Sunday, December 18, 2011

ಪುಸ್ತಕದ ಹುಳು

ಪುಸ್ತಕದ ಹುಳು

ಪುಸ್ತಕ ಮಳಿಗೆ ನೋಡಿದೊಡೆ ಅನುಭವಿಸುವೆ ಸೆಳೆತ
ಕಾಲುಗಳು ತಿರುಗುವುವು ಬಿಡಿಸಿಕೊಳ್ಳಲಾರದೆ ಎಳೆತ

ವಾಹನಗಳ ದಾಟುತ ರಸ್ತೆಯ ಆ ಬದಿಗೆ ತಲುಪಿದೆ
ಪುಸ್ತಕ ಮಳಿಗೆಯ ತಲುಪಿ ಸಂತಸದಿ ಸಂಭ್ರಮಿಸಿದೆ               

ಮಳಿಗೆಯೊಳಗೆ ಹೊಕ್ಕಿದೊಡೆ ಪುಸ್ತಕಗಳ ಕೋಟೆ
ಮಳಿಗೆಯೊಳು ಗಿಜಿಗುಟ್ಟಿತು ಕೊಳ್ಳುವವರ ಭರಾಟೆ

ಪುಸ್ತಕವೆಂಬ ಶಬ್ದವೇ ಆಗುವುದು ಗೌರವಕ್ಕೆ ಪಾತ್ರ
ಆ ಅಭಿಮಾನಕೆ ಮಳಿಗೆಯಾಗಿತ್ತು ಸಂಭ್ರಮದ ಛತ್ರ    

ಕಪಾಟಿನೊಳಗೆ ವಿವಿಧ ವಿಷಯ ಪುಸ್ತಕಗಳ ಸಾಲು   
ಅತ್ಯತ್ತಮ ಹೊತ್ತಗೆಗಳೆಲ್ಲ ಪುಸ್ತಕ ಪ್ರೇಮಿಗಳ ಪಾಲು

ನಾನು ಹುಡುಕಿದೆ ನನ್ನ ನೆಚ್ಚಿನ ವಿಷಯದ ಗ್ರಂಥ
ಅದೂ ಇಟ್ಟಿದ್ದರು ನೋಡಿ ರಿಯಾಯಿತಿ ಬೆಲೆಗಂತ

ಹೀಗೆ ಮನೆಯಲ್ಲಿ ಹಾಗಿವೆ ಹತ್ತು-ಹಲವು ಪುಸ್ತಕಗಳು
ಇದ ನೋಡಿಯೇ ನನ್ನ ಕರೆದರೆನೋ ಪುಸ್ತಕದ ಹುಳು

- ತೇಜಸ್ವಿ .ಎ.ಸಿ

Tuesday, November 1, 2011

ಕಾವ್ಯಧಾರೆ

  ಕಾವ್ಯಧಾರೆ

  ಒಮ್ಮೆ ಎಚ್ಚೆತ್ತು ಹುಡುಕಲಾರಂಭಿಸಿದೆ ನನ್ನೊಳಗಿನ ಕವಿಯ
  ಒಳಗಿನ ಸೃಜನತೆಯ ಬಳಸಿ ನೀಡುತ್ತಿದ್ದ ಭಾಷೆಯ ಸವಿಯ

  ಆ ಸವಿ ರುಚಿಯ ಅನುಭವಿಸುವ ಚಪಲ ಮತ್ತೆ ಶುರುವಾಗಿದೆ
  ಅನುಭವದ ಮಾಧುರ್ಯವ ಮೆಲ್ಲುವ ಆಸೆ ಗರಿಗೆದರಿದೆ

  ಮನದೊಡಲಿನ ಲೋಕಕೆ ಬೆಳೆಸುವೆ ನನ್ನ ಪಯಣವ
  ಹಲವು ಅನುಭವಗಳೊಂದಿಗೆ ನಾ ಪಡೆವೆ ಮುದವ

  ನನ್ನೊಳಗಿನ ಮಾಧುರ್ಯವೇ ಮಾತಾಗಿ ಉಲಿಯಲಿ
  ಅನುಭವದ ಸವಿಯನು ಭಾಷೆಯ ರೂಪದಲಿ ಹರಡಲಿ

  ಕಾವ್ಯದ ಮಾಧುರ್ಯವೇ ನಿನ್ನ ಅಭಿಮಾನಿ ನಾನು
  ನಿನ್ನ ಕಂಪನು ಪಸರಿಸಿ ಮನವ ತಿಳಿಗೊಳುಸುವೆನು

  ಕನ್ನಡ ಪದಗಳ ಮೆರುಗಿನೊಡೆ ನಿನ್ನ ಅಲಂಕರಿಸುವೆ
  ಕನ್ನಡ ಅಕ್ಷರ ಮಾಲೆಯೊಡು ನಿನ್ನ ಆಲಂಗಿಸುವೆ

  ಕನ್ನಡ ಕಾವ್ಯದ ಸೇವೆಯಲ್ಲಿ ಪಡೆವೆ ನಾ ಸಂತಸವ 
  ಕಾವ್ಯಧಾರೆಯಲಿ ಉಣಬಡಿಸುವೆ ಎಲ್ಲರಿಗೂ ನವರಸವ

 - ತೇಜಸ್ವಿ.ಎ.ಸಿ

Saturday, May 14, 2011

ಮದುವೆ ಆಮಂತ್ರಣ


ಮದುವೆ ಆಮಂತ್ರಣ


ಗ್ರೀಷ್ಮ ಋತುವಿನ ಪುಷ್ಪಗಳ ಮೆರಗಿನೊಡೆ 
ಜ್ಯೇಷ್ಠ ಮಾಸದ ಹೊಸತನದ ಹೊಸಲಿನಲಿ
ವಿವಾಹ ಮಂಟಪದಿ, ಮಂಗಳ ವಾದ್ಯದೊಳು
ಗೃಹಸ್ಥಾಶ್ರಮವ ಪ್ರವೇಶಿಸುವೆ ನಾನಿಂದು

ನನ್ನ ಮನದ ಹೂದೋಟದ ಸುಂದರ ಶ್ವೇತ
ಪುಷ್ಪಗಳಿಗೆ ತೇಜಸ್ಸಾಗುವ ಮಧುರ ದಿನ     
ನಮ್ಮೀ ಜೀವನದ ಶುಭಸಂದರ್ಭಕೆ ನಮ್ಮನು
ಹರಸಲು ಮದುವೆಗೆ ಬನ್ನಿರಿ ನೀವೆಲ್ಲ, ನಿಮ್ಮ
ಆಗಮನದೊಂದಿಗೆ ಸಂತಸ ತನ್ನಿರಿ ನಮಗೆಲ್ಲ

- ತೇಜಸ್ವಿ.ಎ.ಸಿ

Sunday, February 13, 2011

ಸುಪ್ರಭಾತ

  ಸುಪ್ರಭಾತ

 ಸಣ್ಣಗಿನ ಚುಮು ಚುಮು ಚಳಿಯಲಿ
 ಸಾಲು ಸಾಲಿನ ಹಕ್ಕಿಗಳ ಚಿಲಿಪಿಲಿ,
 ಸಣ್ಣನೆ ಬೆಳಕಿನ ಬಾನಿಗೆ ಸುಂದರ
 ಬಾನಾಡಿಗಳ ತೋರಣದ ಸಿಂಗಾರ

 ಸುತ್ತಣವು ತಿಳಿ ಮಂಜು ಮುಸುಕಿರಲು
 ಭುವಿಯ ಮೇಲೆಲ್ಲಾ ಇಬ್ಬನಿಯ ಹಾಸು
 ಪ್ರಾತಃಕಾಲದ ತಂಪಾದ ತಂಗಾಳಿಯಲಿ
 ಹಕ್ಕಿಗಳ ಕಲರವ ಊರಿಗೆಲ್ಲ ಸುಪ್ರಭಾತ

 ತೆಂಗಿನಗರಿಗಳ ನಡುವೆ ಮಿಂಚುವ ಎಳೆ
 ನೇಸರನ ಕಿರಣಗಳು, ಬೆಚ್ಚನೆಯ ಹಿತವ
 ನೀಯುತ, ಉಲ್ಲಾಸಭರಿತ ನವ ದಿನದ
 ಆರಂಭವ ಸೂಚಿಸಿ ಶುಭವ ಕೋರಿತು

 ಪ್ರಭೆಯ ಸೂಸುತ ಪ್ರಭಾಕರನುದಯಿಸಿ
 ತನ್ನೆಳೆಯ ಕಿರಣಗಳ ಮುಚ್ಚಿದ ನಯನಕೆ
 ತಾಕಿಸಿ, ಶಯನದಲ್ಲಿದ್ದ ಜೀವಿಗಳನ್ನೆಲ್ಲ
 ಎಬ್ಬಿಸುತ ಧರೆಗೆಳಿದನೋ ಸೂರ್ಯರಶ್ಮಿ.

 - ತೇಜಸ್ವಿ .ಎ.ಸಿ

Wednesday, February 9, 2011

ಸಾಹಿತ್ಯ ಸಮ್ಮೇಳನ

ಸಾಹಿತ್ಯ ಸಮ್ಮೇಳನ

ಊರಿನೆಲ್ಲಾ ದಾರಿಗಳು ಕರೆದೊಯ್ದವು ಒಂದೆಡೆಗೆ
ಎಲ್ಲಾ ಹಾದಿಗಳು ಸೇರುತ್ತಿದ್ದವು ಸಮ್ಮೇಳನದೆಡೆಗೆ

ಹಾದಿಯ ಉದ್ದಕ್ಕೂ ಸವಿದದ್ದು ಕನ್ನಡದ ಕಂಪು
ಅಂದಿನ ಕನ್ನಡದ ಹಬ್ಬ ನೀಡಿತ್ತು ಕಣ್ಣಿಗೆ ತಂಪು

ಕನ್ನಡ ರಾಜ ಕುಟುಂಬಕ್ಕಂದು ಭವ್ಯ ಸುಸ್ವಾಗತ
ಕನ್ನಡಿಗರ ಸ್ವಾಗತಿಸಿ ವೇದಿಕೆಯತ್ತ ಕರೆತರುತ

ಸಂಭ್ರಮಕೆ ಸಜ್ಜಾಗಿತ್ತಂದು ಸಾಹಿತ್ಯ ಸಮ್ಮೇಳನ
ಅಂದು ಊರಿನೆಲ್ಲೆಡೆ ಪಸರಿಸಿತ್ತದು ಕನ್ನಡತನ

ಅಧ್ಯಕ್ಷರ ಭಾಷಣ ನೀಡಿತ್ತು ಉತ್ಸವಕೆ ಚಾಲನೆ
ಮಹಿಳ, ಮಕ್ಕಳ ಸಾಹಿತ್ಯ ನೀಡಿದ್ದವು ಪೋಷಣೆ

ತಂದಿತ್ತು ಕವಿಗಳ ಕವಿಗೋಷ್ಠಿ ಸಮ್ಮೆಳನಕೆ ಕಳೆ
ಕಾವ್ಯಗಳ ಗಾಯನ ತಂದಿತು ಸಂತಸದ ಹೊಳೆ

ಕನ್ನಡ ಸ್ಥಿತಿಯ ಒಳನೋಟವಿತ್ತು ಸಂವಾದದಲ್ಲಿ
ಸಮಾನಾಂತರ ಗೋಷ್ಠಿ ನಡೆದವು ಬೇರೆಡೆಯಲ್ಲಿ

ಇನ್ನೊಂದು ಆಕರ್ಷಣೆಯಾಗಿತ್ತು ಪುಸ್ತಕದ ಮಳಿಗೆ
ಮಳಿಗೆಗಳು ತುಂಬಿದ್ದವು ಸಾಹಿತ್ಯಾಸಕ್ತರ ದಾಳಿಗೆ

ನೆಚ್ಚಿನ ಹಾಸ್ಯ ಸಂವೇದನೆಯಿತ್ತು ಕೊನೆಯ ದಿನ
ಅಂದೇ ಕನ್ನಡದ ಮಹನೀಯರಿಗೆ ಸನ್ಮಾನದ ದಿನ

ಹಾಗೆಯೇ ತೆರೆ ಕಂಡಿತು ಕನ್ನಡ ಸಾಹಿತ್ಯ ಉತ್ಸವ
ಎಲ್ಲಾ ಸಾಹಿತ್ಯ ಪ್ರಿಯರಿಗೆ ಕೊಡುತ ನವ ಉತ್ಸಾಹ

- ತೇಜಸ್ವಿ.ಎ.ಸಿ

Thursday, February 3, 2011

ಕಾಗದದ ನಿರೀಕ್ಷೆಯಲಿ

ಕಾಗದದ ನಿರೀಕ್ಷೆಯಲಿ

ಮನದೊಳು ಮನೆಮಾಡಿದೆ ಚಡಪಡಿಕೆ
ಪ್ರತಿ ಅವಧಿಗೊಮ್ಮೆ ಮುಂಬಾಗಿಲ ಪಕ್ಕದ
ಕಿಟಕಿಯ ಬಳಿ ನಿಂದು ಇಣುಕುವ ಕುತೂಹಲ,
ಬಂದಿರಬಹುದೇ ನನ್ನ ಇನಿಯನ ಕಾಗದ

ಅಂಚೆಯು ಬರುವವರೆಗೂ ಕಾಯಲೊಲ್ಲದು
ತುದಿಗಾಲಲಿ ನಿಂತಿರುವ ನನ್ನೀ ಕಾತರವು,
ಮನೆಯ ಮುಂದಿನ ಕಾಗದದ ಪೆಟ್ಟಿಗೆಯ
ಮತ್ತೊಮ್ಮೆ ತೆರೆದು ಪತ್ರ ಹುಡುಕುವ ಹಂಬಲ

ಅಪರಾಹ್ನದ ವೇಳೆಗೆ ತೀವ್ರವಾಯಿತು ಪತ್ರದ
ತವಕವು, ಆ ವೇಳೆಗೆ ಹರಿದುಬರುವ ಕಾಗದ
ಎಂಬುವ ಕೂಗು ಎನ್ನ ಶ್ರವಣಕೆ ಘಂಟೆ ನಾದ,
ಕೇಳಿ ಬರುವುದೇ ನನಗೆ ಆ ಅಮೃತ ನಾದ

ಮಧ್ಯಾಹ್ನದಿ ತುಸು ಸಮಯದ ಬಳಿಕ ಟಪಾಲಿನ
ಕೂಗು ಕೇಳಿ ಅದು ನನ್ನೀ ಶ್ರವಣಕೆ ಗಾನವಾಗಲು
ನನ್ನೀ ಹೃದಯವು ಸಂಭ್ರಮದಿ ನರ್ತನವಾಡಲು
ಇನಿಯನ ವಿರಹದ ನೋವ ಕಡಿಮೆಮಾಡಲು

- ತೇಜಸ್ವಿ.ಎ.ಸಿ

Sunday, January 23, 2011

ನನ್ನೂರಿಗೆ ಪಯಣ

ನನ್ನೂರಿಗೆ ಪಯಣ


ಗೃಹವಿರಹದ ದುಗುಡವು ಕಾಡಿದೆ ಎನಗೆ
ಮಾತೃವಾತ್ಸಲ್ಯದ ಕೂಗು ತಲುಪಿದೆ ಕಿವಿಗೆ

ಊರಿನ ದಾರಿ ಕೈಚಾಚಿ ಕರೆಯುತಿದೆ ಇಂದು
ಹಬ್ಬದ ನೆಪ ಮಾಡಿ ಮನೆಗೊರಡುವ ಎಂದು

ಮುಂಜಾವಿನ ನಸುಕಿನಲೇ ನಾ ಹತ್ತಿದೆ ರೈಲು
ಕಾಯಲಾರೆ ನಾ ಮನೆಯವರನು ನೋಡಲು

ಬೆಳಗಿನ ಆಹ್ಲಾದದಲಿ ಬೆಚ್ಚನೆ ರೈಲಿನ ಪಯಣ
ಬಿಡಿಸಿಕೊಳ್ಳಲು ಆಗುವುದೇ ನಮ್ಮೂರಿನ ಋಣ

ಪಯಣದ ಹಾದಿಯಲಿ ಸಿಗುವ ಎಲ್ಲಾ ಊರುಗಳು
ಕ್ರಮೇಣವಾಗಿ ಇಳಿಸುವವು ವಿರಹದ ಭಾರಗಳ

ಊರು ಸಮೀಪಿಸಿದಾಗ ಕರೆಯಿತು ಎನ್ನ ಒಲುಮೆ
ಊರನು ತಲುಪಿದೊಡೆ ನಾ ಉತ್ಸಾಹದ ಚಿಲುಮೆ

ಕೈ-ಚೀಲವ ಹೊತ್ತು ನಾ ಹಾಕಿದೆ ಸರ ಸರ ಹೆಜ್ಜೆ
ನನಗೂ ಇಹುವುದು ಕೇವಲ ಎರಡು ದಿನಗಳ ರಜೆ

ಮನೆಯಲಿ ಕಾದಿಹರು ಮನೆಯವರೆಲ್ಲ ನನಗಾಗಿ
ನಾ ಬಂದು ಒತ್ತುವ ಆ ಕರೆಘಂಟೆಯ ಸದ್ದಿಗಾಗಿ

- ತೇಜಸ್ವಿ .ಎ .ಸಿ

Sunday, January 16, 2011

ಸ್ವ-ವಿಮರ್ಶೆ

ಸ್ವ-ವಿಮರ್ಶೆ

ಹಲವು ಕಾರ್ಯಗಳ ಸಾಧಿಸದೆ ವಿಧಿಯಿಲ್ಲ
ಮಹತ್ವದ ಕಾರ್ಯಗಳಲಿ ಗೆಲ್ಲದೆ ಬದುಕಿಲ್ಲ

ಪ್ರಮುಖ ಕೆಲಸಗಳೂ ತೋರುವುದು ಸೋಲು
ನಮ್ಮೆಲ್ಲ ಶ್ರಮಗಳ ಅವು ಮಾಡುವವು ಪೋಲು

ಒಮ್ಮೆ ಸೋತರೆ ಆಗುವುದು ಚಿಕ್ಕ ಪರಿಣಾಮ
ಪುನರಾವರ್ತಿತ ತಪ್ಪು ಬೀರುವುದು ದುಷ್ಪರಿಣಾಮ

ಅದಕ್ಕೆ ನಾವು ಆರಂಭಿಸಬೇಕು ಹೊಸ ಪ್ರಕ್ರಿಯೆಯ
ಅಪಜಯವ ವಿಮರ್ಶಿಸುವ ಉತ್ತಮ ಪದ್ದತಿಯ

ಮಾಡಿದರೆ ವಸ್ತುನಿಷ್ಠ, ಕ್ರಮಬದ್ದ ವಿಮರ್ಶೆಯ
ತಿಳಿವುದು ಸೋಲಿಗೆ ಕಾರಣವಾದ ಅಂಶಗಳ

ಇದರಿಂದ ತಿಳಿವುದು ಕಾರ್ಯದಲಿ ಆದ ತಪ್ಪುಗಳು
ಹಾಗೆಯೇ ಅವ ಸರಿಪಡಿಸಲು ಬೇಕಾದ ದಾರಿಗಳು

ರೂಪಿಸೋಣ ಎಲ್ಲಾ ಸರಿಪಡಿಸಲು ಕಾರ್ಯಕ್ರಮಗಳ
ಕಾರ್ಯಶೀಲನರಾಗಿ ಚುರುಕಾಗಿ ಮಾಡೋಣ ಕೆಲಸಗಳ

- ತೇಜಸ್ವಿ ಎ ಸಿ

Sunday, January 9, 2011

ಕಾಲೇಜಿನ ಕೊನೆಯ ದಿನ

ಕಾಲೇಜಿನ ಕೊನೆಯ ದಿನ
ಮನದಲ್ಲಿ ಒಮ್ಮೆ ನೆನೆದರೆ ಮನ
ಹಗುರಾಗುವ ಸ್ವಾತಂತ್ರ್ಯದ ನಗು,
ಮತ್ತೊಮ್ಮೆ ಸ್ನೇಹಿತರ ನೋಡಿದೊಡೆ
ಮತ್ತೆ ಹೃದಯವಾಗುವುದು ಭಾರ,
ಕಣ್ಣಿನಂಚಿನಲಿ ಅರೆಯದೆ ಮಡುಗಟ್ಟುವ
ಉಪ್ಪಾದ ಹನಿಗಳ ಭಾಷೆ.

ಒಮ್ಮೆ ಯೌವನದ ಈ ಉತ್ಸಾಹದಲಿ
ಸ್ವಾತಂತ್ರ್ಯದ ರೆಕ್ಕೆ ಬಿಚ್ಚಿ ಹಾರಿ,
ಪ್ರಪಂಚವೆಲ್ಲ ಜಯಸುವ ವಾಂಛೆ.
ಇನ್ನೊಂದೆಡೆ ಬೀಳ್ಕೊಡುತ ಹಳೆಯ
ಕಾಲೇಜಿನ ದಿನಗಳ ನೆನಪಿಸಿ,
ಭಾವಾನಾತ್ಮಕ ಮಾಡುವ ಗೆಳೆಯರು

ಕೈಯಲ್ಲಿ ಹಿಡಿದ ಆಟೋಗ್ರಾಫಲ್ಲಿ
ತುಂಬತೊಡಗಿದವು, ಸೆಳೆತದ
ಅದಮ್ಯ ಭಾವನೆಗಳ ಮಾತುಗಳು,
ಶುಭ ಹಾರೈಕೆಗಳ ವಿನಿಮಯ.
ಮುಂದೆ ಎಂದು ನಮಗೆ ಸಿಗುವರು
ಇವರೆಲ್ಲರೂ ಹಾಗು ಇವರ ಸ್ನೇಹ?

ಮುಂದೆ ನಿಂತಿದೆ ಸ್ವಾತಂತ್ರ್ಯದ
ನಗು ನನ್ನ ಕರೆಯುತ ಆ ಹುಚ್ಚು
ಕನಸುಗಳ ಸಾಧನೆಗೆ ಆಹ್ವಾನಿಸುತ,
ನಾ ಹೊರಟಿರುವೆ ನನ್ನೆಲ್ಲ ಆಸೆಗೆ
ವಾಸ್ತುಶಿಲ್ಪಿಯಾಗಿ. ಮುಂದೆ ಕಾಣುವ
ಕಾಮನಬಿಲ್ಲಿಗೆ ನನ್ನದೇ ಬಣ್ಣ ಹಚ್ಚಲು.

- ತೇಜಸ್ವಿ.ಎ.ಸಿ