ್ಡ ಬೆಟ್ಟಗಳು
ಹಸಿರ ಕಾಡ ತಂಪಾಗಿಸಿತ್ತು ಹರಿಯುತ್ತಿದ್ದ ಝರಿಗಳು

ದಾರಿಯಲ್ಲಿ ಕಾಣ ಸಿಕ್ಕವು ಪುಟ್ಟ ಮೊಲ, ಜಿಂಕೆ, ಕೋತಿ
ಸಣ್ಣನೆ ಮಂಜು ಹೆಚ್ಚಿಸಿತು ಪ್ರಕೃತಿಯ ರಮ್ಯತೆ ಈ ರೀತಿ

ಸುಂದರ ನೋಟದ ನಡುವೆ ತಲುಪಿದೆವು ವಿಹಾರಧಾಮ
ತುಂತುರು ಮಳೆ ಶುರುವಾಗಿ ಹೆಚ್ಚಿಸಿತು ಪ್ರಕೃತಿ ಪ್ರೇಮ

ಪ್ರವಾಸದಿ ನಾವು ಹೊಕ್ಕಿದೆವು ದಟ್ಟನೆಯ ಅಭಯಾರಣ್ಯ
ನಾಡಿನ ಅರಣ್ಯ ಸಂಪತ್ತು ನೋಡಿ ನಾನಾದೆನಂದು ಧನ್ಯ

ಯಥೇಚ್ಛ ಪ್ರಕೃತಿ ಸಂಪತ್ತನು ಹೊಂದಿದ ನಾಡು ನಮ್ಮದು
ಈ ಸಂಪತ್ತನು ರಕ್ಷಿಸಿ ಬೆಳೆಸುವ ಜವಾಬ್ದಾರಿಯು ನಮ್ಮದು

ಪ್ರಕೃತಿಯ ಪ್ರವಾಸದಲಿ ಎಲ್ಲೂ ಪ್ಲಾಸ್ಟಿಕ್ ಬಳಸಿಲಿಲ್ಲ ನಾವು
ಹೀಗೆ ಎಲ್ಲಾ ನೋಡಿಕೊಂಡೆವು ಏರದಂತೆ ಭೂಮಿಯ ಕಾವು

- ತೇಜಸ್ವಿ.ಎ.ಸಿ

Sunday, December 12, 2010

ಪರಿಪೂರ್ಣತೆಯ ಹುಚ್ಚು

ಪರಿಪೂರ್ಣತೆಯ ಹುಚ್ಚು

ತಾನು ಮುಟ್ಟಲಾಗದ ನಿರೀಕ್ಷೆಯ ಭಾರವ ಹೊತ್ತು
ಸರಳ ತೃಪ್ತಿಗಾಗಿ ಹೋರಾಡುವುದು ತರವೇ?
ಎಂದೂ ಮುಗಿಯದ ಹುಚ್ಚು ಸ್ಪರ್ಧೆಗಳ ಗೆಲುವಿನ
ಅಳತೆಗೋಲಿಗೆ ಸಂತೋಷದ ಅವಲಂಭನೆ ತರವೇ?
ಜೀವನದುದ್ದಕ್ಕೂ ಪ್ರತಿ ಕೆಲಸಗಳಲ್ಲಿ ಅತ್ಯುನ್ನತ
ಸಾಧಿಸಲು ಮನದ ನೆಮ್ಮದಿಯ ಮರೆವುದು ತರವೇ?
ಬಾಹ್ಯ ಸಮಾಜದ ಕಣ್ಣ ಮೆಚ್ಚುಗೆಯ ಉದ್ದೇಶಕಾಗಿ
ಬಲವಂತದ ಗುರಿಯ ಹೊರುವುದು ತರವೇ?

ಮನದ ಸಹಜ ಸಂತೋಷವನು ಮಿತಿ ಇಲ್ಲದ
ಈ ಆಸೆಗಳ ಹತೋಟಿಗೆ ಬಿಟ್ಟು ಕೊಡಲಾರೆ
ನವಿರಾದ ಭಾವನೆಗಳ ಕೋಮಲ ಹೃದಯವನು
ಸಾಮರ್ಥ್ಯ ಅಳೆವ ಹುಚ್ಚು ಜೂಜಿಗೆ ಬಿಡಲಾರೆ
ಕೈಯಲ್ಲೇ ಇರುವ ನನ್ನ ಸುಂದರ ಜೀವನವನ್ನು
ದಿಕ್ಕು ಕೊನೆಯಿಲ್ಲದ ಸ್ಪರ್ಧೆಗಳಿಗೆ ತಳ್ಳಲಾರೆ
ನನಗಿತ್ತುರುವ ಶಕ್ತಿ ಸಾಮರ್ಥ್ಯವನು ವಿರಳವಾದ
ಪರಿಪೂರ್ಣತೆಯೆಂಬ ಅತೃಪ್ತಿಗೆ ಒಪ್ಪಿಸಲಾರೆ

ಚಿಕ್ಕ ವಿಷಯಗಳಲ್ಲೂ ತೃಪ್ತಿ ಪಡೋಣ ನಾವು
ಆಗದಿರಲಿ ಪರಿಪೂರ್ಣತೆ ಎಂಬುದು ನೋವು
-ತೇಜಸ್ವಿ.ಎ.ಸಿ

Monday, December 6, 2010

ಕವನ ರಚಿಸುವ ಅನುಭವ

ಕವನ ರಚಿಸುವ ಅನುಭವ


ಕವನ ಬರೆಯಲು ಕೂತರೆ ಆಗುವುದು ಮನ ಪುಳಕ
ತಯಾರಿಸಬೇಕೆನಿಸುವುದು ಅಕ್ಷರಗಳ ಹೊಸ ಪಾಕ

ಬರೆಯುವ ವಿಷಯದಲ್ಲಿ ಒಮ್ಮೆ ವಿಹರಿಸುವೆನು ಹಾಗೆ
ವಿಹರಿಸಿ ತೀರ್ಮನಿಸುವೆನು ಅದನು ಬರೆಯುವ ಬಗೆ

ಬರೆಯಲು ಕುಳಿತರೆ ಜೀವಕೆ ಸಿಗುವುದು ಹೊಸಜೀವ
ಕವನವು ಕೊಡುವುದು ನಮಗೆ ನವ ಜೀವನೋತ್ಸಾಹ

ನನ್ನ ಅನುಭವಕೆ ಅಕ್ಷರಗಳು ಕೊಡುವವು ಸೌಂದರ್ಯ
ಕನ್ನಡದಲೇ ನಾ ಮಾಡುವೆನು ಕವನ ಕೆತ್ತುವ ಕಾರ್ಯ

ಕನ್ನಡದ ಪದಗಳು ಮಾಡುವವು ನಿರೂಪಣೆ ಸುಲಭ
ಅದರಿಂದಲೆ ಕವನ ರಚನೆ ಒಂದು ಸುಂದರ ಅನುಭವ

ಕವನ ರಚನೆಯಿಂದ ಹಗುರವಾಗುವುದು ನಮ್ಮ ಮನ
ಸುಂದರ ಕವನದ ರಚನೆ ನೀಡುವುದು ಸಂತೋಷವನ್ನ

- ತೇಜಸ್ವಿ.ಎ.ಸಿ

Friday, November 26, 2010

ರಾಜಕೀಯ

ರಾಜಕೀಯ


ಮತ್ತೆ ಮತ್ತೆ ಕೇಳಬರುತ್ತಿದೆ ಗುಸು ಗುಸು ಸುದ್ದಿ
ನಡವಳಿಕೆಯೂ ತೋರುತ್ತಿದೆ ಪಕ್ಷಪಾತದ ಬುದ್ದಿ

ನನಗೂ ಬಡೆಯಿತು ಹೊಲಸು ರಾಜಕೀಯದ ವಾಸನೆ
ಆಗಲೇ ಗೊತ್ತಾಯಿತು ರಾಜಕೀಯ ತೀರ ದುರ್ವಾಸನೆ

ಸತ್ಯದ ಖಚಿತತೆಗೆ ಗಮನಿಸಿದೆ ಸ್ವಲ್ಪ ದಿನಗಳು ಹೀಗೆ
ಪರೀಕ್ಷಿಸಿಯೂ ನೋಡಿದೆ ಸುದ್ದಿಯು ನಿಜವೋ ಹೇಗೆ

ಪಕ್ಷಪಾತತೆ ಎದ್ದು ಕಾಣತೊಡಗಿತು ಬರಿಗಣ್ಣಿನ ಮುಂದೆ
ತೆರೆಯೆ ಇಲ್ಲದೆ ನಡೆಯುತ್ತಿತ್ತು ನಾಟಕವು ನಮ್ಮ ಮುಂದೆ

ಹತೋಟಿ ಇಲ್ಲದೆ ನಡೆಯುತ್ತಿದೆ ಕಳಪೆ ರಾಜಕೀಯ
ನಮ್ಮ ನೆಲದಲ್ಲೇ ಇಂದು ನಾವಾಗಿದ್ದೇವೆ ಪರಕೀಯ

ಇಂಥಹ ವಾತಾವರಣ ನೀಡುವುದು ಅರೆ ಕ್ಷಣ ನಿರುತ್ಸಾಹ
ಮುಂದಿನ ಕ್ಷಣವೇ ನೀಡುವುದು ಮುಂಬರಲು ಪ್ರೋತ್ಸಾಹ

ತಲೆ ಓಡಿಸಿ ಮುಂಬರಲು ನೀಡುತ್ತಿರುವ ಸೂಚನೆಯೇನೋ
ಇಂತಹ ಸಂಧರ್ಭಗಳು ಬರುವುದು ನಮ್ಮ ಒಳಿತಿಗೇನೋ?

- ತೇಜಸ್ವಿ .ಎ.ಸಿ

Wednesday, October 27, 2010

ಕೃಷಿಕನಾಗುವೆ

ಕೃಷಿಕನಾಗುವೆ


ನಗರದ ದಟ್ಟಣೆಯಿಂದ ಹೊರಹೋಗಲು ಪ್ರಕೃತಿಯ
ರಮ್ಯತೆಯ ಸವಿಯಲು ಹೋಗಿ ಸೇರಿದೆ ಮಲೆನಾಡ
ಮಡಿಲಿಗೆ, ಗುಡ್ಡಗಳ ನಡುವೆ ಒಂಟಿ ತೋಟದ ಮನೆ,
ಮನೆಯೇ ಹಿಂದೆಯೇ ನಲಿಯುತ್ತಿತ್ತು ಹಸಿರು ತೆನೆ

ವರುಷಗಳ ನಂತರ ಸಿಕ್ಕ ಅವಕಾಶಕೆ ನಾ ನಡೆದೆ
ತೋಟದ ಒಳಗೆ, ಹಿಂದೆಯೇ ಇದ್ದ ಹಸಿರು ಗದ್ದೆಯು
ಮೈದುಂಬಿ ನಿಂತಿತ್ತು, ತನ್ನ ಬಳಿ ಇದ್ದ ಜಲ ಸಂಪತ್ತ
ತೋರುತ, ತನ್ನ ಶ್ರೀಮಂತಿಕೆಯ ಜೊತೆ ಬೀಗುತ

ಹಾಗೆಯೇ ಕಾಲ ಸವೆಸುತ ಸ್ವಲ್ಪ ಮುನ್ನಡೆದರೆ
ಕಂಡಿತೆನಗೆ ಘಮ ಘಮಿಸುವ ಏಲಕ್ಕಿಯ ಗಿಡಗಳು
ಸುತ್ತಲೂ ಇದ್ದ ಎತ್ತರದ ಅಡಕೆಯ ಮರಗಳ ಮಧ್ಯೆ
ತಾನು ಕಾಣದೆ ಮೆಣಸಿನ ಹಿಂದೆ ಬಚ್ಚಿಟ್ಟು ಕೊಂಡಿತ್ತು

ತೋಟದ ಪಕ್ಕದಲ್ಲೇ ಇದ್ದ ಕೊಡಗಿನ ಕಿತ್ತಳೆ ಹಣ್ಣು
ನನ್ನ ಕೃಷಿಯ ತಿಳುವಳಿಕೆಗೆ ಪುಟ್ಟ ಸವಾಲಾಯಿತು
ಪಕ್ಕದಲ್ಲೇ ಗುಡ್ಡದ ಮೇಲೆ ಇದ್ದ ಕಾಫಿ ಬೆಳೆ, ಒಂದೇ
ಕಡೆ ಕಂಡ ವೈವಿಧ್ಯ ಬೆಳೆ ನನ್ನನ್ನು ಬೆರಗುಗೊಳಿಸಿತು

ಸುಂದರ ಪ್ರಕೃತಿಯ ನಡುವೆ ಕಂಡ ಹತ್ತು ಹಲವು
ಬಗೆಯ ಕೃಷಿ ತಂದುಕೊಟ್ಟಿತು ಎಲ್ಲರಿಗೂ ಉತ್ಸಾಹ
ನಾವೂ ಮುಂದೆ ನಗರವ ತೊರೆದು, ಪ್ರಕೃತಿ ಸಹಜ
ಕೃಷಿಯಲಿ ತೊಡಗಿ ವ್ಯವಸಾಯ ಮಾಡುವ ಪ್ರೋತ್ಸಾಹ

- ತೇಜಸ್ವಿ.ಎ.ಸಿ

Sunday, October 17, 2010

ಗೃಹಸ್ತಾಶ್ರಮ

  ಗೃಹಸ್ತಾಶ್ರಮ


  ಮನೆಯ ಮುಂದೆ ಎದ್ದು ನಿಂತಿದೆ ಚಪ್ಪರ
  ಹಸೆಮಣೆಯ ಏರಿ ಕುಳಿತಿಹನಿಂದು ವರ
  ಬಾಗಿಲಲಿ ಕಾಣುತಿದೆ ಹಸಿರು ತೋರಣ
  ಹುಡುಗನ ಮೈಯೆಲ್ಲಾ ಆಗಿದೆ ಹರಿಶಿಣ

  ಮನೆಯಲ್ಲೆಲ್ಲಾ ಸೇರಿದ್ದಾರೆ ಬಂಧುಗಳು
  ಭರದಿಂದ ಸಾಗಿದೆ ಲಗ್ನದ ಕಾರ್ಯಗಳು
  ಮನೆಯಲ್ಲಿಂದು ನಡೆದಿದೆ ದೇವರ ಕಾರ್ಯ
  ಹುಡುಗನು ಮುಗಿಸುತ್ತಿದ್ದಾನೆ ಬ್ರಹ್ಮಚರ್ಯ

  ನಾಲ್ಕು ದಿನದಿ ಬಂದಿತು ಮದುವೆಯ ದಿನ
  ಮನೆ ಮಂದಿಗೆಲ್ಲರಿಗಿದು ಸಂಭ್ರಮದ ದಿನ
  ಮಂಟಪವು ಅಲಂಕೃತವಾಗಿದೆ ಹೂಗಳಿಂದ
  ಶಾಸ್ತ್ರಗಳು ಆರಂಭವಾಗಿದೆ ಶಾಸ್ತ್ರಿಗಳಿಂದ

  ಕನ್ಯಾಧಾರೆಯ ಮಾಡಿಹರು ಮಗಳ ಹೆತ್ತವರು
  ಮಾಂಗಲ್ಯಧಾರಣೆ ಮಾಡಿಸಿ ಆದರು ಗೆದ್ದವರು
  ಗೃಹಸ್ತಾಶ್ರಮ ಪ್ರವೇಶಿಸಿದ ಸಪ್ತಪದಿ ತುಳಿದು
  ಹೊಸ ಜೀವನವ ಆರಂಭಿಸಿದ ಹುಡುಗನಿಂದು

  - ತೇಜಸ್ವಿ ಎ.ಸಿ

Friday, October 8, 2010

ಕಾರ್ಯಶೀಲನಾಗು

  ಕಾರ್ಯಶೀಲನಾಗು


ಗುರುಗಳೇ, ಬೇಕಿರುವ ಗುರಿಯ ಮುಟ್ಟಲಾರೆವು ಏಕೆ
ತಿಳುವಳಿಕೆ ಎಲ್ಲಾ ಇದ್ದರೂ ಅದು ಕೈ ತಪ್ಪುವುದೇಕೆ

ನನ್ನಲ್ಲಿ ಇಚ್ಛಾಶಕ್ತಿಯ ಕೊರತೆಯೇನೂ ಇದ್ದಿರಲಿಲ್ಲ
ಕಾಗದದ ಮೇಲೆ ಅದಕ್ಕೆ ಯೋಜನೆಗಳು ಇದ್ದವಲ್ಲ

ಮನೆಯಲ್ಲಿ ಹಣದ ಕೊರತೆಯ ಎಂದೂ ನೋಡಲಿಲ್ಲ
ಬೇಡದ ದುರಭ್ಯಾಸಗಳ ನಾ ಎಂದೂ ಬೆಳೆಸಲಿಲ್ಲ

ತಿಳಿದಿದೆಯೇ ನಿಮಗೆ ಈ ಎಲ್ಲಾ ಸೋಲಿಗೆ ಕಾರಣ
ನಾನು ಕಟ್ಟಬೇಕು ಕೆಲಸಗಳಿಗೆ ಗೆಲುವಿನ ತೋರಣ

ಶಿಷ್ಯಾ, ಕೂತು ಕೆಲಸದ ಬಗ್ಗೆ ಯೋಚಿಸಿದರೆ ಫಲವಿಲ್ಲ
ಕಾರ್ಯಶೀಲನಾಗದೇ ನಿನ್ನ ಕೆಲಸದಲಿ ಗೆಲುವಿಲ್ಲ

ಬರೇ ಯೋಚಿಸುತ್ತಾ ಕುಳಿತರೆ ಆಗುವುದು ಮನ ಭಾರ
ಯೋಚಿಸದೆ ಕಾರ್ಯಶೀಲನಾದರೆ ಹೋಗುವೆ ನೀ ದೂರ

ಎಲ್ಲಾ ಕೆಲಸವ ಕಲಿತು ನಂತರವೇ ಪ್ರಾರಂಭಿಸಬೇಕಿಲ್ಲ
ಕೆಲಸವ ಆರಂಭಿಸು, ಮಾಡುತ್ತಾ ಕಲಿಯುವೆ ನೀ ಎಲ್ಲಾ

ಕೆಲಸದಲಿ ಇರಲಿ ಯೋಜನೆಗೆ ಕೇವಲ ಪ್ರತಿಶತ ಇಪ್ಪತ್ತು
ಕಾರ್ಯಶೀಲನಾಗಿ ಕೆಲಸ ಮಾಡಲು ಪ್ರತಿಶತ ಎಂಬತ್ತು

ಸಂಪೂರ್ಣ ಹೊಣೆ ಹೊತ್ತು ಶುರು ಮಾಡು ನೀ ಕೆಲಸವ
ನಿನ್ನೀ ಚುರುಕುತನ ನಿನ್ನರಿವಿಲ್ಲದೆ ಕ್ರಮಿಸುವುದು ದೂರವ


- ತೇಜಸ್ವಿ.ಎ.ಸಿ

Saturday, September 25, 2010

ಮರಳಿ ಬಾ ವರ್ಷಧಾರೆ

  ಮರಳಿ ಬಾ ವರ್ಷಧಾರೆ


  ನೋಡಲು ನಾ ನಿಂತಿದ್ದೆ ಬೀಳುವ ವರ್ಷಧಾರೆಯ
  ಆಗಸದಿಂದ ಸುರಿಯುತ್ತಿದ್ದ ಬಿಳಿಯ ಶುಭ್ರ ಹನಿಯ

  ಸುತ್ತಲು ಕಣ್ಣಾಡಿಸದಲ್ಲೆಲ್ಲಾ ಕಾಣುತ್ತಿತ್ತು ಜಲಧಾರೆ
  ಸುರಿಯುತ ಮಜ್ಜನ ಮಾಡಿಸಿ ಶುಭ್ರಗೊಂಡಿತು ಧರೆ

  ಅಲ್ಲಲ್ಲಿ ಸಣ್ಣದಾಗಿ ಹರಿಯಲಾರಂಭಿಸಿತು ಝರಿಗಳು
  ಝರಿಗಳಲ್ಲಿ ದೋಣಿ ಬಿಡಲು ಕಾಯುತ್ತಿದ್ದರು ಮಕ್ಕಳು

  ಮಳೆಗಾಳಿಗೆ ಬಾಗಿ ಕರೆಯುತ್ತಿದ್ದವು ಮರದ ರೆಂಬೆಗಳು
  ಅದು ಕೊಡುವ ಆಶ್ರಯಕೆ ಓಡುತ್ತಿದ್ದವು ಹಸು-ಕರುಗಳು

  ಆಕಾಶದೆಡೆಗೆ ನೋಡಿದೆ ಕಪ್ಪು ಕಾರ್ಮೋಡದ ಛಾಯೆ
  ತಾ ಸರಿಯುವುದ ಸೂಚಿಸಿತು ಮುಗಿಸುತ ತನ್ನ ಮಾಯೆ

  ನಿಧಾನವಾಗಿ ನಿಲ್ಲಲಾರಂಭಿಸಿತು ಸುಂದರ ವರ್ಷಧಾರೆ
  ತನ್ನ ವೈಭವಕೆ ನಿಧಾನವಾಗಿ ಎಳೆಯತೊಡಗಿತು ತೆರೆ

  ಮಳೆಯು ನಿಂತಾಗ ಕಾಣುತಿತ್ತು ಶುಭ್ರ ವಾತಾವರಣ
  ತನ್ನೆಲ್ಲಾ ಆರ್ಭಟವ ಮುಗಿಸಿ ಶಾಂತವಾಗಿದ್ದ ವರುಣ

  ಗಿಡ ಮರಗಳ ಎಲೆಗಳೆಲ್ಲ ತೊಯ್ದಾಗಿತ್ತು ಹಚ್ಚ ಹಸಿರು
  ಎಲ್ಲಾ ಜೀವಿಗಳಿಗೆ ಸಿಕ್ಕಿತ್ತು ಆಡಲು ಉಲ್ಲಾಸದ ಉಸಿರು

  ನೀ ಬಂದು ಜೀವಗಳಿಗೆ ಹೊಸ ಜೀವವ ಇತ್ತೆ ವರ್ಷಧಾರೆ
  ಹೊರಟೆ ಎನಬೇಡ ಹಾಗೆ ನಮ್ಮ ಭೇಟಿಗಾಗಿ ಮರಳಿ ಬಾರೆ

  - ತೇಜಸ್ವಿ.ಎ.ಸಿ

Sunday, September 19, 2010

ಸುಮ್ಮನಿರಬಾರದೇ ನೀನೊಮ್ಮೆ

ಸುಮ್ಮನಿರಬಾರದೇ ನೀನೊಮ್ಮೆ

ಸುಮ್ಮನಿರು ಎಂದು ಹೇಳಿದರೂ ಕೇಳದು ಮನ,
ವಟ-ವಟನೆ ಸದಾ ಮಾತಾಡುವ ಚಂಚಲ ಮನ
ನಿನ್ನ ಈ ಸ್ವಭಾವದಿಂದ ಬೇಸರಸಿದ್ದಾರೆ ಜನ

ಇರದ ವಿಷಯಗಳಿಗೆಲ್ಲ ತಲೆ ಕೆಡಿಸಿಕೊಂಡು,
ನಡೆಯದ ಘಟನೆಗಳ ತನ್ನ ಕಲ್ಪನೆಯಲಿ ಕಟ್ಟಿ
ಕಲ್ಪನೆಯಲ್ಲೇ ಪ್ರಪಂಚ ಕಾಣುವ ಮೊದ್ದು ಮನ

ತನ್ನ ಪಂಚೇಂದ್ರಿಯಗಳ ಮೂಲಕ ನೇರವಾದ
ವಾಸ್ತವವ ಗ್ರಹಿಸದೆ, ಕೂತಲ್ಲೇ ಎಲ್ಲಾ ಕಲ್ಪಿಸಿ
ಸರಳ ವಾಸ್ತವದಿಂದ ದೂರವಿರುವ ಪೆದ್ದು ಮನ

ಬೇಡದ ಸಂದರ್ಭದಲ್ಲೂ ಮಾತನಾಡುವ, ಸ್ವಲ್ಪ
ಸುಮ್ಮನಿರದೇ ಕಿರಿಕಿರಿ ಮಾಡುವ ತುಂಟ ಮನ,
ಈ ತುಂಟನಿಗೊಂದು ಕೊಡಬಾರದೇ ರಜಾ ದಿನ

ನನಗೆ ಗೊತ್ತು ನಿನ್ನದು ಎಂದೂ ಬತ್ತದ ಉತ್ಸಾಹ
ನಾ ಅರ್ಥೈಸಿರುವೆ ನೀ ಚೈತನ್ಯದ ಚಿಲುಮೆ ಎಂದು
ಆದರೂ ಕೆಲವು ಸಂದರ್ಭದಲಿ ತೆಗೆದುಕೋ ಬಿಡುವು

ಮಲಗಿ ನೆಮ್ಮದಿಯಾಗಿ ನಿದ್ದೆ ಮಾಡಲು ಒರಗಿದರು
ನಿನ್ನ ಮಾತಾಡುವ ಬಾಯನು ನಿಲ್ಲಿಸ ಯತ್ನಿಸಿದರು
ನಿದ್ದೆಯಲಿ ಕನಸಾಗಿ ಬಂದು ತೊಂದರೆಯ ಕೊಡುವೆ

ನನಗೆ ಗೊತ್ತು ಸುಟ್ಟರೂ ಬಿಡದು ಈ ನಿನ್ನ ಬುದ್ದಿ
ನಾನೂ ನಿನ್ನ ಕೇಳಿ ಸಮಯ ವ್ಯರ್ಥ ಮಾಡುತ್ತಿರುವೆ
ಏಕೆ ಹೇಳು? ಏಕೆಂದರೆ ಹೇಳುತ್ತಿರುವವನು ನೀನೆನೇ.

- ತೇಜಸ್ವಿ.ಎ.ಸಿ

Wednesday, September 8, 2010

ನನಗೊಮ್ಮೆ ಅವಕಾಶ ಕೊಡು

ನನಗೊಮ್ಮೆ ಅವಕಾಶ ಕೊಡು


ನಾ ತಿದ್ದಬೇಕು ನನ್ನ ಹಿಂದಿನ ಜೀವನವನು
ನನ್ನ ಎಳೆಯ ಬುದ್ದಿ ಚಿಗುರಿ ದೊಡ್ಡದಾಗಿದೆ
ನಾ ತಿಳಿಯದೆ ಸೋತ ಕಾರಣ ಗೊತ್ತಾಗಿದೆ
ನನಗಿಂದು ಜೀವನವ ಸರಿ ಪಡಿಸಬೇಕಾಗಿದೆ

ನಾ ಹೋಗಬೇಕು ನನ್ನ ಭೂತಕಾಲಕೆ, ನನಗೆ
ಮತ್ತೆ ಅವಕಾಶ ಬೇಕು ಜೀವನವ ಸರಿಪಡಿಸಲು
ನಾ ಮತ್ತೊಮ್ಮೆ ಚಿಕ್ಕವನಾಗಿ ನನ್ನ ಜೀವನದ
ನ್ಯೂನ್ಯತೆಯ ಸರಿ ಪಡಿಸಿಕೊಂಡು ಬೆಳೆಯುವೆ

ಕಾಲ ಮೀರಿದೆ ಎಂದು ಗೊತ್ತು, ಕಾಲದೊಡನೆ
ವಯಸ್ಸು, ಅವಕಾಶ ಎಲ್ಲಾ ಮೀರಿದೆ ಎಂಬುದು
ಗೊತ್ತು, ಆದರೂ ನನಗೆ ಬೇಕು ನನ್ನ ಬಾಲ್ಯಕೆ
ಮರಳುವ ಅವಕಾಶ, ಸರಿ ಪಡಿಸುವೆ ಜೀವನವ

ನನ್ನ ಈಗಿರುವ ಅಭ್ಯಾಸವ ಅಲ್ಲಿಗೆ ಒಯ್ಯುವೆ
ನನಗೀಗಿರುವ ತಿಳುವಳಿಕೆಯನು ನನ್ನ ಬಾಲ್ಯಕೆ
ಹೊತ್ತೊಯ್ಯುವೆ, ಬಾಗಿಲು ತಗಿ ಭೂತಕಾಲವೆ
ನಾ ಬೇಡಿ ಬಂದಿರುವೆ, ನನಗೆ ನೀಡು ಅವಕಾಶವ

ನಾ ಭೂತಕಾಲಕ್ಕೆ ಮರಳಿ ಪ್ರಭುದ್ಧತೆಯ ಬಳಸಿ
ಮಾಡುವೆನು ಇಂದನು ಸುಂದರವಾಗಿ, ಸಂರಕ್ಷಿಸಿ
ನನ್ನೆಲ್ಲಾ ಆಸೆಗಳಿಗೆ ವಾಸ್ತವದ ರೆಕ್ಕೆ ನೀಡುವೆನು
ನನಗೊಮ್ಮೆ ಮರಳಿಸು ನನ್ನ ಹಿಂದಿನ ದಿನಗಳನು

- ತೇಜಸ್ವಿ.ಎ.ಸಿ

Monday, August 30, 2010

ಮೊಳಗಲಿ ಕನ್ನಡದ ಕೀರ್ತಿ

  ಮೊಳಗಲಿ ಕನ್ನಡದ ಕೀರ್ತಿ
  
  ಕನ್ನಡ ಅಕ್ಷರದೊಡನೆ ನಾ ಆರಂಭಿಸಿದ್ದ ಒಡನಾಟ
  ನನಗಿಂದು ಮಾಡಿದೆ ಕನ್ನಡ ವ್ಯಾಮೋಹದ ಮಾಟ

  ಕನ್ನಡದ ಅಕ್ಷರಗಳಲ್ಲಿ ನಾ ಕಾಣುವೆನು ಅನುರಾಗ
  ಅದಾಗಿ ಹೋಗಿದೆ ಬಿಡಿಸಲಾಗದ ಅನುಬಂಧವೀಗ

  ಕನ್ನಡ ಎನಗೆ ನನ್ನೆದೆಯಲ್ಲಿನ ಉಸಿರಿನಷ್ಟೇ ಸರಾಗ
  ಕನ್ನಡಕೆ ಹೃದಯ ಬಡಿತ ಪಡೆದುಕೊಳ್ಳುವುದು ವೇಗ

  ಕನ್ನಡ ನನ್ನ ನಾಡಿಗಳಲ್ಲಿ ಹರಿಯುವ ರಕ್ತದಷ್ಟೆ ಸಹಜ
  ಹೃದಯದಲಿ ಶಾಶ್ವತವಾಗಿ ನೆಟ್ಟಿಹೆನು ಕನ್ನಡ ಧ್ವಜ

  ಕನ್ನಡ ಅಕ್ಷರಗಳನ್ನು ಓದುವಾಗ ಸಿಗುವ ತಲ್ಲೀನತೆ
  ಹೆಚ್ಚಿಸುವುದು ಓದು ಹಾಗು ಕೆಲಸದಲ್ಲಿನ ಏಕಾಗ್ರತೆ

  ಕನ್ನಡಾಕ್ಷರಗಳಲ್ಲಿನ ಕೊಂಬು ಇಳೀ ದೀರ್ಘ ಒತ್ತು
  ಕನ್ನಡಿಗರಿಗೆಲ್ಲರಿಗೂ ಆಗಿದೆ ಹೆಮ್ಮೆಯ ಸಂಪತ್ತು

  ನಮ್ಮ ಭಾಷೆ ನಮ್ಮ ಹೆಮ್ಮೆ ಸ್ವಾಭಿಮಾನದ ಪ್ರತೀಕ
  ಆಗಿದೆ ನಮ್ಮ ನಾಡಿನ ಜನರೆಲ್ಲರ ಒಗ್ಗಟ್ಟಿಗೆ ಪ್ರೇರಕ

  ಎಲ್ಲರೂ ಸೇರಿ ತರೋಣ ಕನ್ನಡ ಬಳಸುವ ಆಚರಣೆ
  ಎಲ್ಲರ ಮನಕೆ ನೀಡೋಣ ಕನ್ನಡ ಬಳಸುವ ಪ್ರೇರಣೆ

  ಭಗವಂತನೇ ವರವಾಗಿ ನೀಡಿಹನು ನಾಡಿಗೆ ಶ್ರೀಗಂಧ
  ಜಗತ್ತಿನೆಲ್ಲೆಡೆ ಪಸರಿಸಲು ಕನ್ನಡ ಭಾಷೆಯ ಸುಗಂಧ

  ಕನ್ನಡ ನುಡಿಯ ಸಿಹಿಯಿಂದಲೇ ಹಂಚುವೆವು ಪ್ರೀತಿ
  ಜಗತ್ತಿನಾದ್ಯಂತ ಮೊಳಗಲಿ ಕಸ್ತೂರಿ ಕನ್ನಡದ ಕೀರ್ತಿ

  - ತೇಜಸ್ವಿ.ಎ.ಸಿ

Friday, August 20, 2010

ಬೆಳದಿಂಗಳ ಚಂದಿರ

ಬೆಳದಿಂಗಳ ಚಂದಿರ

ಸೂರ್ಯ ಮುಳುಗುವ ಸಂಜೆ ಹೊತ್ತಿನಲಿ
ಮುಸ್ಸಂಜೆಯ ಮಬ್ಬಿನ ಬಾನಂಗಳದಲಿ
ತನ್ನ ಪಾಳಿಗಾಗಿ ಪೂರ್ಣಚಂದ್ರ ಬರುತ್ತಲಿದ್ದ

ನಸುಗೆಂಪ ಬಣ್ಣಕ್ಕೆ ತಿರುಗಿದ ನೇಸರ
ಆಗಸದ ಮೇಲೆಲ್ಲಾ ಕೆಂಪು ಬಣ್ಣವ ಚೆಲ್ಲಿ
ಬರುವ ಚಂದ್ರನಿಗೆ ಸ್ವಾಗತ ಕೋರುತ್ತಿದ್ದ

ನೇಸರನೆ ತಮ್ಮ ಯಜಮಾನನಂತೆ
ಆತ ಹೊರಡುತ್ತಲೇ ಅವನ ಹಿಂದೆಯೇ
ಹೊರಟವು ಹಕ್ಕಿಗಳು ಮರಳಿ ಗೂಡಿಗೆ

ಸಾಲು ಸಾಲಾಗಿ ಹೊರಟ ಹಕ್ಕಿಗಳು ಕೆಂಪು
ಆಗಸದಲಿ ತೋರಣವಾಗಿ, ಬರುವ ಚಂದಿರನ
ಸ್ವಾಗತಿಸಲು ಬಂದಂತೆ ತೋರುತ್ತೀತ್ತು

ನಿಧಾನವಾಗಿ ಕತ್ತಲೆಯು ಎಲ್ಲೆಡೆಯು ಆವರಿಸಿ
ಬೆಳದಿಂಗಳ ಚಂದಿರನು ಕತ್ತಲೆಯ ನಡುವೆ
ಆಗಸದಲ್ಲಿ ಪ್ರಕಾಶಮಾನವಾಗಿ ಬೆಳಗುತ್ತಿತ್ತು

ನೋಡ ನೋಡುತ್ತಲೇ ತೆರೆಯಲಾರಂಭಿಸಿತು
ತನ್ನದೇ ಆದ ಇರುಳಿನ ಹೊಸ ಸುಂದರ ಜಗತ್ತು
ಆ ಬೆಳದಿಂಗಳ ರೂಪ ನನ್ನ ಬೆರಗುಗೊಳಿಸಿತ್ತು

- ತೇಜಸ್ವಿ.ಎ.ಸಿ

Thursday, August 12, 2010

ಅಡೆ-ತಡೆ

ಅಡೆ-ತಡೆ

ನಾವೆಷ್ಟೇ ತಿಳಿದುಕೊಂಡರು ನಮ್ಮ ಬೇಕುಗಳನ್ನು ಗೆಲ್ಲಲಾರೆವೇಕೆ
ನಾವೆಷ್ಟೇ ಕೆಲಸವನ್ನು ಯೋಜಿಸಿದರು ಕೆಲಸದಲ್ಲಿ ಸೋಲುವುದೇಕೆ

ನಾವು ಮಾಡ ಬೇಕೆನಿಸುವ ಕಾರ್ಯಗಳನ್ನು ತಡೆಯುವುದು ಏನು
ತಡೆಯುವ ಅಂಶಗಳೆನೆಂದು ಗುರುತಿಸಿ ನೀ ತಿಳಿಸಿ ಹೇಳಿಯೇನು

ನಾವು ಮಾಡುವ ಕೆಲಸಗಳಿಗೆ ಅಡ್ಡಿ ತರುವ ವಿಷಯಗಳು ಹಲವಾರು
ಹಲವು ನಮ್ಮ ಹತೋಟಿಯಲ್ಲುಂಟು, ಬೇರೆಯದರ ಕೈಯಲ್ಲಿ ಕೆಲವಾರು

ಕಾಗದದ ಮೇಲೆ ಯೋಜನೆಗಳ ಹಾಕಿ, ಬುದ್ದಿ ಪ್ರದರ್ಶಿಸಿದರೆ ಸಾಲದು
ಕ್ರಿಯಾಶೀಲರಾಗಿ ದುಡಿದರೆ ಸೋಮಾರಿತನ ನಮ್ಮ ತಡೆಯಾಗಲಾರದು

ಹಲವು ಕೆಲಸಗಳಿಗೆ ಉಂಟು ಬೇರೆ ಜನಗಳ ಮೇಲೆ ಪರಾವಲಂಬನೆ
ಜನ ಬಳಕೆಯ ನಡವಳಿಕೆಯು ಸರಾಗ ಮಾಡುವುದು ಕಷ್ಟದ ಕೆಲಸವನೆ

ಹಲವು ಕೆಲಸಗಳಿಗೆ ನಮ್ಮ ಬಳಿಯಿರುವುದು ಯತೇಚ್ಚವಾದ ಸಮಯ
ಕೆಲಸಗಳ ಮುಂದೂಡಿಕೆಯೇ ತಡೆಯಾಗುವುದು ನಮ್ಮೆಲ್ಲರ ಕಾರ್ಯ

ಹಣವ ಉಳಿಸುವ ತಡೆ ಹಾಕಿ ಕುಳಿತರೆ ಸಾಗದು ನಮ್ಮ ಯೋಜನೆ
ಅಗತ್ಯ ಹಣವನ್ನು ಖರ್ಚು ಮಾಡಿ ಗಳಿಸಲು ಯಶಸ್ಸಿನ ಖಜಾನೆ

ಶುರು ಮಾಡುವ ಮುಂಚೆಯೇ ಮಾಡದಿರಿ ನಕಾರಾತ್ಮಕ ಚಿಂತನೆ
ಈ ನಕಾರಾತ್ಮಕತೆಯೇ ಆಗುವುದು ಕೆಲಸವ ತಡೆಯುವ ಭಾವನೆ

ನಿಮ್ಮ ರೂಪ, ವಿಧ್ಯೆ, ಸೋಲುಗಳಿಂದ ಬೆಳೆಸಬೇಡಿ ಹೊಸ ಕೀಳರಿಮೆ
ಇದು ನಿಮ್ಮ ತಡೆಯಾಗುವುದು, ತಿಳಿಯಿರಿ ಅದು ಕೇವಲ ಒಂದು ಭ್ರಮೆ

ಹೀಗೆ ನಿಮ್ಮ ತಡೆಯುವ ಅಂಶಗಳ ಮಾಡುತ ಹೋಗಿ ಪಟ್ಟಿಯ
ನಿಧಾನವಾಗಿ ಸಾಧಿಸುತ ಹೋಗಿ ಅವುಗಳ ಮೇಲೆ ಹತೋಟಿಯ

- ತೇಜಸ್ವಿ.ಎ.ಸಿ

Thursday, August 5, 2010

ಮುಸಲಧಾರೆ

ಮುಸಲಧಾರೆ

ಮಧ್ಯಾಹ್ನದ ಸಮಯದಲಿ ಮುಸುಕ ಮಬ್ಬು ಇಣುಕುತಿರಲು
ಅನಿರೀಕ್ಷಿತ ತಂಗಾಳಿಯು ಎಲ್ಲಡೆಯೂ ತಂಪೆರಿಯುತಿರಲು
ಏನೀ ಬೆಳಕಿನಾಟವಿದೆಂದು ಕುತೂಹಲಕೆ ನಾ ಹೊರ ಬಂದೆ

ಕಪ್ಪು ಕಾರ್ಮೋಡವು ತಂಗಾಳಿಯ ಹೊತ್ತು ತನ್ನ ರಾಜ್ಯವನು
ವಿಸ್ತರಿಸುತ್ತ, ನಿಧಾನವಾಗಿ ತನ್ನ ಬಲಿಷ್ಠ ಬಾಹುಗಳ ಚಾಚಿ
ಸಿಡಿಲಬ್ಬರದಿ ಸದ್ದ ಮೊಳಗಿಸುತ ತನ್ನಾಗಮನವ ಸಾರುತ್ತಿತ್ತು

ಕಾರ್ಮೋಡದ ನಡುವೆ ಬೆಳ್ಳನೆಯ ಬೆಳ್ಳಿ ರೇಖೆ ಮಿಂಚುತಿರಲು
ರೈತನ ಮನದೊಳಗಿನ ಸಣ್ಣನೆಯ ನಗೆ ಮುಖವರಳುತಿರಲು
ಸುತ್ತಣದ ವಾತಾವರಣದಲಿ ಹೊಸ ಉಲ್ಲಾಸವ ಪಸರಿಸಿತ್ತು

ಎದುರಿನ ಬಯಲಲ್ಲಿ ಸಣ್ಣಗೆ ಎದ್ದ ಗಾಳಿಗೆ ಓಡುತ್ತಿರುವ ಕರು
ಅದನ್ನೇ ಹಿಂಬಾಲಿಸುವಂತೆ ಧರೆಗೆ ಬಿದ್ದ ಮುತ್ತಿನ ಹನಿಗಳು
ಧಣಿದ ಭೂಮಿಗೆ ಉಲ್ಲಾಸದ ಸಿಂಚನವ ಸಿಂಪಡಿಸುತ್ತಿತ್ತು

ಧರೆಗೆ ಬಿದ್ದ ಮುತ್ತಿನ ಹನಿಗಳ ತನ್ನ ಮೈಯೊಳಗೆ ಹೀರಿ
ಘಮ ಘಮಿಸುವ ಸುವಾಸನೆಯ ಎಲ್ಲೆಡೆಯಲಿ ಪಸರಿಸಲು
ಭೂಮಿ ಬಚ್ಚಿಟ್ಟ ಸುಂದರ ಸುಗಂಧವ ಹೊರಸೂಸುತಿತ್ತು

ಅಂಗಳೊಳ ಮಕ್ಕಳು ಮನದ ಗರಿ ಗೆದರಿ ಆಡಲನುವಾಗಿ
ಕಾಡಿನೊಳು ಗರಿ ಗೆದರಿ ನವಿಲುಗಳ ನರ್ತನದ ತೆರನಾಗಿ
ಸುತ್ತಲ ವಾತಾವರಣ ತಂಗಾಳಿಯಾಗಿ ಹರಿದಾಡುತ್ತಿತ್ತು

ಹನಿ ಹನಿಯಾಗಿ ಸುರಿಯಲಾರಂಭಿಸಿತು ಮುಸಲಧಾರೆಯು
ಸೃಷ್ಟಿಸುತ ಭುವಿ ಆಕಾಶವೊಂದು ಮಾಡುವ ಕಾಮನ ಬಿಲ್ಲನು
ನೋಡಲು ದಕ್ಕಿತ್ತು ಪ್ರಕೃತಿಯ ರಮ್ಯದೃಶ್ಯ ಕಣ್ಣಿಗೆ ಹಬ್ಬವಾಗಿ

- ತೇಜಸ್ವಿ.ಎ.ಸಿ

Sunday, August 1, 2010

ಹಬ್ಬಗಳ ಸಂಭ್ರಮಿಸಿದ ಪುಟ್ಟ

  ಹಬ್ಬಗಳ ಸಂಭ್ರಮಿಸಿದ ಪುಟ್ಟ


  ಪುಟ್ಟ ಅನುಭವಿಸಿದ ದಸರ ರಜಾದ ಮಜಾನ
  ಹಬ್ಬಕ್ಕೆ ಹೋಗಿದ್ದ ತಿರುಗಲು ಅಜ್ಜಿಯ ಊರನ್ನ

  ಅಜ್ಜಿಯ ಮನೆಯಲ್ಲಿ ಕೂಡಿಸಿದ್ದರು ಬೊಂಬೆಗಳ
  ಬೊಂಬೆಯ ಕೂರಿಸಿ ಆಹ್ವಾನಿಸಿದ್ದರು ಜನಗಳ

  ಹಬ್ಬದಿ ಹೊಸ ಬಟ್ಟೆ ಧರಿಸಿ ಕುಣಿದ ಅಣ್ಣನೊಡನೆ
  ದೊಡ್ಡ ಬೊಂಬೆಗಾಗಿ ಜಗಳಕ್ಕಿಳಿದ ಎಲ್ಲರೊಡನೆ

  ಕೊನೆಗೆ ದಸರೆಯ ರಜವು ಮುಗಿಯುತ ಬಂದಿತು
  ಅಜ್ಜಿಗೆ ಪುಟ್ಟನ ತರಲೆಗಳಿಂದ ಬಿಡುಗಡೆ ಸಿಕ್ಕಿತು

  ಬಸ್ಸನು ಹತ್ತಲು ಗಂಟು ಮೂಟೆ ಕಟ್ಟಿದ ಪುಟ್ಟ
  ಅಜ್ಜಿಯು ಕೊಟ್ಟ ಉಂಡೆಗಳ ಹೊತ್ತು ಹೊರಟ

  ಶಾಲೆಯಲ್ಲಿ ಶುರುವಾದವು ಪಾಠ ಪ್ರವಚನ
  ಅಪ್ಪನೂ ಕೂರಿಸಿ ಹೇಳಿದರು ಓದುವ ಬುದ್ದಿನ

  ಕೇಳಬೇಕಲ್ಲ ತರಲೆ ಮಾಡುವ ಚಿಕ್ಕ ವಯಸ್ಸು
  ಹೇಳಿದಕ್ಕೆಲ್ಲ ತಲೆಯಾಡಿಸಿತು ಎಳೆಯ ಮನಸ್ಸು

  ಕೆಲವೇ ದಿನಗಳಲ್ಲಿ ದೀಪಾವಳಿ ಹತ್ತಿರ ಬಂದಿತು
  ಪಟಾಕಿಗಳ ಹೊಡೆಯಲು ಅವಕಾಶವ ತಂದಿತು

  ಪಟಾಕಿ ಕೊಡಿಸಲು ಪುಟ್ಟನು ಹತ್ತಿದ ಅಪ್ಪನ ಬೆನ್ನು
  ಪಟಾಕಿ ಹಚ್ಚಲು ಅಜ್ಜಿ ಮನೆಗೆ ಕಳಿಸಿದರು ಅವನನ್ನು

  ಸಿಕ್ಕಿತು ಅವಕಾಶ ಅಣ್ಣನೊಂದಿಗೆ ಹಚ್ಚಲು ಪಟಾಕಿ
  ಅಜ್ಜಿಗೆ ಮತ್ತೆ ಸಿಕ್ಕಿದ ತರಲೆಗಳ ಮಾಡುವ ಗಿರಾಕಿ

  ಸಂಭ್ರಮವಾಗಿದೆ ಪುಟ್ಟನಿಗೆ ಹಬ್ಬದ ರಜಾ ದಿನಗಳು
  ಹೀಗೆ ಸಾಗಿದೆ ತುಂಟ ಪುಟ್ಟನ ಬಾಲ್ಯದ ಆಟಗಳು

  - ತೇಜಸ್ವಿ.ಎ.ಸಿ

Tuesday, July 27, 2010

ಕಾಲಾಯ ತಸ್ಮೈ ನಮಃ

ಕಾಲಾಯ ತಸ್ಮೈ ನಮಃ

ಭಾರ ಹೊತ್ತು ನಡೆದಿರುವೆ ನಾನಿಂದು ಹಾದಿಯಲಿ
ದೇಹದ ಅವಿಭಾಜ್ಯ ಅಂಗವೇ ಭಾರವಾಗಿ ಹೋಯಿತೇ
ಈ ಹೊರೆಯ ಇಳಿಸಲಾರೆ, ಬಿಡಿಸಿಕೊಳ್ಳಲಾರೆ
ನನ್ನ ಚೇತನವೇ ಎದೆಗುಂದಿ ಮುದುಡಿ ಹೋಯಿತೇ

ಹೋರಾಟಕೆ ಫಲವಿಲ್ಲ, ಪರಿಶ್ರಮಕೆ ಸಾರ್ಥಕತೆಯಿಲ್ಲ
ಶ್ರಮದಲ್ಲಿದ್ದ ಭರವಸೆಯು ಇಳಿದು ಬದುಕು ಕತ್ತಲಾಯಿತೆ
ಹಾದಿಯಲಿ ಕಂಡ ಎಳೆಯ ಕಿರಣಗಳ ಅನುಸರಸಿ
ಬದುಕಿನ ಸ್ಥಿರತೆಗಾಗಿ ನಾ ಪಟ್ಟ ಶ್ರಮವು ನೀರಾಯಿತೇ

ನನ್ನ ಜೀವನದ ಮೇಲೆ ತನ್ನ ಹತೋಟಿಯ ಮೆರೆಸುತ
ತನ್ನ ಪ್ರಭುತ್ವವನು ಸಾರಿ ಹೇಳುತಿಹನೆ ಭಗವಂತ?
ನನ್ನೆಲ್ಲಾ ಶಕ್ತಿಗಳು ತೃಣಕೆ ಸಮಾನವೆಂದು ಚುಚ್ಚಿ
ನುಡಿಯುತಿಹನೆ ನನ್ನ ಮೇಲಿನ ಹಿಡಿತವ ತೋರುತ

ಶಕ್ತಿ ಇಟ್ಟವ ನೀನು, ಬಯಕೆ ಕೊಟ್ಟವ ನೀನು, ಮರೆತೆಯಾ
ನೀ ಕೊಟ್ಟ ಬದುಕಿನಲಿ ಹಿಂದಿರುಗಿ ಬರುವ ವಿಶ್ವಾಸವನು
ಕಾಲವೇ ನನ್ನ ಶಕ್ತಿಯಾಗಿ, ಹೊಸ ಭರವಸೆಯಾಗಿ ತಿರುಗಿ
ತರುವುದು ನನ್ನೆಲ್ಲಾ ಜೀವನದ ಸವಾಲಿಗೆ ಉತ್ತರವನು

- ತೇಜಸ್ವಿ.ಎ.ಸಿ

Saturday, July 17, 2010

ತಪ್ಪಿಸಿಕೊಂಡ ಪುಟ್ಟ

ತಪ್ಪಿಸಿಕೊಂಡ ಪುಟ್ಟ


ಶನಿವಾರ ಶಾಲೆಗೆ ಬಂದ ಪುಟ್ಟ
ಸ್ನೇಹಿತರನ್ನು ಕರೆದ ಆಡಲು ಆಟ

ಅಷ್ಟರಲ್ಲೇ ಕೇಳಿತು ಘಂಟೆಯ ಸದ್ದು
ಕೊಠಡಿಗೆ ನಡೆದರು ಎಲ್ಲರೂ ಎದ್ದು

ಪಾಠವ ಮುಗಿಸಿದರು ಲೆಕ್ಕದ ಮೇಷ್ಟ್ರು
ಮನೆಯಲಿ ಮಾಡಲು ಲೆಕ್ಕಗಳ ಕೊಟ್ರು

ಹುಡುಗರೆಲ್ಲ ಸೇರಿದರು ಆಡಲು ಆಟ
ಆಟದೊಂದಿಗೆ ಶನಿವಾರ ಕಳೆದ ಪುಟ್ಟ

ಭಾನುವಾರ ಪೇಟೆಗೆ ಹೊರಟ ಪುಟ್ಟ
ಸರ್ಕಸ್ಸು ತೋರಿಸಲು ಬೇಡಿಕೆ ಇಟ್ಟ

ಸರ್ಕಸ್ಸು ನೋಡಿ ಕುಣಿದು ಕುಪ್ಪಳಿಸಿದ
ಅಪ್ಪನೊಂದಿಗೆ ಸಂಜೆ ಮನೆಗೆ ನಡೆದ

ರಾತ್ರಿಯಿತ್ತು ಅಮ್ಮನ ವಿಶೇಷ ಭೋಜನ
ಭಾನುವಾರ ಪೂರ್ತಿ ಮಾಡಿದ ಮಜಾನ

ಸೋಮವಾರ ಬೆಳಿಗ್ಗೆ ಶಾಲೆಗೆ ಹೋದ
ಮೇಷ್ಟರು ಕೊಟ್ಟಿದ್ದ ಲೆಕ್ಕಗಳ ಮರೆತ್ತಿದ್ದ

ಒಬ್ಬಬ್ಬರಿಗೆ ಲೆಕ್ಕವ ಕೇಳುತ ಬಂದರು
ಕೈಯಲ್ಲೇ ಬೆತ್ತವನ್ನು ಹಿಡಿದು ತಂದರು

ಅಷ್ಟರಲ್ಲೇ ಬಂದಿತು ನೋಟಿಸು ಕೊಠಡಿಗೆ
ರಜೆ ಸಿಕ್ಕಿತು ಗಣ್ಯರ ಸಾವಿನಿಂದ ಶಾಲೆಗೆ

ಪುಟ್ಟ ತಪ್ಪಿಸಿಕೊಂಡ ಲೆಕ್ಕದ ಮೇಷ್ಟರ ಏಟ
ರಜೆ ಘೋಷಿಸುತ್ತಲೇ ಮನೆಗೆ ಓಡಿದ ಓಟ

- ತೇಜಸ್ವಿ.ಎ.ಸಿ

ಸೃಷ್ಟಿ ವೈಚಿತ್ರ್ಯ

ಸೃಷ್ಟಿ ವೈಚಿತ್ರ್ಯ


ಭಗವಂತ, ನೀನೇ ಸೃಷ್ಟಿಸಿ ಜೀವಿಗಳು ಬಾಳಬೇಕಾದ ಜಗವು ಇದು
ಸೃಷ್ಟಿಕರ್ತನೆ, ನಿನ್ನ ಜಗದಲೇ ಜೀವಗಳೊಡನೆ ಚಿನ್ನಾಟವು ಸರಿಯೆ
ನಿನ್ನ ಸೃಷ್ಟಿಯ ಮರ್ಮವನರಿಯೆ

ನಿನ್ನ ಸುಂದರ ಸೃಷ್ಟಿಗೆ ಪ್ರಾಣವನಿತ್ತೆ, ಬಾಳಲು ದೇಹಕೆ ಜೀವನವಿತ್ತೆ
ಹೊಸ ಜೀವನಕೆ ಲೋಕವನಿತ್ತೆ, ಪ್ರಾಣದ ಜೊತೆಗೆ ಆಟವು ಸರಿಯೆ
ನಿನ್ನ ಸೃಷ್ಟಿಯ ಮರ್ಮವನರಿಯೆ

ಜಿಂಕೆಯ ಬದುಕು ನಿನ್ನದೇ ಸೃಷ್ಟಿ, ಜೀವಕೆರಗುವ ಹುಲಿಯು ನಿನ್ನದೇ ಸೃಷ್ಟಿ
ನಿನ್ನ ಸೃಷ್ಟಿಯ ಬದುಕಿಗೆ ಏಕೀ ಅನ್ಯಾಯ? ಜೀವದ ಜೊತೆಗೆ ಆಟವು ಸರಿಯೇ
ನಿನ್ನ ಸೃಷ್ಟಿಯ ಮರ್ಮವನರಿಯೆ

ಜನಗಳ ಹಸಿವು ನಿನ್ನದೇ ಸೃಷ್ಟಿ, ಜನಗಳ ಆಹಾರವು ನಿನ್ನದೇ ಸೃಷ್ಟಿ
ನಿನ್ನೀ ಸೃಷ್ಟಿಯ ಜೀವಗಳ ಹೊಟ್ಟೆಯ ಜೊತೆಗೆ ಆಟವು ಸರಿಯೇ
ನಿನ್ನ ಸೃಷ್ಟಿಯ ಮರ್ಮವನರಿಯೆ

ಸೂರ್ಯನ ಬಿಸಿಲು ನಿನ್ನದೇ ಸೃಷ್ಟಿ, ತಲೆ ಮೇಲಿನ ಸೂರು ನಿನ್ನದೇ ಸೃಷ್ಟಿ
ನೀ ಸೃಷ್ಟಿಸಿದ ಮಕ್ಕಳ ನೆಲೆಯ ಜೊತೆ ನಿನ್ನಾಟವು ಸರಿಯೇ
ನಿನ್ನ ಸೃಷ್ಟಿಯ ಮರ್ಮವನರಿಯೆ

ಜನಗಳಿಗೆ ಕೊಟ್ಟ ಬಾಳೂ ನಿನ್ನ ಸೃಷ್ಟಿ, ಬಾಳಿನ ಭವಿಷ್ಯವೂ ನಿನ್ನದೇ ಸೃಷ್ಟಿ
ನೀ ಸೃಷ್ಟಿಸಿದ ಮಕ್ಕಳ ಭವಿಷ್ಯದ ಜೊತೆಗಿನ ನಿನ್ನಾಟವು ಸರಿಯೇ
ನಿನ್ನ ಸೃಷ್ಟಿಯ ಮರ್ಮವನರಿಯೆ

ನಮಗೆ ಕೊಟ್ಟ ಬದುಕು ನಿನ್ನದೇ ಸೃಷ್ಟಿ, ಬಾಳಿನ ಅಗತ್ಯಗಳೂ ನಿನ್ನದೇ ಸೃಷ್ಟಿ
ಎಲ್ಲವೂ ನಿನ್ನದೇ ಇರುವಾಗ ಮಾಡು ಎಲ್ಲವ ಸರಿಯ
ನಿನ್ನೀ ಸೃಷ್ಟಿಗೆ ಧರ್ಮವನೆರೆಯೆ

- ತೇಜಸ್ವಿ.ಎ.ಸಿ

Thursday, July 8, 2010

ಕಣ್ಣಾ ಮುಚ್ಚಾಲೆ

ಕಣ್ಣಾ ಮುಚ್ಚಾಲೆ

ಹಗಲಿರುಳು ಸಾಲಾಗಿ ಬರುವ ಸುಂದರ ಕನಸುಗಳು
ಜೀವನಕೆ ತೋರುವವು ಬಣ್ಣ ಬಣ್ಣದ ಹೊಸ ಆಸೆಗಳ

ಕನಸಿನ ಲೋಕದಿ ಪಯಣ ನೀಡುವುವು ಹೊಸ ಭರವಸೆ
ಈ ಹೊಸ ಭರವಸೆಗಳಿತ್ತವು ಬಾಳಿಗೆ ಒಂದು ದಿಸೆ

ನಾವ್ ತೋರಿದೆವು ಈ ದಿಸೆಯಲ್ಲಿ ಮುನ್ನುಗುವ ತುಡಿತ
ಆಸೆಗಳ ಈಡೇರಿಕೆಗೆ ನಾವು ಶ್ರಮ ವಹಿಸಿದೆವು ಸತತ

ಚಿಕ್ಕ ಪುಟ್ಟ ಆಸೆಗಳ ಈಡೇರಿಕೆಗಳು ಅನ್ನಿಸಲಿಲ್ಲ ಬಲು ಕಷ್ಟ
ಮೂಲಭೂತ ಆಸೆಗಳ ತಡವರಿಕೆ ಮಾಡಿವೆ ಜೀವನವನ್ನೇ ನಷ್ಟ

ಬದುಕಿನ ಅಗತ್ಯಗಳ ಈಡೇರಿಕೆ ಜೀವನದ ಉದ್ದೇಶವಲ್ಲ
ಕನಸುಗಳ ಈಡೇರಿಕೆಯೇ ಜೀವನಕೆ ತೃಪ್ತಿ ಕೊಡುವುದಲ್ಲ

ಬೇಡದ ಕನಸುಗಳು ನಿತ್ಯ ಬಂದು ಮೂಡಿಸುವವು ಬರಿ ಆಸೆ
ಈಡೇರದ ಈ ಆಸೆಗಳ ಹೊರೆ ಆಗಿವೆ ಜೀವಕ್ಕೊಂದು ಶಿಕ್ಷೆ

ಕನಸು ಆಸೆಗಳ ಉದ್ದೇಶ ಸೃಷ್ಟಿಸಿವೆ ಹಲವು ಅನುಮಾನಗಳ
ಇವು ಬರುವುದು ಸ್ಪೂರ್ತಿಗೋ ಅಥವಾ ನೀಡಲು ಹತಾಶೆಗಳ?

ಈ ಎಲ್ಲಾ ಆಟ ದ್ವಂದ್ವಕೆ ಎಡೆಮಾಡಿದೆ ಜೀವನದ ದೋಣಿಯ
ಆಸೆಗಳು ದಿನ ಬಂದು ತೋರುತ್ತಿವೆಯೇ ನಮಗೆ ಬರಿ ಭ್ರಮೆಯ?

- ತೇಜಸ್ವಿ .ಎ.ಸಿ

Thursday, July 1, 2010

ಅರ್ಥವಾಗದ ಭಾವನೆಗಳು

 ಅರ್ಥವಾಗದ ಭಾವನೆಗಳು

 
ನಾನೆಷ್ಟೇ ಕೋಪ ಮಾಡಿಕೊಂಡರು
ಅದು ಅರೆ ಕ್ಷಣ ಮಾತ್ರ
ಅದು ನಿನ್ನ ನೋಡಿದ ಕೆಲ ಕ್ಷಣ ಮಾತ್ರ .

ನನಗೆ ನಿನ್ನ ಮೇಲಿರುವ ಅಸಮಧಾನ
ನಿಜವಾದುದೆ ಎಂದು ನನಗೆಯೇ ಅನುಮಾನ
ಏಕೆಂದರೆ ಅದು ಕೇವಲ ಕ್ಷಣಿಕ ಮಾತ್ರ

ನನ್ನೀ ಚುಚ್ಚು ನಡವಳಿಕೆಯನು ನೋಡಿ
ಮನ ನೊಂದಿದೆಯೇ?
ನಿನಗೂ ಇದೆಯೇ ಮತಾಡಿಸಬೇಕೆಂದು ನನ್ನ ಹತ್ತಿರ?

ನಾನು ನನ್ನೀ ಭಾವನೆಗಳ ಅರ್ಥೈಸುವ
ಪ್ರಯತ್ನದಲ್ಲಿರುವೆ.
ನನ್ನೀ ತಾಕಲಾಟಕ್ಕೆ ಹುಡುಕಲೆತ್ನಿಸುವೆ ಉತ್ತರ.

ನನ್ನ ಮನದೊಳ ದ್ವಂದ್ವ ವನು ಬಿಡಿಸಿ
ಅರ್ಥೈಸಿದೆನಿಸಿದರೂ
ನಿನ್ನ ಮನದಾಳ ಅರಿಯಲು ಬೇಕು ನಿನ್ನ ಪಾತ್ರ.

- ತೇಜಸ್ವಿ.ಎ.ಸಿ

Saturday, June 19, 2010

ಅನಿರೀಕ್ಷಿತ ಅತಿಥಿ

ಅನಿರೀಕ್ಷಿತ ಅತಿಥಿ

ಒಮ್ಮೆ ನಮ್ಮ ಮನೆಗೆ ಬಂದಿತ್ತೊಂದು ಪುಟ್ಟ ಅನಿರೀಕ್ಷಿತ ಅತಿಥಿ
ನನಗಾಗ ತಿಳಿಯಿತು ಯಾರ ಯಾರಿಗೋ ಇದೆ ನಮ್ಮೇಲೆ ಪ್ರೀತಿ

ಅತಿಥಿ ತನ್ನ ಪುಟ್ಟ ಸಂಸಾರವನ್ನೇ ಹೂಡುವ ಲೆಕ್ಕದಲಿ ಬಂದಿತ್ತು
ಸ್ವಲ್ಪ ದಿನದಲ್ಲಿ ತನ್ನ ಪುಟ್ಟ ಗೂಡಿನ ನಿರ್ಮಾಣ ಶುರು ಮಾಡಿತ್ತು

ನಮ್ಮ ಅತಿಥಿ ಪಾರಿವಾಳವು ಹಾರುತ್ತಿತ್ತು ಮಾತಾಡಿಸಲು ಬಂದರೆ
ನಮಗೂ ಅನಿಸಿತು ಕೊಡುವುದು ಬೇಡ ಅದರ ಸಂಸಾರಕ್ಕೆ ತೊಂದರೆ

ನಾವೆಲ್ಲಾ ಸುಮ್ಮನಿದ್ದೆವು ಆದರೆ ಕೇಳಬೇಕಲ್ಲ ನಮ್ಮ ಪುಟ್ಟ ಪೋರ
ಪದೇ ಪದೇ ಹೋಗಿ ಕಿಟಕಿ ಹತ್ತಿ ನೋಡುತ್ತಿದ್ದನು ಅದರ ಸಂಸಾರ

ಪೋರನ ಜೊತೆಗೂಡಿತ್ತು ಅವನ ಜೊತೆಗಾರ ನಮ್ಮನೆಯ ಶ್ವಾನ
ಇಬ್ಬರೂ ಜೊತೆಗೂಡಿ ಕಾಡಿ ಹಿಂಡುತ್ತಿದ್ದರು ಪಾರಿವಾಳದ ಪ್ರಾಣ

ಬಿಡಲಾದೀತೇ ಸಂಸಾರ ನಡೆಸುವುದು ಪೋರ, ಕುನ್ನಿಯ ಕಾಟಕ್ಕೆ
ಮೊಟ್ಟೆ ಇಟ್ಟು ಮುನ್ನುಗಿದ್ದವು, ತಡೆಯುವರಿಲ್ಲ ಅವುಗಳ ಹಾರಾಟಕ್ಕೆ

ದಿನ ಕಳೆದಂತೆ ಹೆಚ್ಚಾಗುತ್ತಾ ಹೋಯಿತು ಕಸ, ಕಡ್ಡಿಗಳ ಉಪಟಳ
ಕಾಲ ಕ್ರಮೇಣ ಬರಲಾರಂಬಿಸಿತು ಅವು ಹಾಕಿದ ಪಿಕ್ಕಿಯ ಪರಿಮಳ

ದುರ್ವಾಸನೆಯ ಅತಿಥಿಗಳನ್ನು ಮರಳಿ ಕಳಿಸಲು ನಿರ್ಧರಿಸಿದರು ಅಪ್ಪ
ನಾನು ಅಣ್ಣ ಸೇರಿ ಗೂಡ ತೆಗೆದು ಓಡಿಸಿದೆವು ಅವುಗಳ ಮರಿಗಳ ಪಾಪ

ಬಿಡಬೇಕೆ ಪಾರಿವಾಳಗಳು ಮತ್ತೆ ತಿರುಗಿ ಬಂದಿವೆ, ಹೊಸ ಗೂಡು ಕಟ್ಟಿವೆ
ತನ್ನ ಹೊಸ ಸಂಸಾರವನ್ನು ಹೊತ್ತು ತಂದಿವೆ, ಮತ್ತೆ ಮೊಟ್ಟೆಗಳ ಇಟ್ಟಿವೆ

- ತೇಜಸ್ವಿ.ಎ.ಸಿ

Saturday, June 12, 2010

ಜವಾಬ್ದಾರಿಯ ಲಾಭ

ಜವಾಬ್ದಾರಿಯ ಲಾಭ

ನಾನೊಮ್ಮೆ ಯೋಚಿಸಿದೆ ನಾನೇಕೆ ಹೀರೋ ಅಲ್ಲ
ಹೀರೋ ಆಗಬೇಕಾದರೆ ಏನೇನು ಮಾಡಬೇಕೆಲ್ಲ

ಕ್ರಿಕೆಟ್ ಆಡುವಾಗ ಚೆಂಡು ಬಂದಿತು ನಮ್ಮಿಬ್ಬರ ನಡುವೆ
ನಾನೇಕೆ ಓಡಲಿ ಅವನಿಗೆ ಚೆಂಡ ತಡೆವ ಜವಾಬ್ದಾರಿ ಬಿಡುವೆ

ತನ್ನೆಲ್ಲಾ ಶಕ್ತಿ ಕೊಟ್ಟು, ಹಾರಿ ಚೆಂಡ ತಡೆದನಾತ ಅಂದು
ಆ ಪ್ರಯತ್ನದಿಂದಾಗಿ ಉಳಿಯಿತು ಮೂರು ಓಟ ನಮ್ದು

ಆತನ ಶ್ರಮಕ್ಕೆ ಸಿಕ್ಕಿತು ಆತನಿಗೆ ಚಪ್ಪಾಳೆಯ ಸುರಿಮಳೆ
ಅದರಿಂದ ಆತನ ಮುಖದಲ್ಲಿ ಕಾಣುತ್ತಿತ್ತು ಉತ್ಸಾಹದ ಕಳೆ

ನಾ ಲೆಕ್ಕ ಹಾಕಿದೆ ಇದರಿಂದ ಆತನಿಗೆ ಸಿಕ್ಕ ಲಾಭವೇನು
ಆತನ ಜವಾಬ್ದಾರಿ ಮೂರು ಓಟ ಉಳಿಸಿದ್ದು ಲಾಭವಲ್ಲವೇನು

ಆತನಿಗೆ ಸಿಕ್ಕ ಮತ್ತೊಂದು ಲಾಭ ಆತನ ತುಂಬು ಆತ್ಮ ವಿಶ್ವಾಸ
ಇದೆಲ್ಲರ ಜೊತೆಗೆ ಆತನು ಗಳಿಸಿದ್ದ ತನ್ನ ಇಡೀ ತಂಡದ ವಿಶ್ವಾಸ

ಆ ಜವಾಬ್ದಾರಿಯಿಂದ ಅವನಿಗೆ ಸಿಕ್ಕಿತ್ತು ತಂಡದಿಂದ ಪ್ರಶಂಸೆ
ಈ ಅನುಭವಕ್ಕೆ ಮುಂಚೆ ನಾ ತಿಳಿದಿದ್ದೆ ಜವಾಬ್ದಾರಿ ಬರೀ ಹಿಂಸೆ

ಈ ಎಲ್ಲ ನನ್ನ ಅನುಭವದಿಂದ ನಾ ಕಲಿತೆ ಹೊಸ ಪಾಠವನು
ಇದು ಬೆಳೆಸಲಾರಂಭಿಸಿತು ಜವಾಬ್ದಾರಿಯ ಬಗ್ಗೆ ಪ್ರೀತಿಯನು

ಈಗ ಜೀವನದಲಿ ನಾ ಹೊರುತಿರುವೆ ವಿವಿಧ ಜವಾಬ್ದಾರಿಗಳನು
ಈ ನನ್ನ ಹೊಸ ನಡುವಳಿಕೆ ತಂದಿದೆ ಜೀವನದಲ್ಲಿ ಆಸಕ್ತಿಯನು

- ತೇಜಸ್ವಿ .ಎ.ಸಿ

Thursday, June 3, 2010

ನಿದ್ದೆ

  ನಿದ್ದೆ

  ದೈವ ಕೊಟ್ಟ ಅತ್ಯುತ್ತಮ ಉಡುಗೊರೆ ನೀನು
  ನೀನು ಕೊಡುವ ಉಲ್ಲಾಸಕ್ಕೆ ಸರಿಸಾಟಿ ಏನು
  ದಿನದ ದಣಿವಿಗೆ ಸುಖದ ಆರಾಮ ಕೊಡುವೆ
  ದಿನದ ಆತಂಕಕೆ ನಿಶ್ಚಿಂತ ನೆಮ್ಮದಿಯ ತರುವೆ

  ಇರುಳಷ್ಟೇ ಅಲ್ಲ ಹಗಲಲ್ಲೂ ಇರುವುದು ನಿನ್ನ ಸವಿ
  ಮಧ್ಯಾಹ್ನ ಊಟದ ನಂತರ ಎಳೆವಳು ನಿದ್ರಾದೇವಿ
  ನಿದ್ದೆಯ ಸವಿ ಸವಿಯಲು ಹೊತ್ತಿನ ಭೇದ ಭಾವವೇ
  ಕೆಲಸವಿಲ್ಲದಿದ್ದರೆ ಸಾಕು ತಾನೇ ನಿದ್ರೆಗೆ ಜಾರುವೆ

  ಕನಸುಗಳ ಸ್ವಪ್ನ ಲೋಕದಲಿ ಸುಂದರ ವಿಹಾರ
  ಸ್ವಪ್ನ ಲೋಕದ ಸುಖ ಇಳಿಸುವುದು ಮನಸಿನ ಭಾರ
  ಕನಸುಗಳು ಮಾಡುವವು ಬದುಕನ್ನು ವರ್ಣಮಯ
  ಕನಸುಗಳು ಮಾಡುವವು ನಿದ್ದೆಯನು ಸುಖಮಯ

  ಸುಖ ನಿದ್ದೆ ಕೆಡಿಸುವ ಹಲವು ವೃತ್ತಿಗಳಿವೆ ಜಗದಲಿ
  ದುರದೃಷ್ಟಕ್ಕೆ ಸೇವೆ ಗೈವರ ಪಾಲು ಹೆಚ್ಚು ಅದರಲಿ
  ಸ್ಥಿತಿ ಬದಲಾಗುವುದೆಂಬ ಆಶಯ ತಾಂತ್ರಿಕತೆಯಿಂದ
  ಎಲ್ಲಾ ರೀತಿಯ ಜನ ಸುಖ ನಿದ್ದೆ ಪಡೆಯಲಿ ಇದರಿಂದ

  ನಿದ್ದೆ ಗೆಟ್ಟೆಯೋ ಬುದ್ದಿ ಗೆಟ್ಟೆಯೋ ಎಂಬ ಹಳೆ ಗಾದೆ
  ತಿಳಿಸುವುದು ನಿದ್ದೆಗೆಟ್ಟರೆ ಆರೋಗ್ಯಕ್ಕಾಗುವ ಭಾದೆ
  ಪ್ರಕೃತಿ ಕೊಟ್ಟ ವರವಿದು ಜನರೆಲ್ಲರೂ ಸವಿಯಲಿ
  ನಿದ್ರೆಯಿಂದ ಸುಖ ಆರೋಗ್ಯವನ್ನು ಜನರೆಲ್ಲಾ ಗಳಿಸಲಿ

  - ತೇಜಸ್ವಿ. ಎ.ಸಿ

Friday, May 28, 2010

ಕಾರು ಬಾರು

  ಕಾರು ಬಾರು

  ಸಂಚಾರ ದಟ್ಟಣೆಯಿಂದ ಸಾಕೆನಿಸಿತ್ತು ಬೆಂಗಳೂರು
  ಸ್ವಲ್ಪ ನೆಮ್ಮದಿಗೆ ಕೊಳ್ಳಬೇಕೆನಿಸಿತು ಒಂದು ಕಾರು

  ಕಾರು ಕೊಳ್ಳಲು ಹೋದರೆ ಕಂಡಿತು ಹಲವು ಬಗೆ
  ಎ ಸಿ ಕಾರು ಕೊಳ್ಳಲು ಪ್ರೇರೇಪಿಸಿತು ಬಿಸಿಲ ಧಗೆ

  ವಿಧ ವಿಧ ಸಲಹೆಗಳನಿತ್ತರು ಅನುಭವಿ ಸ್ನೇಹಿತರು
  ವಿವಿಧ ಸಲಹೆಗಳ ಹೇಳಿ ದ್ವಂದ್ವದಲಿ ಸಿಲುಕಿಸಿದರು

  ಮನೆಯಿಂದ ಬರಿತ್ತಿತ್ತು ಐಶಾರಮಿ ಕಾರಿನ ಬೇಡಿಕೆ
  ಆಗಲು ಒಲ್ಲದೆಂದು ಹೇಳಿತು ಕಾಸು ಕೂಡಿಟ್ಟ ಮಡಿಕೆ

  ಸಾಲವನ್ನು ಕೊಡಲು ಸಾಲಾಗಿ ನಿಂತಿದ್ದವು ಬ್ಯಾಂಕುಗಳು
  ಅದಕ್ಕೆ ಅನುಮತಿಯ ಕೊಡಲಿಲ್ಲ ಭವಿಷ್ಯದ ಯೋಜನೆಗಳು

  ನನ್ನ ಜೇಬಿಗಿಡಿಸುವ ಪುಟ್ಟ ಕಾರು ಕೊಳ್ಳಬೇಕೆನಿಸಿತು ಒಮ್ಮೆ
  ಇರೋದು ಒಂದು ಜೀವನ ರಾಜಿ ಏಕೆ ಎಂದಿತು ಮತ್ತೊಮ್ಮೆ

  ನಾನು ಆಯ್ಕೆಗಳ ಬಗ್ಗೆ ಯೋಚಿಸಿ ಕೊನೆಗೆ ಸಿಲಿಕ್ಕಿದ್ದೆ ಪೇಚಿಗೆ
  ಹೇಗಾದರೂ ಒಂದು ಉತ್ತರ ಕಂಡು ಬರ ಬೇಕೆಂದಿದ್ದೆ ಆಚೆಗೆ

  ಇನ್ನೂ ಕೊಂಚ ಹಣ ಕೂಡಿಸೋಣ ಎಂದೇಳಿತು ಯೋಚನೆ
  ಕೊನೆಗೆ ಸ್ವಲ್ಪ ಮುಂದೆ ಹಾಕಿದೆ ಕಾರು ಕೊಳ್ಳುವ ಯೋಜನೆ

  - ತೇಜಸ್ವಿ . ಎ. ಸಿ

Friday, May 21, 2010

ಕಾಲೇಜಿನಿಂದ ಕಚೇರಿವರೆಗೆ

ಕಾಲೇಜಿನಿಂದ ಕಚೇರಿವರೆಗೆ

ಹುಡುಗರು ಓದಿ ಮುಗಿಸಿದರು ಕಾಲೇಜು ಶಿಕ್ಷಣ
ಕೆಲಸಕ್ಕೆ ಹೊರಡಲು ಒತ್ತಡ ಬಿದ್ದಿತ್ತು ಮರುಕ್ಷಣ

ಗೆಳೆಯರು ಸೇರಿ ಸಭೆ ನಡೆಸಿದರು ಈ ಬಾರಿ
ಕೆಲಸಕ್ಕಾಗಿ ಎಲ್ಲರು ಹಿಡಿದರು ನಗರದ ದಾರಿ

ಒಟ್ಟಿಗೆ ಸೇರಿದರು ಕೊಂಡು ರೈಲಿನ ಟಿಕೇಟು
ನಡೆದರು ಹೊತ್ತು ತಮ್ಮ ಬ್ಯಾಗು, ಸರ್ಟಿಫಿಕೇಟು

ಹುಡುಗರು ಸೇರಿ ಪಡೆದರು ಒಂದು ಕೋಣೆಯ ಮನೆ
ಅವಿವಾಹಿತರ ಮನೆಯ ಹುಡು’ಕಾಟಕ್ಕೆ’ ಸಿಕ್ಕಿತು ಕೊನೆ

ಹುಡುಗರು ಗಳಿಸಿದ್ದರು ಒಬ್ಬಬ್ಬರೂ ಒಂದೊಂದು ಅಂಕ
ಕಷ್ಟಪಟ್ಟು ಕೆಲಸ ಗಿಟ್ಟಿಸಲೇಬೇಕೆಂದು ಕಟ್ಟಿದ್ದರು ಟೊಂಕ

ಒಳ್ಳೆಯ ತಿಂಡಿ ಊಟವ ಪಡೆಯುವುದು ಆಗಿತ್ತು ದುಸ್ತರ
ಅಮ್ಮ ಮಾಡಿದ ಅಡುಗೆಯ ಬೆಲೆ ಗೊತ್ತಾಗಿತ್ತು ಈ ತರಹ

ವೃತ್ತಿ ಕೌಶಲ ಕಲಿಯಲು ಸೇರಿದರು ವಿವಿಧ ಕೋರ್ಸುಗಳು
ಕೋರ್ಸುಗಳ ಮಾಡುತ ಕೊಟ್ಟರು ಹಲವು ಸಂದರ್ಶನಗಳು

ಕೊನೆಗೂ ಸಿಗುತ ಬಂತು ನಮ್ಮ ಹುಡುಗರಿಗೆ ಕೆಲಸದ ಕರೆ
ಮಕ್ಕಳು ಯಶಸ್ಸು ಕಂಡು ಪೋಷಕರ ಕನಸಾಯಿತು ಖರೆ

- ತೇಜಸ್ವಿ.ಎ.ಸಿ

Saturday, May 15, 2010

ಉತ್ತಮ ಅಭ್ಯಾಸ

ಉತ್ತಮ ಅಭ್ಯಾಸ

ನನ್ನ ಆಸೆಗಳಲ್ಲಿ ನಾ ಗಳಿಸ ಬೇಕೆಂದಿದ್ದೆ ಯಶಸ್ಸು
ಅದಕ್ಕೆ ನಾ ಮಾಡಿದೆ ಅದನ್ನು ಗಳಿಸುವ ಮನಸ್ಸು

ಹೊಸದರಲ್ಲಿ ಇರುತಿತ್ತು ಅದನ್ನು ಸಾಧಿಸುವ ಧ್ರುಡತೆ
ಕಾಲಕ್ರಮೇಣ ಮನಸು ಜಾರಿ ಕಾಡುತ್ತಿತ್ತು ಚಂಚಲತೆ

ಚಾಂಚಲ್ಯದ ಪರಿಣಾಮವಾಗಿ ಆಗುತ್ತಿತ್ತು ಮನ ಚಾಲೂ
ಸದಾ ಹರಿಯುವ ಮನದಿಂದಾಗಿ ಆಗುತ್ತಿತ್ತು ಬರಿ ಸೋಲು

ಏಕೆ ಮನವೆ ನೀನು ಹೀಗೆ ಹರಿಯುವ ನೀರಾಗುವೆ
ನಿನ್ನ ನಂಬಿದ ಆಸೆಗಳಿಗೆ ನೀ ಏಕೆ ಕೈ ಕೊಡುವೆ?

ನಾ ಹೀಗಿರಲು ನೀ ಮೈಗೂಡಿಸಿದ ಅಭ್ಯಾಸಗಳೇ ಕಾರಣ
ಅನುತ್ಪಾದಕ ಅಭ್ಯಾಸಗಳಿಂದ ಆಗಿದೆ ಆಸೆಗಳ ಮರಣ

ಅಭ್ಯಾಸಗಳು ಮಾಡುವವು ನಡವಳಿಕೆಯನ್ನು ಸ್ವಯಂಚಾಲಿತ
ಆಸೆಗಳಲ್ಲಿ ಗೆಲ್ಲಲು ಬೇಕು ಈ ನಡವಳಿಕೆಯ ಮೇಲಿನ ಹಿಡಿತ

ಅದಕ್ಕೆ ನೀ ಯೋಚಿಸಿ ಆರಿಸು ಬೆಳೆಸಬೇಕಾದ ಅಭ್ಯಾಸಗಳನ್ನ
ದಿನ ನಿತ್ಯವು ಆಚರಣೆಗೆ ತರು ರೂಡಿಸುತ ಆ ನಡುವಳಿಕೆಗಳನ್ನ

ಉತ್ತಮ ಉತ್ಪಾದಕ ಅಭ್ಯಾಸಗಳು ಆದರೆ ಜೀವನದ ಭಾಗ
ಪಡೆದುಕೊಳ್ಳುವುದು ನಿನ್ನೆಲ್ಲಾ ಆಸೆಗಳ ಈಡೇರಿಕೆಯು ವೇಗ

- ತೇಜಸ್ವಿ .ಎ.ಸಿ

Friday, May 7, 2010

ಗುರಿ ಮುಟ್ಟು ಮನುಜ

  ಗುರಿ ಮುಟ್ಟು ಮನುಜ

  ಗುರಿಯಿಲ್ಲದ ಜೀವನ ಬದುಕಿನುತ್ಸಾಹಕ್ಕೆ ಮಂಕು
  ಈ ಸುಧೀರ್ಘ ಜೀವನಕ್ಕೊಂದು ಗುರಿ ಬೇಕೇ ಬೇಕು

  ನಾವಿಡುವ ಗುರಿ ವಾಸ್ತವದ ಆವರಣದಲ್ಲಿ ಇರಬೇಕು
  ಗುರಿ ಮುಟ್ಟುವ ಹಾದಿಯನು ಅಳಿಯುವಂತಿರ ಬೇಕು

  ನಿಗದಿ ಪಡಿಸುವ ಗುರಿ ನಮಗೆ ಸ್ಪಷ್ಟವಾಗಿರಲಿ
  ಆ ಸ್ಪಷ್ಟ ಗುರಿಗೊಂದು ಸಮಯದ ಅಂಕುಶವಿರಲಿ

 ಸೋಲದಿದ್ದರೆ ಸಾಕು ಎಂದರೆ ಗುರಿ ಮುಟ್ಟುವುದಿಲ್ಲ
 ಗೆಲ್ಲಲೇ ಬೇಕೆಂಬ ಛಲ ಮುಟ್ಟಿಸದೆ ಬಿಡುವುದಿಲ್ಲ

  ನಿನ್ನ ದುರ್ಬಲ ಆಸೆ ಎಂದೂ ಗುರಿ ಮುಟ್ಟಿಸುವುದಿಲ್ಲ
  ಧೈರ್ಯದಿ ಹಟ ಕಟ್ಟಿ ನಿಂತವರು ನುಗ್ಗುತಿರುವರೆಲ್ಲ

  ಗುರಿಯ ಹಾದಿಯಲ್ಲಿ ಸೋಲುಗಳು ಎದೆ ಕುಗ್ಗುಸಿವುದು
  ಈ ಸೋಲು ಸವಾಲುಗಳೇ ನಿನ್ನ ಪ್ರಭುದ್ದವಾಗಿಸುವುದು

  ಮಡಿಕೆಯೊಳ ಕುಂಬಳದಂತೆ ಮಿತಿಯೊಳಗೆ ನಿಲ್ಲ ಬೇಡ
  ನಿನ್ನ ಆತ್ಮ ಗೌರವವನು ನೀನೆಂದೂ ಮೊಟಕು ಗೊಳಿಸಬೇಡ

  ತಾಳ್ಮೆ , ಬುದ್ದಿ, ಧ್ರುಡತೆ ಗುರಿಗೆ ನಿನ್ನ ಅಸ್ತ್ರವಾಗಿರಲಿ
  ಎಲ್ಲಾ ಗುರಿ ಸಾಧಿಸುತ್ತ ಆತ್ಮ ವಿಶ್ವಾಸ ತುಂಬುತಿರಲಿ

  - ತೇಜಸ್ವಿ. ಎ.ಸಿ

Thursday, April 29, 2010

ಹ್ಯಾಪಿ ಬರ್ತಡೆ

ಹ್ಯಾಪಿ ಬರ್ತಡೆ

ಚಿಂಟು ಕೇಳಿದ ಕೇಕು
ನನಗೆ ಬೇಕೇ ಬೇಕು

ಮಾಡೋಣ ನಿನ್ನ ಬರ್ತಡೆ
ಮುಂದಿನ ತಿಂಗಳು ಬರ್ತದೆ

ತರೋಣ ದೊಡ್ಡ ಕೇಕು
ಈಗ ಮಿಠಾಯಿ ಸಾಕು

ಇವತ್ತೇ ಬರ್ತಡೆ ಯಾಕಿಲ್ಲ
ಈಗಲೇ ಕೇಕು ಬೇಕಲ್ಲ

ಚಿಂಟುವಿನ ಹಠ ನಿಲ್ಲಲಿಲ್ಲ
ಕೊನೆಗೂ ಕೇಕು ಸಿಕ್ಕಿತಲ್ಲ

ಚಿಂಟು ಕುಣಿದು ಕೇಕು ತಿಂದ
ದಿನಾ ಬರ್ತಡೆ ಬರಲಿ ಎಂದ

- ತೇಜಸ್ವಿ. ಎ.ಸಿ

Thursday, April 22, 2010

ಮೋಜಿನ ಬೇಸಿಗೆ ರಜೆ

ಮೋಜಿನ ಬೇಸಿಗೆ ರಜೆ


ಮುಗಿಯಿತು ಮಕ್ಕಳ ವಾರ್ಷಿಕ ಪರೀಕ್ಷೆ
ಮರಳಿ ಬಂದಿದೆ ಎಲ್ಲರಿಗೂ ಬೇಸಿಗೆ ರಜೆ

ಧರೆಯಲಿ ಉರಿಯುತ್ತಿದೆ ಬೇಸಿಗೆಯ ಧಗೆ
ಮಕ್ಕಳು ನೆನೆವರು ಐಸ್ ಕ್ರೀಮ್ ಗಳ ಬಗೆ

ಬೆಳಗಿನಿಂದ ಸಂಜೆವರೆಗೂ ಆಡುವರು ಕ್ರಿಕೆಟ್ಟು
ಆಟವೆಂದರೆ ಓಡುವರಿವರು ಊಟ ತಿಂಡಿ ಬಿಟ್ಟು

ಊರಿನ ಕೆರೆ, ಕೊಳದಲ್ಲಿ ಮಕ್ಕಳಾಡುವರು ಈಜು
ರಜೆಯಲ್ಲಿ ಯಾರು ತಡೆಯರು ಇವರುಗಳ ಮೋಜು

ರಜೆಯಲ್ಲಿ ಓಡುವರು ತಾತ ಅಜ್ಜಿಗಳ ಊರಿಗೆ
ತಡೆ ಹಾಕಲಾದೀತೇ ಇವರುಗಳ ಓಟದ ದಾರಿಗೆ

ಮಳೆ ಬಂದರೆ ಮನೆಯಲ್ಲಿ ನಿಲ್ಲುವರೇ ಇವರು
ಅದರಲ್ಲೂ ಸೇರಿ ನೆನೆವ ಹೊಸ ಆಟ ಆಡುವರು

ಬೇಸಿಗೆ ಶಿಬಿರಕ್ಕೆ ಸೇರುವರು ನಗರದ ಮಕ್ಕಳು
ಪ್ರಕೃತಿಯನ್ನೇ ಶಿಬಿರ ಮಾಡುವರು ಹಳ್ಳಿಯ ಹೈಕಳು

ಕುಂಟಾಪಿಲ್ಲೆ, ಕಬಡ್ಡಿ, ಕೊ ಕೋ, ಮರಕೋತಿ, ಬುಗುರಿ
ಗೋಲಿ, ಕ್ರಿಕೆಟ್ಟು, ಚಿನ್ನಿದಾಂಡು, ಚೌಕಬಾರಾ, ಲಗೋರಿ

ಚಿತ್ರ, ಸೈಕಲ್, ಈಜು ಕಲಿಯಲು ಒಳ್ಳೆಯ ಅವಕಾಶ
ಎಲ್ಲಾ ಕಲಿತು ನಲಿಯುವರು, ಗಳಿಸಿ ಆಸೆಯಲ್ಲಿ ಯಶ

ಈ ದಿನಗಳು ಬರುವುದಿಲ್ಲ ಮುಂದೆ ದೊಡ್ಡವರಾದಾಗ
ಕಲಿತು, ಕುಣಿದು ಕುಪ್ಪಳಿಸಿ ನೀವುಗಳು ಚಿಕ್ಕವರಿದ್ದಾಗ

- ತೇಜಸ್ವಿ .ಎ. ಸಿ

Thursday, April 15, 2010

ಹೀಗೆ ಆಗಿದ್ದಿದ್ದರೆ

ಹೀಗೆ ಆಗಿದ್ದಿದ್ದರೆ

ಮನಸು ಗರಿಗೆದರಿತು ಆಕೆಯ
ನೋಡಿ

ಆಗಬೇಕನಿಸಿತು ನಾವಿಬ್ಬರು
ಜೋಡಿ

ಮಾತಾಡಿಸಿ, ನಗಿಸಿ ಮಾಡಿದೆ
ಮೋಡಿ

ನಂತರ ಪ್ರೇಮದ ಸಿಗ್ನಲ್ ಕೊಟ್ಟೆ
ನೋಡಿ

ಮೊದಲು ನಂಬಲಿಲ್ಲ ಪರೀಕ್ಷಿಸಿದಳು
ನಾಟಕವಾಡಿ

ನಿಧಾನವಾಗಿ ತೆಕ್ಕೆಗೆ ಬಿದ್ದಳು ಮನಸು
ಮಾಡಿ

ಕುಣಿದೆವು ಕೆಲ ದಿನ ಬಾನಂಗಳದಿ
ಹಾರಾಡಿ

ಸಿಕ್ಕಿ ಬಿದ್ದೆವು ಮನೆಯಲ್ಲಿ, ಎಲ್ಲೆಡೆ
ತಿರುಗಾಡಿ

ಮದುವೆಗೆ ಒಪ್ಪಿಸಿದೆವು ಮನೆಯಲ್ಲಿ
ಹೋರಾಡಿ

ಈಗ ಉಂಟು ಮಕ್ಕಳೆರಡು ಅಂಗಳದಿ
ಆಟವಾಡಿ

- ತೇಜಸ್ವಿ .ಎ.ಸಿ

Friday, April 9, 2010

ಯಾರಿವನು ಸಿಂಹ

ಯಾರಿವನು ಸಿಂಹ

ನೆನೆಪಿದೆ ನನಗೆ ಆ ನಸುಗೆಂಪು ಸಂಜೆ
ಅಂದು ಇತ್ತು ನನಗೆ ಭಾನುವಾರದ ರಜೆ

ಅದು ಅಂದು ಆಗಿತ್ತು ತುಂಟ ಪುಟ್ಟ ಕಂದ
ಕೆಂಪು ರಿಬ್ಬನ್ ಕಟ್ಟಿಕೊಂಡು ಕಂಡಿತ್ತು ಚೆಂದ

ತುಂಟ ಕುನ್ನಿಯ ಕಣ್ಣಿನಲ್ಲಿ ಕಾಣುತ್ತಿತ್ತು ಅರ್ಧ ಚಂದ್ರ
ಅವನನ್ನು ಹೊತ್ತು ತರಲು ಪೆಟ್ಟಿಗೆಯಲ್ಲಿ ಮಾಡಿದ್ದೆ ರಂದ್ರ

ಆ ಪುಟ್ಟ ಶ್ವಾನಕೆ ಅವರು ಹಾಕಿದ್ದರು ಆನೆಯ ಸರಪಳಿ
ಆ ಕುನ್ನಿಯು ಬಂದಿತು ಮನೆಗೆ ಆಗಿ ಪುಟ್ಟ ಬಳುವಳಿ

ಪುಟ್ಟ ಕುನ್ನಿಯ ತುಂಟಾಟ ಅಂದು ಗಳಿಸಿತ್ತು ಎಲ್ಲರ ಪ್ರೀತಿ
ಅವನು ಮಾಡುತ್ತಿದ್ದ ನಾಯಿಗಳ ಬೇಟೆ ಪಡೆದಿತ್ತು ಮನೆಯಲ್ಲಿ ಖ್ಯಾತಿ

ಶಾಲೆಗೆ ಹೋಗುವ ಮಕ್ಕಳನ್ನು ಹೆದರಿಸುತ್ತಿದ್ದ ಬೊಗಳಿ
ಕುಣಿದು ಬೊಗಳಿ ಕೆಸರು ಮಾಡುತ್ತಿದ್ದ ನಮ್ಮ ಮನೆಯ ಜಗುಲಿ

ವಾಕಿಂಗ್ ಎಂದು ಹೋಗುವಾಗ ಮುಖದಲ್ಲಿರಿತ್ತಿತ್ತು ಸಿಂಹದ ಠೀವಿ
ರಸ್ತೆಯ ಹಂದಿ, ನಾಯಿಗಳಿಗೆ ಸದಾ ಆಗಿರುತ್ತಿದ್ದ ಬೇಟೆಯ ಕೋವಿ

ನಮ್ಮ ಮನೆಯ 'ನಂದು'ವನ್ನು ಸಾಕಿದ್ದೇವೆ ಸಿಂಹದ ಧಾಟಿ
ಎಂದೂ ಕಳ್ಳರನ್ನು ಬಿಡಲಿಲ್ಲ ಅದು ಹೋಗಲು ತನ್ನನು ದಾಟಿ

- ತೇಜಸ್ವಿ .ಎ.ಸಿ

Thursday, April 1, 2010

ಬಿದ್ದ ಅವನು ಜಾರಿ

  ಬಿದ್ದ ಅವನು ಜಾರಿ

  ಪ್ರೇಮ ನಿವೇದಿಸಬೇಕೆಂದ
  ಸೂರಿ

  ಬೀಳ ಬೇಡ ಎಂದೇ
  ಜಾರಿ

  ಆದರೂ ಬಿಡದೆ ನಡೆಸಿದ
  ತಯಾರಿ

  ಹೇಳಲು ಮುಂದೆ ನಿಂತ
  ಈ ಬಾರಿ

  ಮುಂದೆ ನಿಂತು ಆದನಾತ
  ಗಾಬರಿ

  ಅವಳು ತೋರಿದಳು ಅಸಡ್ಡೆಯ
  ಮಾರಿ

  ಕಾಣದಾಯಿತು ಅವನಿಗೆ ಯಾವ
  ದಾರಿ

  ಬೆಪ್ಪ ಹೇಳಿದ ನೀನೆ ಎನ್ನ
  ಸೋದರಿ

  - ತೇಜಸ್ವಿ .ಎ .ಸಿ

Saturday, March 27, 2010

ನಮ್ಮ ಮನೆ

 ನಮ್ಮ ಮನೆ

ಶಾಲೆಯಲ್ಲಿದ್ದಾಗ ನೆನೆಯುತ್ತಿದ್ದೆ ನಿನ್ನ ಪ್ರತಿ ಅವಧಿ
ಮನೆಯೇ, ನಿನ್ನಲ್ಲಿ ಅಲ್ಲವೇ ಸಿಗುವುದು ನನ್ನ ನೆಮ್ಮದಿ

ಶಾಲೆ ಘಂಟೆಯ ಸದ್ದಿಗೆ ಕಾದಿದ್ದೆವು ಬಕ ಪಕ್ಷಿಯಂತೆ
ಸಂಜೆಯಾದರೆ ಹಾರುತ್ತಿದ್ದೆವಲ್ಲ ಗೂಡಿಗೆ ಹಕ್ಕಿಯಂತೆ

ಆರಾಮದ ವಿಷಯದಲ್ಲಿ ಮನೆಗೆ ಉಂಟೆ ಸಾಟಿ?
ಮನೆಯಲಿರುವ ಸುಖಕ್ಕಾಗಿ ಎಲ್ಲರಿಗೂ ಬೇಕು ಸೂಟಿ

ಜನರು ದುಡಿದು ಕಟ್ಟಲು ಬಯಸುವ ಗೂಡು ನೀನು
ನಿನ್ನನು ನೆನೆದಾಗ ಸಿಗುವ ನೆಮ್ಮದಿಗೆ ಹೋಲಿಕೆ ಏನು?

ಹುಟ್ಟಿದಾಗಲೇ ಸ್ವಂತ ಮನೆಯೊಂದಿದ್ದರೆ ಅದೇ ಅದೃಷ್ಟ
ಆದರೂ, ಹೊಸ ಮನೆ ಕಟ್ಟುವ ಗುರಿಯೂ ಬಲು ಇಷ್ಟ

ಈಗೇನು, ಮನೆ ಕಟ್ಟಲು ಹಲವು ಬ್ಯಾಂಕುಗಳು ಕೊಡುತ್ತವೆ ಸಾಲ
ತೀರಿಸಲು ಉಪಯೋಗಿಸಿ ಕಂತುಗಳಲ್ಲಿ ನಿಮ್ಮ ಸಂಬಳದ ಬಲ

ಏನೇ ಹೇಳೀ ರಾಜಿ ಮಾಡಲಾಗದು ವಿಶಾಲ ಮನೆಯ ಅಗತ್ಯಕ್ಕೆ
ಬುದ್ದಿಯಿಂದ ಹಣ ಮಾಡಿ ಕಟ್ಟುವೆವು ಕನಸಿನ ಮನೆಯನ್ನು ಆಗಸಕ್ಕೆ

ಹಾಕಲಿ ಎಲ್ಲರೂ ಕಟ್ಟಿಸಲು ಮನೆಯ ನೀಲ ನಕ್ಷೆಯ ಯೋಜನೆ
ಎಲ್ಲರಿಗೂ ಸಿಗಲಿ ಸುಂದರ-ನೆಮ್ಮದಿಯ ತರುವ ಸ್ವಂತದ ಮನೆ

- ತೇಜಸ್ವಿ. ಎ. ಸಿ

Tuesday, March 16, 2010

ಸವಲತ್ತಿನ ಜೀವನ

ಸವಲತ್ತಿನ ಜೀವನ

ನಮ್ಮ ಕನಸಿಗೂ ಎಟುಕದ ಜೀವನವಿದು
ನನಸಿನಲ್ಲೇ ಸಿಕ್ಕಿದೆಯಲ್ಲ ನಿಜವೇ ಇದು
ಕನಸಿನಲ್ಲೂ ಈ ತರಹ ಕನಸು ಕಂಡಿರಲಿಲ್ಲ
ಮಹಾರಾಜನು ಇಂತಹ ಜೀವನ ಸವಿದಿರಲಿಲ್ಲ

ಸುಖದಿ ಓಡಾಡಲು ಆಡಂಬರ ವಾಹನಗಳ ಕಾಲ
ದೂರದಿ ಮಾತಾಡಲು ದೂರವಾಣಿಯ ಜಾಲ
ಸಾವಿರಾರು ಚಾನಲ್ ನ ದೂರದರ್ಶನದ ಗಾಳ
ಹೊಸ ವಿಧ್ಯುನ್ಮಾನ ಯಂತ್ರಗಳ ನಿತ್ಯದ ಮೇಳ

ಗಣಕ ಯಂತ್ರಗಳಲ್ಲಿ ಕೆಲಸ ಮಾಡುವ ಸವಲತ್ತು
ಬೇಕಾದಾಗ ಹಣ ಕೊಡುವ ಎಟಿಎಂಗಳ ದೌಲತ್ತು
ಆಹಾರ ಸುರಕ್ಷಿಸುವ ಶೀತಕ ಪೆಟ್ಟಿಗೆಗಳ ತಂಪು
ಬಗೆ ಬಗೆ ಅಡುಗೆಗೆ ವಿಧ್ಯುತ್ ಸಾಧನಗಳ ಇಂಪು

ಬರೆಯಲು ಕೂತರೆ ಬಾಲಂಗೋಚಿಯ ಪಟ್ಟಿಯಿದೆ
ಇವೆಲ್ಲದರಿಂದ ನಮ್ಮಗಳ ಜೀವನ ಬಲು ಗಟ್ಟಿಯಿದೆ
ಹಲವು ಯುಗದ ಜನಗಳು ಅನುಭವಿಸದ ಬಾಳ್ವೆಯಿದು
ನಿಶ್ಚಿಂತರಾಗಿರಲು ನಮಗೆ ದೈವವಿತ್ತ ಸೌಕರ್ಯವಿವು

ನೆನೆಯಿರಿ ಇಲ್ಲದ ಕುರಿತು ಕೊರಗುವ ಜನಗಳೇ
ಹಾಗೆಂದು ಸೋಮಾರಿಗಳಾಗಬೇಡಿ ಮನುಜರೆ
ಬಾಳಲು ಸಿಕ್ಕಿದೆ ಕೇಳದ ಸುಂದರ ಸುಖದ ಜೀವನ
ನೆನೆಯಿರಿ ಈ ಸುಖ ಸವಲತ್ತು ಕೊಟ್ಟ ಭಗವಂತನ

- ತೇಜಸ್ವಿ .ಎ.ಸಿ





Thursday, March 11, 2010

ತನ್ನನ್ನು ಮೊದಲು ಪ್ರೀತಿಸು

ತನ್ನನ್ನು ಮೊದಲು ಪ್ರೀತಿಸು

ನಿಲ್ಲು ವೇಗದಿ ಓಡುತ್ತಿರುವ ಗೆಳೆಯನೆ
ಮರೆತೆಯೇನು ಪ್ರೀತಿಸಲು ತನ್ನನೇ
ಜೀವನದ ದೋಣಿಯನು ಸಾಗಿಸುವ ಭರದಲಿ
ಮರೆತೆಯೇನು ಪ್ರೀತಿಸಲು ತನ್ನನೇ
ಬಾಲ್ಯದ ಹೊತ್ತಿಗೆಯ ಭಾರವನು ಇಳಿಸುವೆತ್ನದಲಿ
ಮರೆತೆಯೇನು ಪ್ರೀತಿಸಲು ತನ್ನನೇ
ಹರೆಯದ ಹುಚ್ಚು ಸ್ಪರ್ಧೆಯನು ಗೆಲ್ಲುವೆಡೆಯಲಿ
ಮರೆತೆಯೇನು ಪ್ರೀತಿಸಲು ತನ್ನನೇ
ಯೌವನದಿ ಪರರ ಪ್ರೇಮವ ಪಡೆಯುವ ತವಕದಲಿ
ಮರೆತೆಯೇನು ಪ್ರೀತಿಸಲು ತನ್ನನೇ
ತನ್ನ ಸಂಸಾರದ ಹೊರೆ ಹೊತ್ತು ದಡ ಮುಟ್ಟುವಲಿ
ಮರೆತೆಯೇನು ಪ್ರೀತಿಸಲು ತನ್ನನೇ
ಜೀವನಕೆ ಸಂಪಾದಿಸುವ ನೀ ಪಡುವ ಶ್ರಮದಲಿ
ಮರೆತೆಯೇನು ಪ್ರೀತಿಸಲು ತನ್ನನೇ
ಜೀವನದ ಪುಟವೊಮ್ಮೆ ತಿರುಗಿಸು, ಅಲಕ್ಷಿಸಿದ್ದೆಯ ತನ್ನನೇ
ನಿನ್ನೇ ಮನ ಬಿಚ್ಚಿ ಪ್ರೀತಿಸು, ಜೀವನೋತ್ಸಾಹವನ್ನು ಹೆಚ್ಚಿಸು  
ಆದ್ಯತೆ ಕೊಡು ಬದುಕಿನ ಲಕ್ಷ್ಯಕ್ಕೆ, ಹೆಚ್ಚಿಸು ಜೀವನದ ದಕ್ಷತೆ

- ತೇಜಸ್ವಿ.ಎ.ಸಿ

Wednesday, March 3, 2010

ಮಾನವ ಸಮಾನತೆ

ಮಾನವ ಸಮಾನತೆ

ಜೀವಿಸಲೊಂದು ಭೂಮಿ, ಒಂದೇ ಜೀವನ.
ಮಾಡಬಹುದಲ್ಲವೇ ಇದನ್ನು ನಂದನ ವನ

ದೇವರು ಸೃಷ್ಟಿಸಿ ಕೊಟ್ಟದ್ದು ಕೇವಲ ಎರಡು ಜಾತಿ
ನಮ್ಮ ಸೃಷ್ಟಿಯಲ್ಲವೇ ಧರ್ಮ, ಜಾತಿಗಳೆಂಬ ಭ್ರಾಂತಿ

ಜಾತಿ ಧರ್ಮ ಎಂದು ಮಾಡುತ್ತಿದ್ದಾರೆ ಅಮಾಯಕರ ತಿಥಿ
ವೈಯಕ್ತಿಕವಲ್ಲವೇ ಈ ನಂಬಿಕೆಗಳು, ಓ ಭೂಮಿ ಮೇಲಿನ ಅತಿಥಿ?

ಈ ಮನದೊಳಗಿನ ನಂಬಿಕೆಗೆ ಏಕೆ ಬೇಕು ಬಾಹ್ಯ ಕಟ್ಟಡ?
ಸೃಷ್ಟಿಸಲೇ ಸದಾ ಗುಮಾನಿ, ಧ್ವೇಷವೆಂಬ ಅಂತರ?

ಅಳಿಸಿ ನೋಡಿ ಜಾತಿ, ಧರ್ಮ, ಭಾಷೆ ಹಾಗು ಬಣ್ಣ,
ಈ ಎಲ್ಲಾ ಒಂದೇ ಆದ್ರೆ ಜಗವು ಎಷ್ಟು ಸುಂದರವಣ್ಣ.

ಎಲ್ಲಾ ತೊಡೆದು ಒಂದಾಗಲು ಮನದಲಿ ತುಂಬಲಿ ಪ್ರೀತಿಯ
ಎಲ್ಲಾ ವ್ಯತ್ಯಾಸ ಮೀರಿ, ಮಾನವತೆ ಮೆರೆಯಲಿ ಎಂದೆನ್ನ ಆಶಯ

- ತೇಜಸ್ವಿ .ಎ. ಸಿ

Monday, February 22, 2010

ಸ್ವಾವಲಂಬನೆಯತ್ತ ಹೆಜ್ಜೆ

ಸ್ವಾವಲಂಬನೆಯತ್ತ ಹೆಜ್ಜೆ

ಸ್ನೇಹಿತನಿಗೊಂದು ದಿನ ಬಂದಿತ್ತು ಈ-ಪತ್ರ
ಗೆದ್ದಿದ್ದನಾತ ಲಾಟರಿ ಹತ್ತು ಕೋಟಿಯಷ್ಟು ಎತ್ತರ

ಗೊತ್ತಿತ್ತು ಎಲ್ಲರಿಗೂ ಈ ಲಾಟರಿ ಮೋಸದ ಬಲೆ ಎಂದು
ನಾ ಕೇಳಿದೆ, ನಿಜವಾಗಲೂ ಸಿಕ್ಕರೆ ಏನು ಮಾಡುವೆ ಎಂದು?

ಹೇಳಿದ ಆತ ಎಲ್ಲರಿಗೂ ನಿರೀಕ್ಷಿತ ಉತ್ತರವನ್ನು
ಬಿಡುವೆ ಈ ವೃತ್ತಿಯನ್ನು, ಘೋಷಿಸಿ ನಿವೃತ್ತಿಯನ್ನು

ಅಬ್ಬಾ!! ಕಂಡೆ ನಾ ಜನಗಳ ಬಹು ಮುಖ್ಯ ಗುರಿಯನ್ನು
ಆದಷ್ಟು ಬೇಗ ಜೀವನದಲ್ಲಿ ನೆಲೆಯೂರುವ ತುಡಿತವನ್ನು

ಗುರಿ ಗೊತ್ತಾಗಿಯೂ ನಾವ್ ಮಾಡುತ್ತಿರುವ ಕೆಲಸವೇನು?
ಉಧ್ಯೋಗ ಹಿಡಿದು ಬರುವ ಸಂಬಳಕ್ಕೆ ಕಾಯುವುದೇ ಏನು?

ನೋಡಿದೆ ನನ್ನ ಜೀವಮಾನದ ಒಟ್ಟು ಆದಾಯವನ್ನು ಗುಣಿಸಿ
ಸಿಗುವುದಿಷ್ಟೇನಾ ಜೀವನವೆಲ್ಲಾ ದುಡಿದರೂ ದೇಹವನ್ನು ಧಣಿಸಿ?

ಕಾಯುತ್ತ ಕೂತವರು ಗಳಿಸಿದ್ದಾರೆಯೇ ಗುರಿಯಲ್ಲಿ ಯಶಸ್ಸು?
ಸಾಧ್ಯವಾಗುವುದು ಗುರಿ, ಮಾಡಿದರೆ ಸ್ವಂತ ಪ್ರಯತ್ನದ ಮನಸ್ಸು

ಗುರಿ ಮುಟ್ಟುವ ತವಕದಲಿ ಹಾಕಲಿ ಜನಗಳು ಶ್ರಮ
ಮುನ್ನುಗ್ಗಿ ಶ್ರಮಿಸುವುದೇ, ಕಾಯುವುದಕ್ಕಿಂತ ಉತ್ತಮ.

ಗುರಿಯಲ್ಲಿ ಸಾಧಿಸಲಿ ಯಶಸ್ಸು ನಮ್ಮ ಪ್ರೀತಿಯ ಜನ
ಆಗಲೇ ನೆಲೆಯೂರಲು ಆಗುವುದು ನಮ್ಮೆಲ್ಲರ ಜೀವನ.

- ತೇಜಸ್ವಿ. ಎ. ಸಿ

Tuesday, February 9, 2010

ವಾಸ್ತವವ ಅರಿ ಮನವೆ

ವಾಸ್ತವವ ಅರಿ ಮನವೆ

ವಾಸ್ತವಿಕತೆಯ ಅರಿ ಮನವೇ ನಿಜ ವಾಸ್ತವವ
ಭೌತಿಕ ಜಗದಲಿರುವ ಸರಳ ಹಸಿ ಸತ್ಯವ

ಪ್ರತಿ ನಿತ್ಯ ಆಡುವೆ ಮಾತು ದಿನಕ್ ಹತ್ತು ಲಕ್ಷ
ನಿಜವಾಗುವುದೇ ಅದರಲ್ಲಿ ನೂರು ಕಡೇ ಪಕ್ಷ?

ಸೃಷ್ಟಿಸುವೆ ನಿತ್ಯ ನೀ ನೂರು ಹೊಸ ಲೋಕವ
ನೂರು ಲೋಕದಲಿ ನೀಡುವೆ ವಿಭಿನ್ನ ಅನುಭವ

ಭವಿಷ್ಯದ ಬಗ್ಗೆ ಸೃಷ್ಟಿಸುವೆ ಅನಗತ್ಯ ಆತಂಕವ
ಕೋಟಿ ಯೋಚನೆಗಳಲಿ ಆಗುವುದೆಷ್ಟು ವಾಸ್ತವ?

ಲಕ್ಷ ಮಾತುಗಳು ಸೃಷ್ಟಿಸುವವು ಬರೀ ಹಗಲು ಗನಸು
ಆದರೆ ನಾಲ್ಕೇ ಮಾತು ಮಾಡುವವು ಕನಸನ್ನು ನನಸು

ಅನಗತ್ಯ ಸುದ್ದಿಯಲಿ ಮುಳುಗಿ ಮಾಡುವೆ ಬೇಡದ ವ್ಯಥೆ
ನಿನ್ನ ಜೀವನಕ್ಕೆ ಪರಿಣಮಿಸದ ವಿಷಯಕ್ಕೆ ನಿನಗೇಕೆ ಚಿಂತೆ?

ಅರಿ ನಿಜವ, ತೊರಿ ಭ್ರಮೆಯ, ಗಳಿಸು ನೆಮ್ಮದಿಯ
ನಡೆಸು ಜೀವನವ, ಅರಸಿ ಭೌತಿಕ ವಾಸ್ತವಿಕತೆಯ

- ತೇಜಸ್ವಿ .ಎ.ಸಿ

Monday, February 1, 2010

ನನ್ನ ವಿದೇಶ ಪ್ರವಾಸ

ನನ್ನ ವಿದೇಶ ಪ್ರವಾಸ

ದೊರಕ್ಕಿತ್ತು ಒಂದು ಅವಕಾಶವು ನನಗೆ
ಹಾರಿ ಹೋಗಲು ಹೊರದೇಶಕ್ಕೆ ಕೊನೆಗೆ

ತಿಳಿಸಿದೆ ಎಲ್ಲರಿಗೂ ನಾ ಹೋಗುವೆ ಹಾರಿ
ನಡೆಸಿದೆ ಹೊರಡಲು ಭರ್ಜರಿ ತಯಾರಿ

ಸಿದ್ದವಾಯಿತು ನನ್ನ ವೀಸ ಪಾಸ್ ಪೋರ್ಟು
ಆಗಸಕ್ಕೆ ಹಾರಿದೆ ನಾ ಬಿಟ್ಟು ಏರ್ ಪೋರ್ಟು

ಕಂಡು ನಾ ಬೆರಗಾದೆ ಯೂರೋಪಿನ ಸೌಂದರ್ಯ
ಇಡೀ ಭೂಮಿ ಹೊದ್ದಿತ್ತು ಹಸಿರು ರತ್ನ ಗಂಬಳಿಯ

ಇತಿ ಮಿತಿ ಜನಸಂಖ್ಯೆಯ ಆ ಪುಟ್ಟ ದೇಶ
ಸುಖ ಸವಲತ್ತು ಹೊಂದಿದ ಶ್ರೀಮಂತ ದೇಶ

ವಿಶ್ವ ಮಾತಾಡುವ ಆಂಗ್ಲ ಅವರ ಮಾತೃ ಭಾಷೆ
ಶಾಲೆ ಕಲಿಸುವ ಮಾಧ್ಯಮ ಅವರ ಆಡು ಭಾಷೆ

ಜನ ಹಂಬಲಿಸಿ ಹುಡುಕುವ ಬಿಳಿ ಚರ್ಮ ಅವರದ್ದು
ಜನ ಬಯಸುವ ಶುಭ್ರ ಹವೆ, ಹಸಿರು ನೆಲ ಅವರದ್ದು

ಜನ ಆಶಿಸುವ ನೀಳ, ಧೃಡ ಕಾಯ ಅವರದ್ದು
ನೀಲ ಕಂಗಳ, ಲಕ್ಷಣ ಮುಖಚರ್ಯೆ ಅವರದ್ದು

ವಿಶ್ವವನ್ನು ಸುಲಭವಾಗಿ ಸುತ್ತಬಲ್ಲ ಆರ್ಥಿಕತೆ ಅವರದ್ದು
ಸುಖವಾಗಿ ಸುತ್ತಾಡಲು ಬಯಸುವ ಕಾರು ಅವರೆಲ್ಲರದ್ದು

ವಿಶ್ವದೆಲ್ಲೆಡೆ ಸಿಗುತ್ತದೆ ಅವರಿಗೆ ಗೌರವ, ಮಾನ್ಯತೆ
ನೆನೆದೇ ನಾನು ನಮ್ಮಗಳ ಜೀವನದ ಸಾಮಾನ್ಯತೆ

ಮೂರು ಶತಮಾನ ಆಳಿ ಹೊತ್ತು ಹೋದರು ನಮ್ಮ ಸಂಪತ್ತು
ಮೂರೇ ತಿಂಗಳಲ್ಲಿ ಅವರ ಕೆಲಸಗಳಿಗೆ ನಾವು ಕೊಟ್ಟೆವು ಆಪತ್ತು

ಏನಾದರು ಆಗಲಿ ಸುಂದರವಾಗಿತ್ತು ನನ್ನ ಅನುಭವ
ಇಂಥಹ ಪ್ರವಾಸ ತೀರಿಸಿವುದು ದೇಶದ ಹಣದ ಅಭಾವ

- ತೇಜಸ್ವಿ.ಎ.ಸಿ

Thursday, January 21, 2010

ಹುಡುಗಾಟದ ಹುಡುಗ

ಹುಡುಗಾಟದ ಹುಡುಗ
ಬರುತ್ತಿದ್ದವು ಮೊಬೈಲಿಗೆ ಬೇಡವಾದ ಸಂದೇಶ
ಅರ್ಥವಾಗಲಿಲ್ಲ ಅಪರಿಚಿತ ವ್ಯಕ್ತಿಯ ಉದ್ದೇಶ

ಫೋನಾಯಿಸಿದೆ ಆತನಿಗೆ ಕೇಳಲು ಅವನ ದೇಶ
ಗದರಿಸಲು ಬಂದ ಹೇಳದೆ ತನ್ನ ನಿಜ ವೇಷ

ಹೇಳಿದೆ ಆತನಿಗೆ ನಿಲ್ಲಿಸಲು ಅಸಭ್ಯ ಸಂದೇಶ
ನೀಡಿದೆ ಹುಡುಗನಿಗೆ ಸ್ವಲ್ಪ ಸಭ್ಯತೆಯ ಉಪದೇಶ

ಕೇಳಲಿಲ್ಲ ಹುಡುಗ, ಮೀರಿದ ಸಭ್ಯತೆಯ ಎಲ್ಲೆ
ಆತನಿಗೆ ತಿಳಿಸಿದೆ ನಾ ಮುಂದಿನ ಕ್ರಮವ ಬಲ್ಲೆ

ಎರಡು ದಿನ ಕಳೆದರು ನಿಲ್ಲಲಿಲ್ಲ ಆತನ ತರಲೆ
ಎಚ್ಚರಿಸಿ ತಿಳಿಸಿದೆ ನಾ ನಿನ್ನನ್ನು ಬಗ್ಗಿಸಬಲ್ಲೆ

ನೋಡ ನೋಡತ್ತಲೇ ಕೇಳಿಸಿತು ಗಹಿಸಿ ನಗುವ ಸದ್ದು
ನೋಡಿದರೆ ನಗುತ್ತಲಿದ್ದರು ಗೆಳೆಯರು ಬಿದ್ದು ಬಿದ್ದು

ತಿಳಿಯಿತು ನನಗೆ ನಮ್ಮ ಕಚೇರಿಯ ಹುಡುಗರಾಟ
ಗೊತ್ತಿಲ್ಲದೇ ಬಡಿಸಿದ್ದೆ ಎಲ್ಲರಿಗೆ ಹಾಸ್ಯದ ರಸದೂಟ

- ತೇಜಸ್ವಿ . ಎ. ಸಿ

Friday, January 15, 2010

ಆಹಾ!! ಅದ್ಭುತ ಹಣ


ಆಹಾ!! ಅದ್ಭುತ ಹಣ

ಅಬ್ಬಾ ಎಂತಹ ಅದ್ಭುತ ನೀನು
ಮಾನವ ಸೃಷ್ಠಿಯ ನಿಜ ಶಕ್ತಿ ನೀನು

ಎಂಥ ಬಲಹೀನನಲ್ಲೂ ತುಂಬುವೆ ಧೈರ್ಯ
ನಿನ್ನ ಸ್ಪೂರ್ತಿಗೇ ನಡೆವುದು ಜಗದ ಕಾರ್ಯ

ನಿನ್ನ ಸಂಪಾದನೆ ಜನಗಳ ಒಂದು ಗುರಿ
ನಮ್ಮನು ಚುರುಕುಗೊಳಿಸಲು ನೀನೊಂದು ದಾರಿ

ಝಣ ಝಣ ಸದ್ದಿನೊಂದಿಗೆ ಕಿವಿಗಿಡುವೆ ಕಂಪು
ಅನೇಕ ಆತಂಕಗಳಿಗೆ ನೀ ಎರಿಯುವೆ ತಂಪು

ನಿನ್ನ ಶಕ್ತಿಯಿಂದ ಈಡೆರುವುದು ನಮ್ಮಗಳ ಆಸೆ
ನಾವು ಸುರಕ್ಷಿತವಿರಲು ನೀ ಮುಖ್ಯ ಕಾಸೇ

ಜೀವನದಲ್ಲಿ ಪ್ರತಿಯೊಂದು ನೀನೇನಲ್ಲ
ಆದರೂ ಜೀವನದ ಮುಖ್ಯ ಅಂಗ ಆಗಿರುವೆಯಲ್ಲ

ಘಮ ಘಮ ವಾಸನೆಯ ಪ್ರೀತಿಯ ಕಾಸೇ
ಸೇರು ನೀ ಎಲ್ಲಾ ಪ್ರೀತಿಸುವ ಜನಗಳ ಕಿಸೆ.

- ತೇಜಸ್ವಿ.ಎ.ಸಿ

Tuesday, January 12, 2010

ಕನಸಿನ ಕನ್ಯೆಯ ಹುಡುಕಾಟ

ಕನಸಿನ ಕನ್ಯೆಯ ಹುಡುಕಾಟ

ಕಾಲವು ಬಂದಿದೆ ನನಗೆ
ಓಡಾಡಲು ಸಂಗಾತಿಯ ಜೊತೆಗೆ
ಹುಡುಕುವೆ ಕನಸಿನ ಕನ್ಯೆಯನು
ನಿಜ ಮಾಡುವೆ ಬರಿಗನಸಿನ ನಿನ್ನೆಯನು

ಹುಡುಕುತ ಪರಿಪೂರ್ಣ ಕನ್ಯೆಯನು
ಕಂಡೆ ನಾ ಸೃಷ್ಠಿಯ ನಿಯಮವನು
ಪರಿಪೂರ್ಣತೆ ಎಂಬ ಜನರ ಕಲ್ಪನೆ
ಸೃಷ್ಠಿಕರ್ತ ಕೊಟ್ಟ ಮಹತ್ವ ಅಲ್ಪನೆ

ಹೊಸ ಹೊಸ ಊರು ತಿರುಗುತ
ಬಗೆ ಬಗೆ ಜನರಲ್ಲಿ ಬೆರೆಯುತ
ಹಿಂದಿನ ಉಪ್ಪಿಟ್ಟು ಕೇಸರಿ ಬಾತು
ಆಗಿದೆ ಇಂದಿನ ಕಾರ ಬಿಸ್ಕತ್ತು

ಮಜವಾಗಿದೆ ಹುಡುಕುವ ಆಟ
ಆಗಿದೆ ಜೀವನದ ಹೊಸ ಪಾಠ
ಇರುವುದೊಂದೇ ಜೀವನದಲಿ ಅವಕಾಶ
ಎಣಿಸುತ ಕೂರಲಾರೆ ನಾ ಮೀನ-ಮೇಷ

ನಿಜ ಮಾಡುವೆ ನಿನ್ನೆಯ ಕನಸನ್ನು
ಹುಡುಕುವೆ ಕನಸಿನ ಕನ್ಯೆಯನು
ನನಗಿದೆ ನನ್ನ ಆಸೆಯ ಬಗ್ಗೆ ಕಾಜಿ
ಮಾಡಲೊಲ್ಲೆ ಜೀವನದೊಂದಿಗೆ ರಾಜಿ.

- ತೇಜಸ್ವಿ.ಎ.ಸಿ

Saturday, January 9, 2010

ಗೆಳೆಯನ ವಿವಾಹದ ಸುದ್ದಿ

ಗೆಳೆಯನ ವಿವಾಹದ ಸುದ್ದಿ

ಸೋಮವಾರ ಬಂದೆ ನಾ ಕಚೇರಿಗೆ
ರಾಮ ಅಂಟಿಕೊಂಡು ಕೂತಿದ್ದ ಚೇರಿಗೆ

ಏನೋ ರಾಮ ಮುಖದಲ್ಲಿ ಈ ಕಳೆ
ಕೈಗೆ ಸಿಕ್ಕಿತೇನೊ ಹುಡುಗಿಯ ಬಳೆ

ಸಣ್ಣಗೆ ಮುಗುಳ್ನಗೆ ಬೀರಿದ ಗೆಳೆಯ
ಸ್ವಲ್ಪ ದಿನದಲ್ಲಿ ಆಗುವೆನೆಂದ ಅಳಿಯ

ಹಂಚಿದೆನು ಸಿಹಿ ಸುದ್ದಿಯನು ನಮ್ಮ ತಂಡಕೆ
ಬೀಳುವನು ರಾಮ ಮದುವೆಯೆಂಬ ಹೊಂಡಕೆ

ಸಂಭ್ರಮಿಸಿದರು ಅವಿವಾಹಿತ ಮಿತ್ರರು
ವಿವಾಹಿತರು ಒಳಗೆ ಮುಸು ಮುಸು ನಕ್ಕರು

ದುಂಬಾಲು ಬಿದ್ದೆವೆಲ್ಲ ವಿವಾಹ ಔತಣ ಕೂಟಕೆ
ಕಾರ್ಡ್ ಉಜ್ಜಲು ಒಪ್ಪಿದ ರಾಮ ನಮ್ಮ ಕಾಟಕೆ

ಕಲಿಸಿದೆವು ಹಣ ವ್ಯಯಿಸುವ ಹೊಸ ಪಾಠ
ರೂಡಿಸಲೇ ಬೇಕಲ್ಲವೆ ರಾಮ ಈ ಪರಿಪಾಠ

ಶುಭವಾಗಲಿ ರಾಮನ ಹೊಸ ಜೀವನಕೆ
ಗೃಹಸ್ಥಾಶ್ರಮದ ನವ ಸಾಗರದ ಪಯಣಕೆ.

- ತೇಜಸ್ವಿ .ಎ.ಸಿ